'ಹೊಸಪೇಟೆ'ಯಲ್ಲಿ ಪುನೀತ್ ಗೆ ಗಾಳಿಯಲ್ಲಿ ಮುತ್ತಿಕ್ಕಿದ ಅಭಿಮಾನಿಗಳು
ಹೊಸಪೇಟೆಯ ವಾಲ್ಮೀಕಿ ಸರ್ಕಲ್ ಬಳಿ ಇರುವ ವಿಜಯನಗರ ಕಾಲೇಜು ಗ್ರೌಂಡ್ ನಲ್ಲಿ ನಿನ್ನೆ (ಜೂನ್ 23) ಜನ ಸಾಗರ ನೆರೆದಿತ್ತು. ಸುಮಾರು ನಾಲ್ಕೈದು ಘಂಟೆಗಳ ಕಾಲ ಕಾಲೇಜು ಗ್ರೌಂಡ್ ಬಳಿ ನೂಕು-ನುಗ್ಗಲು ಆರಂಭ ಆಗಿದ್ದರಿಂದ ಜನ ಸಾಗರ ನಿಯಂತ್ರಿಸಲು ಪೊಲೀಸರಿಗೆ ಸಾಕೋ ಸಾಕಾಯ್ತು.
ಅಷ್ಟಕ್ಕೂ ಯಾಕಪ್ಪಾ ಅಷ್ಟೊಂದು ಜನಸಾಗರ ಹರಿದು ಬಂತು ಅಂದ್ರೆ, ನಿನ್ನೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ದೊಡ್ಮನೆ ಹುಡುಗ' ಚಿತ್ರದ 'ಅಭಿಮಾನಿಗಳೇ ದೇವರು' ಹಾಡಿನ ಶೂಟಿಂಗ್ ಅಭಿಮಾನಿಗಳ ಜೊತೆ ಹೊಸಪೇಟೆಯಲ್ಲಿ ನಡೆದಿತ್ತು.[ದೊಡ್ಮನೆ 'ಅಪ್ಪು'ವನ್ನು ಅಪ್ಪಿಕೊಂಡ ಅಭಿಮಾನಿ ದೇವರುಗಳು]

ತಮ್ಮ ನೆಚ್ಚಿನ ನಟ ತಮ್ಮೂರಿಗೆ ಬಂದಿದ್ದಾರೆ ಎಂದು ತಿಳಿದ ತಕ್ಷಣ ಅಭಿಮಾನಿಗಳು ಪುನೀತ್ ಅವರನ್ನು ನೋಡಲು ಎದ್ನೋ, ಬಿದ್ನೋ ಅಂತ ಓಡೋಡಿ ಬಂದಿದ್ದಾರೆ. ಸಣ್ಣ ಮಕ್ಕಳು, ಯುವಕ-ಯುವತಿಯರು, ಮಧ್ಯ ವಯಸ್ಕರು ಸೇರಿದಂತೆ, ಮುದುಕ-ಮುದುಕಿಯರು ಕೂಡ ಗ್ರೌಂಡ್ ನಲ್ಲಿ ಜಮಾಯಿಸಿದ್ದರು.
ಓಪನ್ ಕಾರಿನ ಮೇಲೇರಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೈಯಲ್ಲಿ ಮೈಕ್ ಹಿಡಿದು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ತದನಂತರ ಅಭಿಮಾನಿಗಳಿಗೋಸ್ಕರ ಮಾಡಿರುವ ವಿಶೇಷ ಹಾಡಿಗೆ ಅಭಿಮಾನಿಗಳ ಜೊತೆ ಜಬರ್ದಸ್ತ್ ಆಗಿ ಹೆಜ್ಜೆ ಹಾಕುವ ಮೂಲಕ ಕುಣಿದು ಕುಪ್ಪಳಿಸಿದ್ದಾರೆ.[ಬಳ್ಳಾರಿಯಲ್ಲಿ ದೊಡ್ಮನೆ ಹುಡುಗನ ದರ್ಬಾರ್ ಆರಂಭ!]
ಪುನೀತ್ ಅವರ ಡ್ಯಾನ್ಸ್ ಅನ್ನು ಕಣ್ಣಾರೆ ಕಂಡ ಅಭಿಮಾನಿಗಳು ಸಂತಸದಿಂದ ಕೇಕೆ ಹಾಕಿ ತಾವು ಅವರ ಜೊತೆ ಕುಣಿದಿದ್ದಾರೆ. ಮೊನ್ನೆ (ಜೂನ್ 22) ಬಳ್ಳಾರಿಯಲ್ಲಿ ಅಭಿಮಾನಿಗಳ ಜೊತೆ ಕುಣಿದಿದ್ದ ಪುನೀತ್ ಅವರು ನಿನ್ನೆ ಹೊಸಪೇಟೆಯಲ್ಲಿ ಸಖತ್ ಆಗಿ ಡ್ಯಾನ್ಸ್ ಮಾಡಿ ಸಂಭ್ರಮ ಪಟ್ಟಿದ್ದಾರೆ.
ಒಟ್ನಲ್ಲಿ 'ದೊಡ್ಮನೆ ಹುಡುಗ' ಚಿತ್ರದ ಎರಡು ದಿನಗಳ ಶೂಟಿಂಗ್ ಪ್ರವಾಸ ಯಶಸ್ವಿಯಾಗಿ ನೇರವೇರಿದ್ದು, ನಿರ್ದೇಶಕ ಸೂರಿ ಅವರು ವಿಭಿನ್ನ ಪ್ರಯೋಗ ಮಾಡಿ ಯಾವುದೇ ಎಡವಟ್ಟು ಆಗದಿದ್ದಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.[ಪುನೀತ್ ಜೊತೆ ಡ್ಯಾನ್ಸ್ ಮಾಡಲು ಅಭಿಮಾನಿಗಳಿಗೆ ಇಲ್ಲಿದೆ ಅವಕಾಶ]
ಹೊಸಪೇಟೆಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಹಾಡಿನ ಶೂಟಿಂಗ್ ಸ್ಟಿಲ್ಸ್ ಮತ್ತು ಅಭಿಮಾನಿಗಳ ಜನಸಾಗರ ನೋಡಲು ಕೆಳಗಿನ ಗ್ಯಾಲರಿ ಕ್ಲಿಕ್ಕಿಸಿ.....(ಚಿತ್ರಕೃಪೆ: ಫೇಸ್ ಬುಕ್ ಮತ್ತು ಪುನೀತ್ ಅಭಿಮಾನಿಗಳ ಸಂಘ)


Click it and Unblock the Notifications











