ಜೈಲಿನ ಗೋಡೆಗೆ ತಲೆ ಚಚ್ಚಿಕೊಂಡು ಹುಚ್ಚಾಟ ನಡೆಸಿದ ವೆಂಕಟ್.!
ಹುಚ್ಚ ವೆಂಕಟ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಕೇವಲ ಯೂಟ್ಯೂಬ್ ಸ್ಟಾರ್ ಆಗಿದ್ದ ಹುಚ್ಚ ವೆಂಕಟ್ ಗೆ ಯಾವ ದೊಡ್ಡ ಸ್ಟಾರ್ ಗೂ ಸಿಗದ ಪಬ್ಲಿಸಿಟಿ ಸಿಕ್ಕಿದ್ದು, ವೆಂಕಟ್ ಅವರು ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿದ್ದರು.
ಇದೀಗ ಅದೇ ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಜೈಲಿನ ಹೊರಗಡೆ ಅವಾಂತರ ಮಾಡಿದ್ದು ಸಾಲದು ಅಂತ ಜೈಲಿನ ಒಳಗೂ ರಂಪಾಟ ಮಾಡಿ ಪೊಲೀಸರಿಗೂ ತಲೆ ಬಿಸಿಯಾಗುವಂತೆ ಮಾಡಿದ್ದಾರೆ.[ಅಂಬೇಡ್ಕರ್ 'ಎಕ್ಕಡ' ಅಂದಿದ್ದ ಹುಚ್ಚ ವೆಂಕಟನ ಬಂಧನ]

ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಜೈಲು ಸೇರಿರುವ ನಟ-ನಿರ್ದೇಶಕ ಹುಚ್ಚ ವೆಂಕಟ್ ಅವರಿಗೆ ನ್ಯಾಯಾಲಯದಲ್ಲಿ ಜಾಮೀನು ನೀಡಲು ತನಗೆ ಯಾರು ಶ್ಯೂರಿಟಿ ನೀಡುತ್ತಿಲ್ಲ ಎಂದು ಆಕ್ರೋಶಗೊಂಡು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಗೋಡೆ, ಸರಳುಗಳಿಗೆ ತಲೆ ಚಚ್ಚಿಕೊಂಡು ರಂಪಾಟ ನಡೆಸಿದ್ದಾರೆ ಎಂದು ವರದಿಯಾಗಿದೆ.
ನನಗೆ ವಿಶ್ವದಾದ್ಯಂತ ಹಾಗೂ ಜೈಲಿನಲ್ಲೂ ಅಭಿಮಾನಿಗಳಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದ ಹುಚ್ಚ ವೆಂಕಟ್ ಗೆ ಯಾರು ಶ್ಯೂರಿಟಿ ಕೊಡಲು ಮುಂದೆ ಬರುತ್ತಿಲ್ಲ ಎಂದು ಅಸಮಾಧಾನಗೊಂಡು, ಈ ರೀತಿಯಾಗಿ ವರ್ತಿಸಿದ್ದಾರೆ ಎಂದು ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.[ಹುಚ್ಚ ವೆಂಕಟ್ ಜೈಲು ಪಾಲು, ಡಿ.4ರ ತನಕ ನ್ಯಾಯಾಂಗ ಬಂಧನ]

ಪ್ರಕರಣದಲ್ಲಿ ಜಾಮೀನು ಸಿಕ್ಕರೂ ಕೂಡ ನ್ಯಾಯಾಲಯಕ್ಕೆ ತನ್ನ ಪರವಾಗಿ ಯಾರು ಶ್ಯೂರಿಟಿ ನೀಡಲು ಮುಂದೆ ಬಾರದೇ ಇದ್ದಿದ್ದರಿಂದ ಆಕ್ರೋಶಗೊಂಡಿದ್ದ ಹುಚ್ಚ ವೆಂಕಟ್ ಆದಿತ್ಯವಾರ ಸಂಜೆಯಿಂದಲೇ ಕಿರುಚಾಡುತ್ತಿದ್ದರಂತೆ. ಆದರೆ ಸೋಮವಾರ (ನವೆಂಬರ್ 30) ಬೆಳಗ್ಗೆ ಅವರ ಕೋಪ ಮಿತಿಮೀರಿ ಜೈಲಿನ ಗೋಡೆ, ಕಂಬಿಗೆ ತಲೆ ಚಚ್ಚಿಕೊಂಡು ತೀವ್ರ ಗಾಯ ಮಾಡಿಕೊಂಡಿದ್ದಾರೆ.
ತಲೆ ಚಚ್ಚಿಕೊಂಡಿದ್ದರಿಂದ ತೀವ್ರ ರಕ್ತಸ್ರಾವವಾಗಿದ್ದು, ಹುಚ್ಚ ವೆಂಕಟ್ ಅವರನ್ನು ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಮತ್ತೆ ಜೈಲಿಗೆ ಕಳುಹಿಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.[ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಜ್ಞಾನ ಭಾರತಿ ಪೊಲೀಸರ ಮುಂದೆ ಶರಣಾಗಿದ್ದ ಹುಚ್ಚ ವೆಂಕಟ್ ಅವರನ್ನು ಬಳಿಕ ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು.
ತದನಂತರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಶ್ಯೂರಿಟಿ ಆಧಾರದ ಮೇಲೆ ಜಾಮೀನು ನೀಡಿತ್ತು. ಆದರೆ ಶ್ಯೂರಿಟಿ ನೀಡಲು ಯಾರು ಮುಂದಾಗದೇ ಇರುವ ನಿಟ್ಟಿನಲ್ಲಿ ಹುಚ್ಚ ವೆಂಕಟ್ ಅವರಿಗೆ ಇನ್ನು ಬಿಡುಗಡೆ ಭಾಗ್ಯ ದೊರಕಿಲ್ಲ.


Click it and Unblock the Notifications











