ಗುಂಡ್ಲುಪೇಟೆ: ದರ್ಶನ್ ಮೇಲೆ ಚಪ್ಪಲಿ ಎಸೆತ ಖಂಡಿಸಿ ಅಭಿಮಾನಿಗಳ ಪ್ರತಿಭಟನೆ
'ಕ್ರಾಂತಿ' ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಹೊಸಪೇಟೆಗೆ ತೆರಳಿದ್ದ ವೇಳೆ ನಟ ದರ್ಶನ್ ಮೇಲೆ ಕಿಡಿಗೇಡಿಯೊಬ್ಬ ಚಪ್ಪಲಿ ಎಸೆದ ಘಟನೆಯನ್ನು ಚಿತ್ರರಂಗ, ದರ್ಶನ್ ಅಭಿಮಾನಿಗಳು ಹಾಗೂ ಸಿನಿಮಾ ಪ್ರೇಮಿಗಳು ತೀವ್ರವಾಗಿ ಖಂಡಿಸಿದ್ದಾರೆ.
ತಮ್ಮ ಮೆಚ್ಚಿನ ನಟನ ಮೇಲೆ ಚಪ್ಪಲಿ ಎಸೆದಿದ್ದನ್ನು ವಿರೋಧಿಸಿ ದರ್ಶನ್ರ ಅಭಿಮಾನಿಗಳು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ. ಅಂತೆಯೇ, ದರ್ಶನ್ ಮೇಲೆ ಚಪ್ಪಲಿ ಎಸೆದಿರುವ ಘಟನೆ ಖಂಡಿಸಿ ಪಟ್ಟಣದಲ್ಲಿ ದರ್ಶನ ಅಭಿಮಾನಿಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಗುಂಡ್ಲುಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನೆ ಜಾಥಾ ಮೆರವಣಿಗೆ ಹೊರಟ ದರ್ಶನ್ ಅಭಿಮಾನಿಗಳು ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಎಂಡಿಸಿಸಿ ಬ್ಯಾಂಕ್ ವೃತ್ತದ ಮುಂಭಾಗ ಮಾನವ ಸರಪಳಿ ನಿರ್ಮಿಸಿ ನಂತರ ತಾಲೂಕು ಕಚೇರಿ ಮುಂದೆ ಜಮಾಯಿಸಿದರು. ಈ ವೇಳೆ ಚಪ್ಪಲಿ ಎಸೆದಿರುವ ಕಿಡಿಗೇಡಿಯನ್ನು ಬಂಧಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾ ನಿರತ ದರ್ಶನ ಅಭಿಮಾನಿಗಳು, ದರ್ಶನ್ ಕನ್ನಡದ ಮೇರು ನಟನಾಗಿದ್ದು, ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇಂತಹ ಮೇರು ನಟನಿಗೆ ಚಪ್ಪಲಿ ಎಸೆದಿರುವುದು ಕ್ರಮ ಸರಿಯಲ್ಲ. ಘಟನೆಯಿಂದ ದರ್ಶನ್ ಅಭಿಮಾನಿಗಳ ಮನಸ್ಸಿಗೆ ನೋವುಂಟಾಗಿದೆ. ಆದ್ದರಿಂದ ಕಿಡಿಗೇಡಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಕನ್ನಡ ಚಿತ್ರ ರಂಗದ ಪ್ರತಿಯೊಬ್ಬ ನಟರು ಸಹ ಕನ್ನಡಕ್ಕೆ ಅವಿಸ್ಮರಣೀಯ ಕೊಡುಗೆ ಸಲ್ಲಿಸುತ್ತಲೆ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡದ ಯಾವೊಬ್ಬ ನಟನ ಮೇಲು ಇಂತಹ ಕೃತ್ಯ ನಡೆಯದಂತೆ ಸರ್ಕಾರ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಪ್ರತಿಭಟನಾನಿರತ ದರ್ಶನ್ ಅಭಿಮಾನಿಗಳು ತಹಸೀಲ್ದಾರ್ ಸಿ.ಜೆ.ರವಿಶಂಕರ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯ ಕಿರಣ್ ಗೌಡ, ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಮಾಡ್ರಹಳ್ಳಿ ಮಹೇಶ್, ಕರವೇ ರಾಜೇಂದ್ರ ವಿ.ನಾಯಕ್, ಜಾರಕಿಹೊಳಿ ಬ್ರಿಗೇಡ್ ಸಂಸ್ಥಾಪಕ ಗೋವಿಂದರಾಜ್ ಸೇರಿದಂತೆ ದರ್ಶನ್ ಅಭಿಮಾನಿಗಳು ಹಾಜರಿದ್ದರು.


Click it and Unblock the Notifications











