ಪುನೀತ್ ನನಗೆ ಸ್ಪರ್ಧಿಯಲ್ಲ ಸ್ಫೂರ್ತಿ: ಶಿವರಾಜ್ ಕುಮಾರ್
"ಜಗ ಮೆಚ್ಚಿದ ಮಗ"ನ ಬಾಯಿಂದ ಮುತ್ತಿನಂಥಾ ಮಾತು! "ನನಗೆ ಅಪ್ಪು (ಪುನೀತ್) ಸ್ಪರ್ಧಿಯಲ್ಲ, ನನ್ನ ನಟನೆಗೆ ಸ್ಫೂರ್ತಿ" ಎಂದಿದ್ದಾರೆ ಶಿವಣ್ಣ. "ಪುನೀತ್ ನನಗಿಂತ ಚೆನ್ನಾಗಿ ಅಭಿನಯ ನೀಡುತ್ತಿದ್ದಾನೆ. ರಾಕೆಟ್ ನಂತೆ ಚಿಮ್ಮುತ್ತಾನೆ. ಅವನ ಬೆಳವಣಿಗೆ ಕಂಡು ನನಗೆ ಹೃದಯ ತುಂಬಿ ಬರುತ್ತಿದೆ. ಇಬ್ಬರೂ ಚಾಲ್ತಿಯಲ್ಲಿರುವ ನಟರಾದರೂ ಆತ ನನಗೆ ಸ್ಪರ್ಧಿಯಲ್ಲ" ಎಂದರು ಶಿವರಾಜ್ ಕುಮಾರ್!
ಮಂಗಳೂರಿನ ಖಾಸಗಿ ಕಾರ್ಯಕ್ರಮವೊಂದರಲ್ಲಿ ಶಿವಣ್ಣ ಹೇಳಿದ ಈ ಮಾತು, ಅಲ್ಲಿ ಸೇರಿದ್ದ ಅವರ ಹಾಗೂ ಪುನೀತ್ ಅಭಿಮಾನಿಗಳ ಬಾಯಿಂದ ಬಾಯಿಗೆ ಹರಡಿ ಕರ್ನಾಟಕದ ಸಿನಿಮಾಪ್ರಿಯರೆಲ್ಲರ ಕಿವಿಗೆ ಅಪ್ಪಳಿಸಿದೆ. ಸಹೋದರರಲ್ಲಿನ 'ಈ ಬಾಂಧವ್ಯ' ಯಾವತ್ತೂ ಹೀಗೇ ಇರಲಿ ಎಂದು 'ಬಂಗಾರದ ಮನುಷ್ಯ' ಡಾ. ರಾಜ್ ಮಕ್ಕಳಿಗೆ ಎಲ್ಲರೂ ಒಕ್ಕೊರಲಿನಿಂದ ಹರಸಿದ್ದಾರೆ, ಹಾರೈಸಿದ್ದಾರೆ.
ಸಾಮಾನ್ಯವಾಗಿ ಎಲ್ಲಾ ಅಣ್ಣ-ತಮ್ಮಂದಿರಲ್ಲಿ "ಸಹೋದರರ ಸವಾಲ್" ಇರುತ್ತದೆ. ಆದರೆ ಆದರ್ಶಪ್ರಾಯವಾದ ಈ ಪ್ರೀತಿ ಬಹುಶಃ ರಾಜ್ ಮಕ್ಕಳಲ್ಲಿ ಮಾತ್ರ. 'ತಂದೆಗೆ ತಕ್ಕ ಮಕ್ಕಳು' ಎಂದರೆ ಈ 'ತ್ರಿಮೂರ್ತಿ'ಗಳು. 'ಮಮತೆಯ ಮಡಿಲು' ಹೊಂದಿರುವ ಅವರ ಅಮ್ಮ ಪಾರ್ವತಮ್ಮನವರಿಗೆ ಇದಕ್ಕಿಂತ ಹೆಚ್ಚು ಇನ್ನೇನು ಬೇಕು ಎಂದು ಯಾರೋ ಕೇಳಿದ್ದು ಈಗ ಗುಟ್ಟಾಗಿ ಉಳಿದಿಲ್ಲ. ಅಷ್ಟಕ್ಕೂ ಒಳ್ಳಯತನ ಗುಟ್ಟಾಗಿ ಯಾಕಿರಬೇಕು?!
ಇನ್ನು ಡಾ. ರಾಜ್ ಕುಮಾರ್ ರ ಮೂವರು ಮಕ್ಕಳಲ್ಲಿ ಮಧ್ಯದವರಾದ ರಾಘವೇಂದ್ರ ರಾಜ್ ಕುಮಾರ್ ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದಾಗಲೇ 'ಟಾ ಟಾ' ಹೇಳಿದ್ದಾರೆ. ಅದಕ್ಕೆ ಅವರು, ಎಂದೋ ಎಲ್ಲೋ ಹೇಳಿದ ಕಾರಣ ಕೇಳಿದವರು 'ಗಪ್ ಚಿಪ್!' "ಕಲಾವಿದನಿಗೆ ಎಂತಹ ಪಾತ್ರಕ್ಕಾದರೂ ನ್ಯಾಯ ಒದಗಿಸುವ ತಾಕತ್ತಿರಬೇಕು. ಅದು ನಮ್ಮ ತಂದೆಯಲ್ಲಿತ್ತು. ಶಿವಣ್ಣ ಹಾಗೂ ಅಪ್ಪುವಿನಲ್ಲಿದೆ. ಆದರೆ ನನಗೆ ಆ ಸಾಮರ್ಥ್ಯ ಇಲ್ಲ ಅನ್ನಿಸಿತು, ಅದಕ್ಕೆ ನಟನೆಯಂದ ದೂರವಾದೆ" ಎಂದರು ರಾಘಣ್ಣ!
ನಟಿಸಿದ ಮೊದಲೇ ಚಿತ್ರ "ನಂಜುಂಡಿ ಕಲ್ಯಾಣ"ದ ಯಶಸ್ಸೇ ಕೊನೆಯವರೆಗೂ ಸಾಕಾಗುವಷ್ಟಿತ್ತು. ಎರಡನೇ ಚಿತ್ರ "ಗಜಪತಿ ಗರ್ವಭಂಗ" ಕೂಡ ಸೂಪರ್ ಡೂಪರ್ ಹಿಟ್! ಜೊತೆಯಲ್ಲಿ ಅಭಿಜಾತ ಗಾಯಕ ಬೇರೆ! ಅಂತಹ ರಾಘಣ್ಣ ಹೀಗೆ ಹೇಳುತ್ತಾರೆಂದರೆ ಅವರ 'ದೊಡ್ಡತನ'ಕ್ಕೆ ಮಾರು ಹೋಗದವರುಂಟೇ? ಈಗ 'ಅವರಣ್ಣ' ಶಿವಣ್ಣನ ಬಾಯಿಂದ ಪುನೀತ್ ಸ್ಪರ್ಧಿಯಲ್ಲ, ಸ್ಫೂರ್ತಿ ಎಂಬ ಮಾತು! 'ಪುಣ್ಯಾತ್ಮನ ಹೊಟ್ಟೆಯಲ್ಲಿ ಮರಿಪುಣ್ಯಾತ್ಮರು' ಎನ್ನಲೇಬೇಕು!
ಬರಲಿರುವ ಜನವರಿ 12ಕ್ಕೆ ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿರುವ ಶಿವಣ್ಣ ಅಂದು ಅವರ ಸಮಾಜಮುಖಿ ಶ್ರೀ ಮುತ್ತು ಟ್ರಸ್ಟ್ ಗೆ ಚಾಲನೆ ನೀಡಲಿದ್ದಾರೆ ಎಂಬ ಸುದ್ದಿ ಅವರಿಂದ ಬಂತು. ಹಾಗೇ ಅವರಪ್ಪ, ಕನ್ನಡಿಗರ ಅಣ್ಣಾವ್ರು, ಡಾ. ರಾಜ್ ಕುಮಾರ್ ಕನಸನ್ನು ನನಸಾಗಿಸುವುದಾಗಿಯೂ ಹೇಳಿದರು. ಇದಿಷ್ಟು ಸದ್ಯದ 'ಶಿವಣ್ಣ' ಎಂಬ 'ದೇವರ ಮಗ'ನ ಮಾತುಗಳು...


Click it and Unblock the Notifications











