ಹೋದವಾರ 5 ಚಿತ್ರ: ಎಲ್ಲಾ ಗೋವಿಂದಾಯ ನಮಃ

ಬಿಡುಗಡೆಯಾದ ಹೊಸ ಪ್ರೇಮ ಪುರಾಣ, ಸಂಸಾರದಲ್ಲಿ ಗೋಲ್ಮಾಲ್, ಶ್ರೀ ಚೌಡೇಶ್ವರಿ ಮಹಿಮೆ, ಒಲವಿನ ಓಲೆ ಮತ್ತು ಕಟ್ಟ ಕೊನೆಯದಾಗಿ ಆಶಾಕಿರಣಗಳು ಚಿತ್ರದ ನಿರ್ಮಾಪಕರು ಆಕಾಶ ನೋಡುವಂತಾಗಿದೆ ಎನ್ನುತ್ತಿದೆ ಗಾಂಧಿನಗರದ ಬಾಕ್ಸ್ ಆಫೀಸ್ ರಿಪೋರ್ಟ್.
ಇತ್ತೀಚೆಗೆ ಇಂಥದ್ದೊಂದು ದೊಡ್ಡ ಸಾಹಸ ನಮ್ಮ ಚಿತ್ರರಂಗದಲ್ಲಿ ನಡೆದಿರಲಿಲ್ಲ. ವಾರಕ್ಕೆ ಮೂರು-ಎರಡು-ನಾಲ್ಕು ಚಿತ್ರಗಳು ಬಿಡುಗಡೆಯಾಗಿದ್ದು ಇದೆ. ಅದರಲ್ಲಿ ಒಂದೋ ಎರಡೋ ಸಕ್ಸಸ್ ಕಂಡು ಉಳಿದವು ಥಿಯೇಟರಿನಿಂದ ಎತ್ತಂಗಡಿ ಆಗಿದ್ದೂ ಇದೆ.
ಆದರೆ ಐದಕ್ಕೆ ಐದೂ ಚಿತ್ರಗಳು ಮನೆ ಸೇರಿದ್ದು ಇದೇ ಮೊದಲ ಬಾರಿಗೆ ಇತಿಹಾಸ ಎನ್ನಬಹುದು. ಖಂಡಿತ ಇದು ವ್ಯಂಗ್ಯವಲ್ಲ, ವಾಸ್ತವತೆ. ಚಿತ್ರರಂಗದಲ್ಲಿ ಈ ಮಟ್ಟದ ಸೋಲು ಇತ್ತೀಚಿನ ವರ್ಷಗಳಲ್ಲಿ ಕಂಡಿರಲಿಲ್ಲ.
ಸಾಯಿಪ್ರಕಾಶ್ ನಿರ್ದೇಶನಕ್ಕೆ ಬೆಲೆ ಸಿಗಲಿಲ್ಲ. ಚೌಡೇಶ್ವರಿಯ ಮಹಿಮೆ ಜನಕ್ಕೆ ಮುಟ್ಟಲಿಲ್ಲ. ಪ್ರೇಮ ಪುರಾಣ ಚಿತ್ರಕ್ಕೆ ಸಂಬಂಧಪಟ್ಟಂತೇ ನಿರ್ಮಾಪಕರು ಪೂಜಾಗಾಂಧಿಯ ಮೇಲೆ ದೂರು ಹೇಳಿದ್ದೇ ಬಂತು.
ಒಲವಿನ ಓಲೆ ಚಿತ್ರದ ನಾಯಕಿ ನೇಹಾ ಪಾಟೀಲ್ ಒಂದೇ ಕಣ್ಣಲ್ಲಿ ನೀರು ಸುರಿಸಿದ್ದೇ ಬಂತು, ಗಾಸಿಪ್ ಮಾಡಿದ್ದೇ ಬಂತು. ಆಶಾಕಿರಣಗಳು ಚಿತ್ರದಲ್ಲಿ ದುನಿಯಾ ರಶ್ಮಿ ರೀ ಎಂಟ್ರಿ ಕೊಟ್ಟಿದ್ದು ಯಾವುದೇ ರೀತಿಯ ಅಡ್ಡ ಅಥವಾ ಉದ್ದ ಪರಿಣಾಮ ಬೀರಲಿಲ್ಲ.
ಹೀಗಾದರೆ ಮುಂದಿನ ಗತಿ ಏನ್ ಶಿವಾ? ಪೋಸ್ಟರ್ ಕಾಸು ಬಂದಿಲ್ಲಾಂದ್ರೆ ಹೆಂಗಪ್ಪಾ...ಜೀವನ.


Click it and Unblock the Notifications











