'ಹೆಡ್ ಬುಷ್' ಚಿತ್ರತಂಡದ ವಿರುದ್ಧ ಹಿಂದೂ ಸಂಘಟನೆ ದೂರು
ಡಾಲಿ ಧನಂಜಯ್ ನಟಿಸಿ, ನಿರ್ಮಾಣ ಮಾಡಿರುವ 'ಹೆಡ್ ಬುಷ್' ಸಿನಿಮಾ ಚಿತ್ರಮಂದಿರದಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿರುವ ವೇಳೆಯಲ್ಲಿಯೇ ಸಿನಿಮಾಕ್ಕೆ ಕೆಲವು ವಿವಾದಗಳು ಸುತ್ತಿಕೊಳ್ಳುತ್ತಿವೆ.
ಸಿನಿಮಾದಲ್ಲಿ ವೀರಗಾಸೆಯವರನ್ನು ಅಪಮಾನ ಮಾಡುವ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಸಮುದಾಯದ ಕೆಲವರು ಆರೋಪಿಸಿದ್ದಾರೆ. ಜೊತೆಗೆ ಕರಗವನ್ನು ಸಹ ಸೂಕ್ತವಾಗಿ ತೋರಿಸಿಲ್ಲ, ಬೇಕಾಬಿಟ್ಟಿಯಾಗಿ ತೋರಿಸಿದ್ದಾರೆ ಎಂದು ಇನ್ನು ಕೆಲವರು ಆರೋಪಿಸಿದ್ದಾರೆ. ಇದರ ಬೆನ್ನಲ್ಲೆ ಸಿನಿಮಾದ ವಿರುದ್ಧ ಚಿತ್ರದುರ್ಗದಲ್ಲಿ ಹಿಂದು ಸಂಘಟನೆಯೊಂದು ಚಿತ್ರತಂಡದ ವಿರುದ್ಧ ದೂರು ಸಹ ದಾಖಲಿಸಿದೆ.
ಸಿನಿಮಾದ ಒಂದು ದೃಶ್ಯದಲ್ಲಿ ಡಾನ್ ಜಯರಾಜ್ ಪಾತ್ರಧಾರಿ ಧನಂಜಯ್ ವೀರಗಾಸೆ ವೇಷ ಹಾಕಿಕೊಂಡವರ ಮೇಲೆ ಹಲ್ಲೆ ಮಾಡುವಂತೆ ಚಿತ್ರಿಸಲಾಗಿದೆ, ವೀರಗಾಸೆಗೆ ಅವಮಾನ ಆಗಿದೆ ಈ ದೃಶ್ಯವನ್ನು ತೆಗೆಸಬೇಕು ಎಂದು ಹಿಂದೂ ಸಂಘಟನೆಯ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಹಿರಿಯೂರು ನಗರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ನೀಡಿದ ಹಿಂದುಪರ ಸಂಘಟನೆ ಸದಸ್ಯರು
ದೂರು ನೀಡಿ ಮಾತಾಡಿದ ಹಿಂದೂ ಕಾರ್ಯಕರ್ತರು "ಹೆಡ್ ಬುಷ್ ಚಲಚಿತ್ರದಲ್ಲಿ ವೀರಭದ್ರನ ಅವತಾರವಾಗಿರುವ ವೀರಗಾಸೆ ವೇಷಧಾರಿಗಳನ್ನು ನಟ ಡಾಲಿ ಧನಂಜಯ ಮನಬಂದಂತೆ ಕಾಲಿನಲ್ಲಿ ಒದ್ದಿರುವ ದೃಶ್ಯ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಚಿತ್ರತಂಡ ವಿರುದ್ಧ ಎಫ್ಐಆರ್ ಪ್ರಕರಣ ದಾಖಲಿಸಿಕೊಳ್ಳುವಂತೆ ಹಿರಿಯೂರು ನಗರ ಸಿಪಿಐ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ವೀರಭದ್ರ ಸಾಮಿಗೆ ಅಪಮಾನ!
ಹೆಡ್ಬುಷ್ ಸಿನಿಮಾದಲ್ಲಿ ನಮ್ಮ ದೈವಿಕ ಕಲೆ ಆದಂತ, ಸಾವಿರಾರು ವರ್ಷ ಇತಿಹಾಸ ಉಳ್ಳಂತಹ ವೀರಗಾಸೆ ಕಲೆಗೆ ಅವಮಾನ ಮಾಡಿದ್ದಾರೆ. ವೀರಗಾಸೆ ವೇಷ ಭೂಷಣ ಧರಿಸಿ ಅವರಿಗೆ ಮನಬಂದಂತೆ ತಳ್ಳಿಸುವ ಕೆಲಸ ಮಾಡಲಾಗಿದೆ. ಶೂ ಧರಿಸಿ ಒದೆಯುವುದು ಮನಬಂದಂತೆ ಎಸೆಯುವುದು, ಹೊಡೆಯುವುದು. ಇದರಿಂದ ವೀರಭದ್ರೇಶ್ವರನಿಗೆ ಅವಮಾನ ಮಾಡಿದ್ದಾರೆ. ವೀರಭದ್ರ ಸಾಮಿಗೆ ಸಾವಿರಾರೂ ವರ್ಷ ಹಿನ್ನಲೆ ಇದೆ. ನಮ್ಮ ವೀರಗಾಸೆ ಕಲೆಗೆ ನಮ್ಮ ವೀರಭದ್ರ ಸ್ವಾಮಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅಕ್ಟೋಬರ್ 21ರಂದು ಬಿಡುಗಡೆ ಆಗಿದ್ದ ಸಿನಿಮಾ
'ಹೆಡ್ ಬುಷ್' ಸಿನಿಮಾ ಅಕ್ಟೋಬರ್ 21ರಂದು ರಾಜ್ಯದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಅಗ್ನಿ ಶ್ರೀಧರ್ ಬರೆದಿರುವ 'ದಾದಾಗಿರಿಯ ದಿನಗಳು' ಪುಸ್ತಕ ಆಧಾರಿತ ಸಿನಿಮಾ ಇದಾಗಿದ್ದು ಶೂನ್ಯ ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ಸಿನಿ ರಸಿಕರ ಗಮನ ಸೆಳೆದಿದೆ. ಉತ್ತಮ ಪ್ರದರ್ಶನ ಕಾಣುತ್ತಿರುವ ಹೆಡ್ ಬುಷ್ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ.

ಕರಗಕ್ಕೆ ಅಪಮಾನ ಮಾಡಲಾಗಿದೆ: ಸಮುದಾಯ ಮುಖಂಡರ ಆರೋಪ
ಸಿನಿಮಾದಲ್ಲಿ ಕರಗದ ಆಚರಣೆಯನ್ನು ಸಹ ಬೇಕಾಬಿಟ್ಟಿಯಾಗಿ ತೋರಿಸಲಾಗಿದೆ ಎಂದು ವಹ್ನಿಕುಲ ಕ್ಷತ್ರಿಯ ಸಮಯದಾಯ ಆರೋಪಿಸಿದೆ. ಸಿನಿಮಾದಲ್ಲಿ ಸ್ಯಾಮ್ಸನ್ ಪಾತ್ರ, ಕರಗದ ಬಗ್ಗೆ 'ಜುಜುಬಿ' ಎಂಬ ಬಳಕೆ ಮಾಡಿರುವ ದೃಶ್ಯವೊಂದಿದೆ. 18 ವರ್ಷ ಯಶಸ್ವಿಯಾಗಿ ಕರಗ ಹೊತ್ತು ನಮ್ಮ ಸಮುದಾಯದಲ್ಲಿ ದೇವರ ಸ್ವರೂಪವಾಗಿದ್ದ ಶಿವಶಂಕರ್ ಅವರನ್ನು ಏಕವಚನದಲ್ಲಿ ಅವನು, ಇವನು ಅಂತ ಪದ ಬಳಕೆ ಮಾಡಲಾಗಿದೆ. ಕರಗಕ್ಕೆ ತನ್ನದೇ ಆದ ಘನತೆ, ಗಾಂಭೀರ್ಯ ಇದೆ. ಆದರೆ ಈ ಚಿತ್ರದಲ್ಲಿ ಕರಗದ ಕೈಯಲ್ಲಿ ಕೆಟ್ಟದಾಗಿ ಡ್ಯಾನ್ಸ್ ಮಾಡಿಸಿ, ಸುತ್ತ ನಿಂತು ಚಪ್ಪಾಳೆ ತಟ್ಟುವ ದೃಶ್ಯ ಇದೆ'' ಈ ದೃಶ್ಯಗಳನ್ನೆಲ್ಲ ತೆಗೆಯಬೇಕು ಎಂದು ಸಮುದಾಯದ ಮುಖಂಡರು ಒತ್ತಾಯಿಸಿದ್ದು, ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡುವುದಾಗಿಯೂ ಅವರು ಹೇಳಿದ್ದಾರೆ.


Click it and Unblock the Notifications











