ಖ್ಯಾತ ಕಿರುತೆರೆ ನಟ ಶ್ರೀನಾಥ್ ವಸಿಷ್ಠಗೆ ಮೋಸ
ಮೈಸೂರು, ಫೆಬ್ರವರಿ 28 : ವಿದೇಶಿ ಪ್ರವಾಸಕ್ಕೆ ಕರೆದೊಯ್ಯುವುದಾಗಿ ಹೇಳಿ ಹಣ ಪಡೆದು ಖಾಸಗಿ ಏಜೆನ್ಸಿಯೊಂದು ಚಲನಚಿತ್ರ ಹಾಗೂ ಕಿರುತೆರೆ ನಟ ನಿರ್ದೇಶಕ ಶ್ರೀನಾಥ್ ವಸಿಷ್ಠ ಹಾಗೂ ಅವರ ಸ್ನೇಹಿತರಿಗೆ ವಂಚಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ಗೋ ಎಂಜಾಯ್ ಹಾಲಿಡೇಸ್ ಎಂಬ ಟ್ರಾವೆಲ್ ಏಜೆನ್ಸಿ ಮಾಲೀಕ ಚಂದ್ರಶೇಖರ್ ಎಂಬುವರೇ ಶ್ರೀನಾಥ್ ವಸಿಷ್ಠ ಹಾಗೂ ಅವರ 19 ಸ್ನೇಹಿತರನ್ನು ವಂಚಿಸಿದ್ದಾರಂತೆ. ವಸಿಷ್ಠ ಅವರು ನೀಡಿರುವ ದೂರಿನಂತೆ, ಬೆಂಗಳೂರಿನ ರೋಟರಿ ಜ್ಞಾನೋದಯ ಹಾಗೂ ರೋಟರಿ ಗ್ರೇಟರ್ ಕ್ಲಬ್ ವತಿಯಿಂದ ವಸಿಷ್ಠ ಹಾಗೂ ಅವರ ಸ್ನೇಹಿತರು ಸಿಂಗಪುರ ಹಾಗೂ ರಾಯಲ್ ಕೆರಿಬಿಯನ್ ಗೆ ಪ್ರವಾಸ ತೆರಳಲು ನಿರ್ಧರಿಸಿದ್ದರು. ಅದರಂತೇ ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದ ಸಂದರ್ಭ ಅವರಿಗೆ ಗೋ ಎಂಜಾಯ್ ಹಾಲಿಡೇಸ್ ಎಂಬ ಟ್ರಾವೆಲ್ ಏಜೆನ್ಸಿ ಗೊತ್ತಾಗಿದೆ. ಹೀಗಾಗಿ ಅವರು ಏಜೆನ್ಸಿಯ ಮಾಲೀಕ ಚಂದ್ರಶೇಖರ್ ಅವರನ್ನು ಭೇಟಿ ಮಾಡಿದ್ದಾರೆ. ನಂತರ ಪ್ರವಾಸಕ್ಕೆ ಹಣ ಕೂಡ ನಿಗದಿಯಾಗಿದೆ.
7 ರಾತ್ರಿ 8 ದಿನದ ಪ್ರವಾಸಕ್ಕೆ ಒಬ್ಬರಿಗೆ ಪ್ರವಾಸಕ್ಕೆ ಒಟ್ಟು 58 ಸಾವಿರ ರೂ ನಿಗದಿ ಮಾಡಿದ್ದಾರೆ. ನಂತರ 20 ಮಂದಿ ಸೇರಿ ಚಂದ್ರಶೇಖರ್ ಅವರಿಗೆ 8 ಲಕ್ಷ 90 ಸಾವಿರ ರೂ ಹಣವನ್ನು ನೀಡಲಾಗಿತ್ತು ಎಂದು ವಸಿಷ್ಠ ಅವರು ದೂರಿನಲ್ಲಿ ತಿಳಿಸಿದ್ದಾರೆ. ನಂತರದ ದಿನಗಳಲ್ಲಿ ಹಣ ಪಡೆದ ಚಂದ್ರಶೇಖರ್ ಅವರು ನಮಗೆ ವಿಮಾನದ ಟಿಕೆಟ್ ಗಳನ್ನು ಕಳುಹಿಸಿದರು. ಆದರೆ, ಅವು ಅಸಲಿಯಲ್ಲ ಎಂಬುದು ನಮಗೆ ತಿಳಿದು ಬಂತು. ಈ ಸಂಬಂಧ ಆತನನ್ನು ವಿಚಾರಿಸಿದ ವೇಳೆ ಸಾಕಷ್ಟು ಸಬೂಬುಗಳನ್ನು ಹೇಳಿದರು. ನಮ್ಮ ಒತ್ತಾಯದ ಮೇರೆಗೆ 3 ಲಕ್ಷ ನಷ್ಟು ಹಣ ಕೂಡ ವಾಪಸ್ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.

ಇದಾದ ಬಳಿಕ ಉಳಿದ ಹಣವನ್ನು ವರ್ಷವಾದರೂ ಅವರು ವಾಪಸ್ ನೀಡಲಿಲ್ಲ. ಈ ನಡುವೆ ನಮಗೆ ವಕೀಲರಿಂದ ನೋಟಿಸ್ ನೀಡಿರುವ ಅವರು ನಾನು ಇನ್ಸಾಲ್ವೆನ್ಸಿ ಘೋಷಣೆ ಹೇಳಿಕೊಳ್ಳುತ್ತಿದ್ದು, ಹಣ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ಆತಂಕಗೊಂಡ ನಾನು ಈ ಸಂಬಂಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳು ನನಗೆ ನ್ಯಾಯ ಕೊಡಿಸುವುದರ ಜೊತೆಗೆ ಮುಂದೆ ಚಂದ್ರಶೇಖರ್ ಅವರಿಂದ ಬೇರಾರು ವಂಚನೆಗೊಳಗಾದ ಎಚ್ಚರ ವಹಿಸಬೇಕು ಎಂದು ತಿಳಿಸಿದರು.


Click it and Unblock the Notifications











