ಎಸ್ ನಾರಾಯಣ್-ಕುಮಾರಸ್ವಾಮಿ ಚಿತ್ರದಲ್ಲಿ ಕಮಲ್ ಹಾಸನ್, ಐಶ್ವರ್ಯ ರೈ?
ಕಲಾ ಸಾಮ್ರಾಟ್ ಎಸ್ ನಾರಾಯಣ್ ಜೊತೆ ಮಾಜಿ ಮುಖ್ಯಮಂತ್ರಿ, ನಿರ್ಮಾಪಕ ಎಚ್ಡಿ ಕುಮಾರಸ್ವಾಮಿ ಮತ್ತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. 'ಚಂದ್ರಚಕೋರಿ', 'ಸೂರ್ಯವಂಶ' ಅಂತಹ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕುಮಾರಸ್ವಾಮಿ ಮತ್ತೆ ತಮ್ಮ ನೆಚ್ಚಿನ ನಿರ್ದೇಶಕರ ಜೊತೆ ಕೈ ಜೋಡಿಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಈ ಸಂಬಂಧ ಎಸ್ ನಾರಾಯಣ್ ಮತ್ತು ಕುಮಾರಸ್ವಾಮಿ ಒಂದು ಸುತ್ತಿನ ಮಾತುಕತೆ ಸಹ ಮುಗಿಸಿದ್ದಾರೆ. ಬಹಳ ವರ್ಷಗಳ ನಂತರ ಈ ಕಾಂಬಿನೇಷನ್ನಲ್ಲಿ ಮತ್ತೆ ಸಿನಿಮಾ ಬರ್ತಿದೆ ಅಂದ್ರೆ ಸಹಜವಾಗಿ ಕುತೂಹಲ ಬೆಟ್ಟದಷ್ಟು ಎತ್ತರ ಇರುತ್ತದೆ. ಅಂದ್ಹಾಗೆ, ಎಸ್ ನಾರಾಯಣ್ ಮತ್ತು ಕುಮಾರಸ್ವಾಮಿ ಚಿತ್ರದಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್ ನಾಯಕರಾಗಿ ನಟಿಸುತ್ತಾರಾ ಎಂಬ ಪ್ರಶ್ನೆ ಕಾಡ್ತಿದೆ. ಈ ಬಗ್ಗೆ ಸ್ವತಃ ಎಸ್ ನಾರಾಯಣ್ ಟಿವಿ9ಗೆ ನೀಡಿರುವ ಸಂದರ್ಶನದಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಮುಂದೆ ಓದಿ...

ಕಮಲ್ ಹಾಸನ್ ನಾಯಕ ಅಂತ ಮಾತಾಡಿದ್ವಿ
''ಕುಮಾರಸ್ವಾಮಿ ಮತ್ತು ನಾನು ಸಿನಿಮಾ ಮಾಡಬೇಕು ಎನ್ನುವುದು ಇಂದಿನ ಬೆಳವಣಿಗೆಯಲ್ಲ. ಇದು ಬಹಳ ಹಳೆಯ ಕಮಿಟ್ಮೆಂಟ್. 2004-05ರ ಸಮಯದಲ್ಲಿ ಒಂದು ಸಿನಿಮಾ ಬಗ್ಗೆ ಚರ್ಚೆ ಮಾಡಿದ್ವಿ. ಈ ಚಿತ್ರದ ಪೂರ್ವ ತಯಾರಿ ಸಹ ನಡೆಸಿದ್ವಿ. ಸೂಪರ್ ಸ್ಟಾರ್ ಕಮಲ್ ಹಾಸನ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಅದಕ್ಕಾಗಿ ಕಮಲ್ ಹಾಸನ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದರು ಕುಮಾರಸ್ವಾಮಿ. ವ್ಯಾಸರಾಯ ಬಲ್ಲಾಳರ ಕಾದಂಬರಿ ಆಧರಿಸಿದ ಸಿನಿಮಾ'' ಎಂದು ಎಸ್ ನಾರಾಯಣ್ ಹಳೆಯ ಕಮಿಟ್ಮೆಂಟ್ ಬಗ್ಗೆ ವಿವರಿಸಿದರು.

ಐಶ್ವರ್ಯ ರೈ ನಾಯಕಿ ಎಂದು ಚಿಂತಿಸಿದ್ವಿ
''ಆಗಿನ್ನು ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿರಲಿಲ್ಲ. ಈ ಚಿತ್ರದ ತಯಾರಿ ಮಾಡುವ ಸಂದರ್ಭದಲ್ಲಿ ಸಿಎಂ ಅವಕಾಶ ಪಡೆದುಕೊಂಡರು. ಆಮೇಲೆ ಈ ಚಿತ್ರದ ಮಾತುಕತೆ ಅಲ್ಲಿಗೆ ನಿಂತು ಹೋಗಿತ್ತು. ಕಮಲ್ ಹಾಸನ್ ನಾಯಕ ಹಾಗೂ ಐಶ್ವರ್ಯ ರೈ ಅವರನ್ನು ನಾಯಕಿಯನ್ನಾಗಿಸಲು ಪ್ಲಾನ್ ಆಗಿತ್ತು'' ಎಂದು ಕಲಾ ಸಾಮ್ರಾಟ್ ಮಾಹಿತಿ ನೀಡಿದರು.

ಮತ್ತೆ ಮರು ಚಾಲನೆ ಸಿಕ್ಕಿದೆ
''ಹಳೆಯ ಕಮಿಟ್ಮೆಂಟ್ಗೆ ಈಗ ಮತ್ತೆ ಮರು ಚಾಲನೆ ಸಿಕ್ಕಿದೆ. ಆದ್ರೆ ಎಲ್ಲವೂ ಹೊಸದಾಗಿ ಆರಂಭಿಸಬೇಕಿದೆ. ಸಣ್ಣ ಚರ್ಚೆ ಆಗಿದೆ. ಈಗ ನಾಯಕ-ನಾಯಕಿ ಯಾರನ್ನು ಅಂತಿಮ ಮಾಡಿಕೊಂಡಿಲ್ಲ. ಕುಮಾರಸ್ವಾಮಿ ಅವರು ನಿರ್ಮಾಪಕರು ಅಂದ್ರೆ ಬಹಳ ದೊಡ್ಡ ಮಟ್ಟದಲ್ಲಿ ಸಿನಿಮಾ ಇರುತ್ತದೆ, ದೊಡ್ಡ ಕಲಾವಿದರೇ ಮಾಡ್ತಾರೆ'' ಎಂದು ನಾರಾಯಣ್ ಮಾಹಿತಿ ನೀಡಿದರು.

ಚೆನ್ನಾಂಬಿಕ ಫಿಲಂಸ್ ಅಡಿ ಬಂದ ಚಿತ್ರಗಳು
ರಾಜಕೀಯಕ್ಕೆ ಬರುವುದಕ್ಕೆ ಮುಂಚೆ ಕುಮಾರಸ್ವಾಮಿ ಸಿನಿಮಾ ವಿತರಕರಾಗಿ, ನಿರ್ಮಾಪಕರಾಗಿ ಕೆಲಸ ಮಾಡ್ತಿದ್ದರು. ವಿಷ್ಣುವರ್ಧನ್ ನಟನೆಯ 'ಸೂರ್ಯವಂಶ', ಶ್ರೀಮುರಳಿ ನಟಿಸಿದ್ದ 'ಚಂದ್ರ ಚಕೋರಿ', ಶಿವರಾಜ್ ಕುಮಾರ್ ನಟನೆಯ 'ಗಲಾಟೆ ಅಳಿಯಂದ್ರು' ಸಿನಿಮಾಗಳನ್ನು ಕುಮಾರಸ್ವಾಮಿ ನಿರ್ಮಿಸಿದ್ದರು. ಈ ಮೂರು ಚಿತ್ರಕ್ಕೆ ಎಸ್ ನಾರಾಯಣ್ ನಿರ್ದೇಶನ ಮಾಡಿದ್ದು ವಿಶೇಷ. ಆ ನಂತರ ಕುಮಾರಸ್ವಾಮಿ ತಮ್ಮ ಮಗನ ನಟನೆಯ ಮೊದಲ ಸಿನಿಮಾ 'ಜಾಗ್ವಾರ್'ಗೆ ಬಂಡವಾಳ ಹೂಡಿದರು. 2019ರಲ್ಲಿ ನಿಖಿಲ್, ರಚಿತಾ ರಾಮ್ ನಟನೆಯ 'ಸೀತಾರಾಮ ಕಲ್ಯಾಣ' ಸಿನಿಮಾಕ್ಕೂ ಎಚ್ಡಿಕೆ ಬಂಡವಾಳ ಹೂಡಿದರು.


Click it and Unblock the Notifications











