'ಗೊಲ್ಲಪುಡಿ ಶ್ರೀನಿವಾಸ್' ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ ಕನ್ನಡದ ಹೇಮಂತ್ ರಾವ್
'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ನಿರ್ದೇಶಕ ಹೇಮಂತ್ ರಾವ್ ಗೆ 'ಗೊಲ್ಲಪುಡಿ ಶ್ರೀನಿವಾಸ್' ಅವರ ಹೆಸರಿನಲ್ಲಿ ನೀಡುವ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಆಗಸ್ಟ್ 12 ರಂದು ಹೈದರಾಬಾದ್ ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಿದ್ದು, ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ಅವರು ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
1.5 ಲಕ್ಷ ನಗದು ಮತ್ತು ಟ್ರೋಫಿಯೊಂದಿಗೆ ನಿರ್ದೇಶಕ ಹೇಮಂತ್ ರಾವ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ವೇಳೆ ಹಿರಿಯ ನಟಿ ಸುಹಾಸಿನಿ, ಸ್ನೇಹ, ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ ರಾಜೇಂದ್ರ ಸಿಂಗ್ ಬಾಬು, ನಟ ಆಶಿಶ್ ವಿದ್ಯಾರ್ಥಿ ಭಾಗಿಯಾಗಿದ್ದರು.

ಪ್ರತಿವರ್ಷ ಚೊಚ್ಚಲ ಸಿನಿಮಾ ನಿರ್ದೇಶಕರಿಗೆ ನೀಡಲಾಗುವ ಈ ಪ್ರಶಸ್ತಿಯನ್ನ, 2017ನೇ ಸಾಲಿನಲ್ಲಿ 'ಗೋಧಿಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ನಿರ್ದೇಶನಕ್ಕಾಗಿ ಹೇಮಂತ್ ರಾವ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ 'ಗೊಲ್ಲಪುಡಿ ಶ್ರೀನಿವಾಸ್' ಪ್ರಶಸ್ತಿ ಪಡೆದ ಮೊದಲ ಕನ್ನಡ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಹೇಮಂತ್ ಪಾತ್ರರಾಗಿದ್ದಾರೆ.
ಅಂದ್ಹಾಗೆ, ಗೊಲ್ಲಪುಡಿ ಶ್ರೀನಿವಾಸ್ ಅವರು ತೆಲುಗಿನ ಖ್ಯಾತ ನಿರ್ದೇಶಕರು. ಇವರ ಹೆಸರಿನಲ್ಲಿ ಪ್ರತಿವರ್ಷವೂ ಚೊಚ್ಚಲ ನಿರ್ದೇಶಕರಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಗುವುದು. 1998 ರಿಂದ ಈ ಪ್ರಶಸ್ತಿಯನ್ನ ನೀಡಲಾಗುತ್ತಿದೆ. ಇದಕ್ಕೂ ಮುಂಚೆ ಅಮೀರ್ ಖಾನ್, ಜಾನಕಿ ವಿಶ್ವನಾಥ್, ಅಮಿತ್ ರೈ, ಸೇರಿದಂತೆ ಹಲವರು ಈ ಪ್ರಶಸ್ತಿ ಪಡೆದಿದ್ದಾರೆ.

ಅನಂತ್ ನಾಗ್, ರಕ್ಷಿತ್ ಶೆಟ್ಟಿ, ಶ್ರುತಿ ಹರಿಹರನ್ ಅಭಿನಯಿಸಿದ್ದ 'ಗೋಧಿಬಣ್ಣ ಸಾಧಾರಣ ಮೈಕಟ್ಟು' ತಂದೆ ಮತ್ತು ಮಗನ ಸಂಬಂಧದ ಕುರಿತ ಚಿತ್ರವಾಗಿತ್ತು. 2016 ರಲ್ಲಿ ತೆರೆಕಂಡ ಈ ಚಿತ್ರವನ್ನ ಪುಷ್ಕರ್ ಮಲ್ಲಿಕಾರ್ಜುನ ನಿರ್ಮಾಣ ಮಾಡಿದ್ದು, ಹೇಮಂತ್ ರಾವ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದರು. ಚರಣ್ ರಾಜ್ ಅವರ ಸಂಗೀತ ಈ ಚಿತ್ರಕ್ಕಿತ್ತು.


Click it and Unblock the Notifications











