ನನಗೂ ರಾಜಕೀಯಕ್ಕೂ ಆಗಿಬರಲ್ಲ: ದರ್ಶನ್
ರಾಜ್ಯದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚುನಾವಣಾ ಪ್ರಚಾರಕ್ಕೆ ಬುಧವಾರ (ಏ.9) ಧುಮುಕಿದರು. ಬೆಂಗಳೂರು (ಕೇಂದ್ರ) ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಪರ ಮತಯಾಚನೆ ಮಾಡಿದರು.
ರೋಡ್ ಶೋನಲ್ಲಿ ಭಾಗವಹಿಸಿದ್ದ ಅವರು ಮಾಗಡಿ ರಸ್ತೆಯ ಕೆ.ಪಿ ಅಗ್ರಹಾರದಲ್ಲಿ ಮೋಹನ್ ಪರ ಬಿರುಸಿನ ಪ್ರಚಾರ ಮಾಡಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ದರ್ಶನ್, "ನಾನು ಅಭ್ಯರ್ಥಿ ಪರ ಪ್ರಚಾರ ಮಾಡ್ತೀನಿ, ಯಾವುದೇ ಪಕ್ಷದ ಪರ ಅಲ್ಲ" ಎಂದು ಸ್ಪಷ್ಟಪಡಿಸಿದರು. [ಮೈಸೂರಲ್ಲಿ ಮನೆಮನೆಗೆ ಹಾಲು ಮಾರ್ತಿದ್ರು ದರ್ಶನ್]
ಕಳೆದ ಬಾರಿ ಚುನಾವಣೆ ವೇಳೆ ತ್ರಿಫುಲ್ ಆಕ್ಟಿಂಗ್ ಮಾಡಿದ್ದೆ. ಆದರೆ ಈ ಬಾರಿ ಡಬಲ್ ಆಕ್ಟಿಂಗ್ ಅಷ್ಟೇ ಎಂದರು. ಅಂದರೆ ಅವರ ಮಾತಿನ ಅರ್ಥ ಕೇವಲ ಇಬ್ಬರ ಪರ ಮಾತ್ರ ಈ ಬಾರಿ ಪ್ರಚಾರ ಮಾಡ್ತೀನಿ ಎಂಬುದು. ನನಗೆ ಪಕ್ಷ ಅಲ್ಲ, ವ್ಯಕ್ತಿ ಮುಖ್ಯ ಎಂಬುದು ಅವರ ಸಿದ್ಧಾಂತ.ಕಳೆದ ಬಾರಿ ವಿಧಾನಸಭೆ ಚುನಾವಣೆ ವೇಳೆ ಮಂಡ್ಯದಲ್ಲಿ ಅಂಬರೀಶ್, ಬಿಜೆಪಿಯ ಅರವಿಂದ ಲಿಂಬಾವಳಿ ಹಾಗೂ ಜೆಡಿಎಸ್ ನ ಆನಂದ್ ಅಪ್ಪುಗೋಳ್ ಪರ ಪ್ರಚಾರ ಮಾಡಿದ್ದರು. ನನ್ನೊಂದಿಗೆ ಆತ್ಮೀಯತೆ ಹೊಂದಿರುವ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತೇನೆ ಎಂದರು.
ಬೇರೆ ತಾರೆಯರ ಪರವಾಗಿ ಪ್ರಚಾರ ಮಾಡ್ತೀರಾ ಎಂದು ಕೇಳಿದ್ದಕ್ಕೆ, ಇಲ್ಲ ನಾನು ಬೇರೆ ಯಾವ ತಾರೆಯರ ಪರ ಪ್ರಚಾರ ಮಾಡಲ್ಲ ಎಂದರು. ಮುಂದೆ ರಾಜಕೀಯಕ್ಕೆ ಬರುವ ಯೋಚನೆ, ಯೋಜನೆ ಎಂದರೆ, ನನಗೂ ರಾಜಕೀಯಕ್ಕೂ ಆಗಿ ಬರಲ್ಲ ಎಂದು ದರ್ಶನ್ ಖಡಕ್ ಆಗಿ ಉತ್ತರಿಸಿದ್ದಾರೆ.
ಬಳಿಕ ಅವರು ಪಿಸಿ ಮೋಹನ್ ಬಗ್ಗೆ ಮಾತನಾಡುತ್ತಾ, ವ್ಯಕ್ತಿ ಒಳ್ಳೆಯವರು, ಸ್ನೇಹ ಜೀವಿ, ವರ್ಷಾನುಗಟ್ಟೆಲೆಯಿಂದ ಅವರನ್ನು ನೋಡುತ್ತಿದ್ದೇನೆ. ಅವರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅದಕ್ಕಾಗಿ ಅವರ ಪರ ಪ್ರಚಾರ ಮಾಡುತ್ತಿದ್ದೇನೆ ಎಂದರು. ಈ ಬಾರಿ ಕೇವಲ ಒಂದಿಬ್ಬರ ಪರ ಮಾತ್ರ ಪ್ರಚಾರ ಎಂದರು. (ಒನ್ಇಂಡಿಯಾ ಕನ್ನಡ)


Click it and Unblock the Notifications












