ಶ್ರೀರಂಗಪಟ್ಟಣದಲ್ಲಿ ಕಣ್ಣಿರು ಹಾಕುತ್ತಾ ಸಹಾಯಕ್ಕಾಗಿ ಅಂಗಲಾಚಿದ ಹುಚ್ಚ ವೆಂಕಟ್
ಕೆಲವು ದಿನಗಳ ಹಿಂದಷ್ಟೆ ಕೊರೊನಾದಲ್ಲಿ ಸಂಕಷ್ಟದಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯ ಮಾಡಿದ್ದ ಹುಚ್ಚ ವೆಂಕಟ್ ಇಂದು ಸ್ವತಃ ಸಹಾಯಕ್ಕಾಗಿ ಅಂಗಲಾಚಿದ್ದಾರೆ.
ಹೌದು, ಕೆಲವು ದಿನಗಳ ಹಿಂದಷ್ಟೆ ಬೀದಿ ಬದಿ ಪಾನಿಪುರಿ ಅಂಗಡಿ, ಮಾಂಸದಂಗಡಿ, ಮೀನಂಗಡಿ ಇನ್ನಿತರೆ ಸಣ್ಣ ಅಂಗಡಿಗಳಿಗೆ ತೆರಳಿ ದಿನಸಿ ಕಿಟ್ ವಿತರಿಸಿ ಹುಚ್ಚ ವೆಂಕಟ್ ಸಹಾಯ ಮಾಡಿದ್ದರು.
ಆದರೆ ಇಂದು ಮೈಸೂರಿನ ಶ್ರೀರಂಗಪಟ್ಟಣದಲ್ಲಿ ಕಣ್ಣೀರು ಹಾಕುತ್ತಾ, ಊರಿಗೆ ಹೋಗಲು ಹಣ ಬೇಕಾಗಿದೆ ನೆರವು ನೀಡಿ ಎಂದು ಜನರನ್ನು ಬೇಡಿಕೊಂಡಿದ್ದಾರೆ.
ಶ್ರೀರಂಗಪಟ್ಟಣದ ರಂಗನಾಥ ಮೈದಾನದಲ್ಲಿ ರಾತ್ರಿಯೆಲ್ಲಾ ಮಲಗಿದ್ದ ಹುಚ್ಚ ವೆಂಕಟ್ ಬೆಳಿಗ್ಗೆ ದೇವಾಲಯದ ಮುಂಭಾಗದ ಬೀದಿಗಳಲ್ಲಿ ಜನರನ್ನು ಬೈಯುತ್ತಾ ಓಡಿಡದರಂತೆ.

ಉಪಹಾರ ಕೊಟ್ಟು ನೆರವಾದರು
ನಂತರ ಯಾರೋ ಕೆಲವರು ಹುಚ್ಚ ವೆಂಕಟ್ಗೆ ಉಪಹಾರ ಕೊಡಿಸಿದ್ದಾರೆ. ನಂತರ ಅಲ್ಲೇ ತಿರುಗುತ್ತಿದ್ದ ಹುಚ್ಚ ವೆಂಕಟ್ ಜನರನ್ನು ಮೂದಲಿಸಿದ್ದಾರೆ. ಆದರೆ ಹುಚ್ಚ ವೆಂಕಟ್ ಕತೆ ಗೊತ್ತಿದ್ದವರು ಅವರ ತಂಟೆಗೆ ಹೋಗಿಲ್ಲ.

ಊರಿಗೆ ಹೋಗಲು ಹಣವಿಲ್ಲವೆಂದು ಕಣ್ಣೀರು
ಆದರೆ ಕೊನೆಗೆ ತನಗೆ ಊರಿಗೆ ಹೋಗಲು ಹಣವಿಲ್ಲವೆಂದು ಕಣ್ಣೀರು ಹಾಕುತ್ತಾ ಜನರ ಬಳಿ ಹಣ ಕೇಳಿದ್ದಾರೆ. ಅಂತೆಯೇ ಜನರೂ ಸಹ ಹುಚ್ಚ ವೆಂಕಟ್ಗೆ ಹಣ ನೀಡಿದ್ದಾರೆ.

ಪೊಲೀಸರು ಹೊರಗೆ ಕಳುಹಿಸಿದರು
ಹುಚ್ಚ ವೆಂಕಟ್ ಪುಂಡಾಟದ ಬಗ್ಗೆ ಆ ವೇಳೆಗಾಗಲೆ ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಹುಚ್ಚ ವೆಂಕಟ್ ಅನ್ನು ವಶಕ್ಕೆ ಪಡೆದು ಶ್ರೀರಂಗಪಟ್ಟಣದಿಂದ ಹೊರಕ್ಕೆ ಕಳುಹಿಸಿದ್ದಾರೆ.

ಈ ರೀತಿ ಮಾಡುತ್ತಿರುವುದು ಇದು ಮೊದಲಲ್ಲ
ಹುಚ್ಚ ವೆಂಕಟ್ ಈ ರೀತಿ ಹುಚ್ಚಾಟ ನಡೆಸಿರುವುದು ಇದು ಮೊದಲೇನಲ್ಲ, ಹಿಂದೊಮ್ಮೆ ಉಡುಪಿಯಲ್ಲಿ ತನ್ನದೇ ಕಾರಿನ ಗಾಜು ಒಡೆದು ಪುಂಡಾಟ ಮಾಡಿದ್ದರು. ಆಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಟೋಲ್ ಪ್ಲಾಜಾ ಒಂದರ ಬಳಿ ಯುವತಿಯೊಬ್ಬಳನ್ನು ಮದುವೆಯಾಗುವಂತೆ ಕೇಳಿದ್ದರು ಇದೂ ಸಹ ಸುದ್ದಿಯಾಗಿತ್ತು.


Click it and Unblock the Notifications











