ಯಶ್-ದರ್ಶನ್-ಸುಮಲತಾ ಕೌಂಟರ್ ಗೆ ಟ್ವಿಟ್ಟರ್ ನಲ್ಲಿ ಟಾಂಗ್ ನೀಡಿದ ಸಿಎಂ
ಮಂಡ್ಯ ಬಹಿರಂಗ ಸಭೆಯಲ್ಲಿಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಮತ್ತು ಜೋಡೆತ್ತು ಖ್ಯಾತಿಯ ನಟ ದರ್ಶನ್ ಮತ್ತು ಯಶ್ ಅಬ್ಬರಿಸಿದ್ದಾರೆ. ಇಷ್ಟು ದಿನ ಏನೂ ಮಾತನಾಡಲ್ಲ, ನೊಂದುಕೊಳ್ಳಲ್ಲ, ಬೇಜಾರು ಮಾಡಿಕೊಳ್ಳಲ್ಲ ಎಂದಿದ್ದ ದರ್ಶನ್ ಸಿಎಂ ವಿರುದ್ಧ ತೊಡೆತಟ್ಟಿದ್ದಾರೆ.
ಮಂಡ್ಯ ಸ್ವಾಭಿಮಾನದ ಪ್ರಶ್ನೆ ಎಂದು ಕಹಳೆ ಊದಿದ ಯಶ್, 'ನಮ್ಮ ಹೆಣ್ಮಕ್ಳ ವಿಷ್ಯ ಬಂದ್ರೆ ನಾವು ಸುಮ್ಮನೆ ಇರಲ್ಲ. ಇಲ್ಲಿ ಬಂದಿರುವ ಜನರನ್ನ 500 ಕೊಟ್ಟು ಕರೆಸಿಲ್ಲ' ಎಂದು ಸಿಎಂ ಹಾಗೂ ಮೈತ್ರಿ ಅಭ್ಯರ್ಥಿ ವಿರುದ್ಧ ಸಿಡಿದೆದ್ದರು.
ನಂತರ ಪಕ್ಷೇತರ ಅಭ್ಯರ್ಥಿ ಸುಮಲತಾ ಕೂಡ ಮುಖ್ಯಮಂತ್ರಿಗಳ ವಿರುದ್ಧ ಗುಡುಗಿ, ಭಾವನಾತ್ಮಕವಾಗಿ ಭಾಷಣ ಮುಗಿಸಿದರು. ಇದೆಲ್ಲದಕ್ಕೂ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆಲ್ಲಾ ಮಂಡ್ಯದ ಜನ ಉತ್ತರ ಕೊಡ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ. ಹಾಗಿದ್ರೆ, ಜೋಡೆತ್ತುಗಳ ಘರ್ಜನೆಗೆ ಸಿಎಂ ಪ್ರತ್ಯುತ್ತರ ಏನಿದೆ? ಮುಂದೆ ಓದಿ.....

'ಮಂಡ್ಯ ದಿಗ್ಗಜರು' ಎಂದು ಟೀಕೆ
''ಮಂಡ್ಯದಲ್ಲಿಂದು ಪಕ್ಷೇತರ ಅಭ್ಯರ್ಥಿ ಪರವಾಗಿ ನಡೆದ ಸಮಾವೇಶದ ದಿಗ್ಗಜರ ಭಾಷಣದ ಸಾರಾಂಶವನ್ನು ಗ್ರಹಿಸಿದ್ದೇನೆ. ನನ್ನ ಬಗ್ಗೆ ಮಾಡಿರುವ ವೈಯಕ್ತಿಕ ಆಪಾದನೆಗಳಿಗೆ ಉತ್ತರ ನೀಡುವ ಶಕ್ತಿ ಮಂಡ್ಯ ಜಿಲ್ಲೆಯ ನನ್ನ ಬಾಂಧವರಿಗಿದೆ. ಉತ್ತರ ಕೊಡುವ ರೀತಿಯೂ ಅವರಿಗೆ ಗೊತ್ತಿದೆ'' ಎಂದು ಸಿಎಂ ತಿರುಗೇಟು ನೀಡಿದ್ದಾರೆ.

ನಮ್ಮ ಸ್ನೇಹಕ್ಕೆ ಸೂಕ್ತ ಕಾಣಿಕೆ ನೀಡಿದೆ
'ಅಂಬರೀಷ್ ಹಾಗೂ ನನ್ನ ನಡುವಿನ ಸ್ನೇಹ ಮೂರು ದಶಕಗಳದ್ದು. ಅದು ರಾಜಕಾರಣದ ವ್ಯಾಪ್ತಿಯನ್ನೂ ಮೀರಿದ ಅಪ್ಪಟ ಗೆಳೆತನ. ಈ ಸ್ನೇಹಕ್ಕೆ ಅವರ ಕುಟುಂಬ ಸೂಕ್ತ ಕಾಣಿಕೆ ನೀಡಿದೆ' ಎಂದು ಬೇಸರವೂ ವ್ಯಕ್ತಪಡಿಸಿದ್ದಾರೆ.

ಮಂಡ್ಯದ ಜನರ ಮರಳು ಮಾಡುವ ತಂತ್ರ
'ಮಂಡ್ಯದ ಮಣ್ಣಿನ ಮೇಲೆ ನಿಂತು ನಾನು ಮಾತನಾಡುತ್ತಿದ್ದೇನೆ. ಪಕ್ಷೇತರ ಅಭ್ಯರ್ಥಿಯ ಪ್ರತಿಯೊಂದು ಮಾತು ಕೂಡ ಮಂಡ್ಯದ ಮತದಾರರನ್ನು ಮೋಡಿ ಮಾಡುವ ತಂತ್ರ ಎಂಬುದರ ನಿಚ್ಚಳ ಅರಿವು ಮಂಡ್ಯದ ಜನರಿಗಿದೆ. ಇದಕ್ಕಿಂತ ಹೆಚ್ಚು ಹೇಳಲು ನಾನು ಇಚ್ಛಿಸುವುದಿಲ್ಲ' ಎಂದು ಕಿಡಿಕಾರಿದ್ದಾರೆ.

18ಕ್ಕೆ ಭವಿಷ್ಯ ನಿರ್ಧಾರ
ಇಡೀ ರಾಜ್ಯದ ಗಮನ ಸೆಳೆದಿರುವ ಮಂಡ್ಯ ಕ್ಷೇತ್ರ ಅತ್ಯಂತ ಸೂಕ್ಷ್ಮವಾಗಿದೆ. ಇಲ್ಲಿನ ಫಲಿತಾಂಶ ಇಡೀ ರಾಜ್ಯ ರಾಜಕಾರಣದ ಭವಿಷ್ಯ ನಿರ್ಧರಿಸಲಿದೆ ಎಂಬುದು ರಾಜಕೀಯ ವಿಮರ್ಶಕರ ಮಾತು. ಸಿಎಂ ಕುಮಾರಸ್ವಾಮಿ ಅವರ ತಮ್ಮ ಸ್ವಾಭಿಮಾನವನ್ನೇ ಪಣಕ್ಕಿಟ್ಟು ಮಗನನ್ನ ಗೆಲ್ಲಿಸಲೇ ಬೇಕಾದ ಒತ್ತಡದಲ್ಲಿದ್ದಾರೆ. ಈ ಕಡೆ ಅದೇ ಸ್ವಾಭಿಮಾನವನ್ನ ಅಸ್ತ್ರವನ್ನಾಗಿಸಿಕೊಂಡಿರುವ ಸುಮಲತಾ ಕೂಡ ಗೆದ್ದೇ ಗೆಲ್ಲುತ್ತೇನೆ ನಂಬಿಕೆಯಲ್ಲಿದ್ದಾರೆ. ಏಪ್ರಿಲ್ 18ಕ್ಕೆ ಭವಿಷ್ಯ ನಿರ್ಧಾರವಾಗಲಿದ್ದು, ಮೇ 23ಕ್ಕೆ ಹಣೆ ಬರಹ ತಿಳಿಯಲಿದೆ.


Click it and Unblock the Notifications











