ಮತ್ತೆ ಸುದ್ದಿಯಲ್ಲಿ ಮೈಸೂರಿನ ರಂಗಾಯಣ: ‘ಟಿಪ್ಪು’ ನಾಟಕದ ಸುತ್ತ ವಿವಾದಗಳ ಹುತ್ತ
ಇತ್ತೀಚಿನ ಕೆಲ ವರ್ಷದಿಂದ ಮೈಸೂರಿನ ರಂಗಾಯಣ ಪದೇ-ಪದೇ ಸುದ್ದಿಗೆ ಬರುತ್ತಲೇ ಇದೆ. ಇದೀಗ ರಂಗಾಯಣ ಮತ್ತೆ ಸುದ್ದಿಗೆ ಬಂದಿರುವುದು ಟಿಪ್ಪು ಸುಲ್ತಾನನ ಕಾರಣಕ್ಕೆ.
ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರಚಿಸಿ ನಿರ್ದೇಶಿಸುತ್ತಿರುವ 'ಟಿಪ್ಪು ಕನಸುಗಳು' ನಾಟಕ ಇದೀಗ ಪರ-ವಿರೋಧ ಚರ್ಚೆ ಹುಟ್ಟು ಹಾಕಿದೆ. ಇತ್ತೀಚಿಗೆ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅಡ್ಡಂಡ ಸಿ.ಕಾರ್ಯಪ್ಪ, ''ಟಿಪ್ಪು ಬಗ್ಗೆ ಕೃತಿ ಬರೆದಿದ್ದೇನೆ. ಬೆಂಗಳೂರಿನ ಆಯೋಧ್ಯಾ ಪ್ರಕಾಶನ ಪ್ರಕಟಿಸಿದ್ದು, ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಮುನ್ನುಡಿ ಬರೆದಿದ್ದಾರೆ. ನ.13ರಂದು ನಡೆಯುವ ಕಾರ್ಯಕ್ರಮದಲ್ಲಿ ಅವರೇ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಜೊತೆಗೆ ನ.20ರಂದು ಸಂಜೆ 6 ಗಂಟೆಗೆ ನಾಟಕದ ಪ್ರಥಮ ಪ್ರದರ್ಶನ ರಂಗಾಯಣದ ಭೂಮಿಗೀತದಲ್ಲಿ ನಡೆಯಲಿದೆ. ನಂತರ ನ.21, 24, 26, 27, 30 ಹಾಗೂ ಡಿ.4 ರಂದು ಈ ನಾಟಕ ಪ್ರದರ್ಶನ ಇರಲಿದೆ'' ಎಂದು ಮಾಹಿತಿ ನೀಡಿದ್ದರು. ಇದೀಗ ಟಿಪ್ಪು ಕೃತಿ ಹಾಗೂ ನಾಟಕವೇ ವಿವಾದದ ವಸ್ತುವಾಗಿದೆ.
ಗುರುವಾರ ಮೈಸೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಅಡ್ಡಂಡ ಕಾರ್ಯಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದು, 'ಇವರು ರಂಗಾಯಣದ ನಿರ್ದೇಶಕ ಅಲ್ಲ, ಅಡ್ನಾಡಿ ಕಾರ್ಯಪ್ಪ' ಎಂದು ಜರಿದಿದ್ದಾರೆ.
'ಅಡ್ಡಂಡ ಕಾರ್ಯಪ್ಪ ಪುಸ್ತಕ ಬರೆಯಲು ಟಿಪ್ಪು ಕಾಲದಲ್ಲಿ ಅವನು ಹುಟ್ಟಿದ್ನಾ? ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನವನ್ನು ನಾನು ಖಂಡಿಸುತ್ತೇನೆ'' ಎಂದು ಹರಿಹಾಯ್ದರು. 'ನಾನು ಯಾವ ಪಕ್ಷದಲ್ಲಿ ಇದ್ದರೂ ಟಿಪ್ಪು ಬಗ್ಗೆ ಮಾತನಾಡುತ್ತೇನೆ. ಟಿಪ್ಪು ಸ್ವಾಭಿಮಾನಿ ಕನ್ನಡಿಗ, ಮೈಸೂರು ಹುಲಿ' ಎಂದು ಹೊಗಳಿದ್ದಾರೆ.

ಈ ಹಿಂದೆಯೂ ಬಹುರೂಪಿ ರಂಗೋತ್ಸವದ ವಿಚಾರವಾಗಿ ಅಡ್ಡಂಡ ಕಾರ್ಯಪ್ಪ ಹಾಗೂ ಕೆಲವು ಸಾಹಿತಿಗಳ ನಡುವೆ ಟೀಕೆಗಳು, ಪ್ರತಿಭಟನೆಗಳು ನಡೆದಿದ್ದವು. ಇದೀಗ ಮತ್ತೆ ಬಹುರೂಪಿ ನಾಟಕೋತ್ಸವ ಬಂದಿದ್ದು, ಡಿಸೆಂಬರ್ 08 ರಿಂದ ನಾಟಕೋತ್ಸವ ನಡೆಯಲಿದೆ.


Click it and Unblock the Notifications











