'ಗುಂಡು+ರಾವ್' ಎಕ್ಸ್ ಸಿಎಂ ಗೂಡಾರ್ಥ ಬಿಚ್ಚಿಟ್ಟ ತ್ರಿಶೂಲ್
ಸ್ಯಾಂಡಲ್ ವುಡ್ ನಲ್ಲಿ ಈಗ ಮತ್ತೊಂದು ಶೀರ್ಷಿಕೆ ವಿವಾದ ತಲೆದೋರಿದೆ. 'ಸಿಲ್ಕ್ ಸಖತ್ ಹಾಟ್' ಚಿತ್ರದ ಮೂಲಕ ಗಾಂಧಿನಗರಕ್ಕೆ ವೀಣಾ ಮಲಿಕ್ ರನ್ನು ಕರೆತಂದ ನಿರ್ದೇಶಕ ತ್ರಿಶೂಲ್ ಅವರು ಕೈಗೆತ್ತಿಕೊಂಡಿರುವ ಹೊಸ ಚಿತ್ರ 'ಗುಂಡು+ರಾವ್' ಈಗ ವಿವಾದ ಕೇಂದ್ರಬಿಂದು.
ಈ ಚಿತ್ರದ ಅಡಿಬರಹ 'ಎಕ್ಸ್ ಸಿಎಂ' ಎಂಬುದು ಇನ್ನೂ ಇಂಟರೆಸ್ಟಿಂಗ್ ಆಗಿದೆ. ಹಾಗಾಗಿ ಈ ಚಿತ್ರ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಕುರಿತದ್ದೇ ಆಗಿರಬಹುದು ಎಂಬುದು ಎಲ್ಲರ ಎಣಿಕೆ. ಆದರೆ ಈ ಮಾತನ್ನು ತ್ರಿಶೂಲ್ ಅವರು ಮಾತ್ರ ಸುತಾರಾಂ ಒಪ್ಪುತ್ತಿಲ್ಲ. ಇದೊಂದು ಗುಂಡುಪ್ರಿಯ ರಾವ್ ಎಂಬುವವರ ಕಥೆ. ಹಾಗಾಗಿ ತಮ್ಮ ಚಿತ್ರಕ್ಕೆ ಗುಂಡೂರಾವ್ ಎಂದು ಹೆಸರಿಟ್ಟಿದ್ದಾಗಿ ತಿಳಿಸಿದ್ದಾರೆ. [ಸಿಲ್ಕ್ ಸಖತ್ ಹಾಟ್ ಚಿತ್ರ ವಿಮರ್ಶೆ]
ಈ ಶೀರ್ಷಿಕೆಯನ್ನು ಯಾವುದೇ ಕಾರಣಕ್ಕೂ ಚಿತ್ರಕ್ಕಿಡಲು ಅನುಮತಿ ಕೊಡಬಾರದು ಎಂದು ಬೆಂಗಳೂರು ಮಹಾನಗರ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಮೋಹನ್ಕುಮಾರ್ ನೇತೃತ್ವದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಮನವಿ ಮಾಡಿದೆ.

ಈ ಬಗ್ಗೆ ಫಿಲ್ಮಿಬೀಟ್ ಕನ್ನಡ ನಿರ್ದೇಶಕ ತ್ರಿಶೂಲ್ ಅವರನ್ನು ಮಾತಿಗೆಳೆದಾಗ, "ಚಿತ್ರದ ಶೀರ್ಷಿಕೆಯನ್ನು ಕೈಬಿಡುತ್ತಿದ್ದೇನೆ. ಚಿತ್ರದ ಕಥೆ ಗುಂಡೂರಾವ್ ಅವರಿಗೆ ಸಂಬಂಧಿಸಿದಲ್ಲ ಎಂದು ಅವರಿಗೆ ಮನವರಿಕೆ ಮಾಡಿದೆ. ಆದರೂ ಅವರು ಒಪ್ಪಲಿಲ್ಲ. ಅವರ ಮನಸ್ಸಿಗೆ ಹಿಡಿಸಲಿಲ್ಲ, ತೀರಾ ನೋವಾಗುತ್ತದೆ ಎಂಬ ಕಾರಣಕ್ಕೆ ಆ ಶೀರ್ಷಿಕೆಯನ್ನು ಕೈಬಿಡುತ್ತೇನೆ" ಎಂದರು.
ಇಷ್ಟಕ್ಕೂ 'ಎಕ್ಸ್ ಸಿಎಂ' ಅಂದರೆ ಯಾರು ಎಂಬ ಫಿಲ್ಮಿಬೀಟ್ ಕನ್ನಡದ ಪ್ರಶ್ನೆಗೆ ಅವರು ಉತ್ತರಿಸುತ್ತಾ, "ಎಕ್ಸ್ ಸಿಎಂ ಎಂದರೆ ಎಲ್ಲರೂ ತಿಳಿದಂತೆ ಮಾಜಿ ಮುಖ್ಯಮಂತ್ರಿ ಅಲ್ಲ. 'ಎಕ್ಸ್ ಲೆಂಟ್ ಕಾಮಿಡಿ ಮ್ಯಾನ್' ಅಂಥ. ಕುಡಿತದಲ್ಲೂ ಎಲ್ಲರನ್ನೂ ನಗಿಸುತ್ತಿರುತ್ತಾನೆ. ಹಾಗಾಗಿ ಆ ಹೆಸರಿಟ್ಟೆ" ಎಂದು ವಿವರಣೆ ಕೊಟ್ಟರು.
ಜನವರಿ 19ರಿಂದ ಶೂಟಿಂಗ್ ಮಾಡಬೇಕೆಂದು ಪ್ಲಾನ್ ಮಾಡಿದ್ದೇನೆ. ಚಿತ್ರದ ನಾಯಕಿ ನರೇಂದ್ರ ಮೋದಿ ಪರ ಅರೆನಗ್ನ ಪ್ರಚಾರ ಮಾಡಿದ್ದ ಮೇಘನಾ ಪಟೇಲ್. ಪಾತ್ರವರ್ಗದಲ್ಲಿ ಸಾಧುಕೋಕಿಲ ಸೇರಿದಂತೆ ಮುಂತಾದವರಿದ್ದಾರೆ. ಇದೊಂದು ಪಕ್ಕಾ ಕಾಮಿಡಿ ಚಿತ್ರ. ಈಗ ಶೀರ್ಷಿಕೆ ವಿವಾದ ಎದುರಾಗಿರುವ ಕಾರಣ 'ಎಕ್ಸ್ ಸಿಎಂ' ಎಂಬ ಅಡಿಬರಹವನ್ನು 'ಎಕ್ಸಲೆಂಟ್ ಕಾಮಿಡಿ ಮ್ಯಾನ್' ಬಿಡಿಸಿ ಹೇಳುತ್ತೇನೆ ಎಂದಿದ್ದಾರೆ ತ್ರಿಶೂಲ್.
ಪ್ರಚಾರ ಪಡೆಯುವ ಉದ್ದೇಶದಿಂದ 'ಗುಂಡು+ರಾವ್' ಎಂದು ಶೀರ್ಷಿಕೆ ಇಡಲಿಲ್ಲ. ಶೂಟಿಂಗ್ ಮುಗಿಯುವಷ್ಟರಲ್ಲಿ ಆರು ತಿಂಗಳಾಗುತ್ತದೆ. ಪ್ರಪಂಚದಲ್ಲಿ ಮರೆವು ಎಂಬ ಕಾಯಿಲೆಯನ್ನು ಭಗವಂತ ಎಲ್ಲರಿಗೂ ಕೊಟ್ಟಿದ್ದಾನೆ. ಆರು ತಿಂಗಳು ಯಾರು ತಾನೆ ನನ್ನ ಸಿನಿಮಾವನ್ನು ಜ್ಞಾಪಕ ಇಟ್ಟುಕೊಳ್ಳಲು ಸಾಧ್ಯ. ಇದು ಪ್ರಚಾರ ತಂತ್ರ ಅಲ್ಲವೇ ಅಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ಒಳಗೆ ಸೇರಿದರೆ ಗುಂಡು, ಗುಂಡಿನ ಮತ್ತೆ ಗಮ್ಮತ್ತು ಎಂಬಂತಹ ಹಾಡುಗಳ ಈಗಾಗಲೆ ಸಾಕಷ್ಟು ಬಂದಿವೆ. ಆ ಪ್ರಕಾರ ನಾವು ಶೀರ್ಷಿಕೆಯನ್ನು ಯೋಚಿಸಿದೆವು. ಆದರೆ ಈಗ ಚಿತ್ರದ ಶೀರ್ಷಿಕೆ ಬೇರೆಯದೇ ಅರ್ಥ ಪಡೆದುಕೊಂಡಿರುವುದು ನಿಜಕ್ಕೂ ನಮಗೆ ಬೇಸರ ತಂದಿದೆ ಎಂದರು ತ್ರಿಶೂಲ್. (ಫಿಲ್ಮಿಬೀಟ್ ಕನ್ನಡ ವಿಶೇಷ)


Click it and Unblock the Notifications











