ಇದೇ ಮೊದಲ ಬಾರಿಗೆ ಸ್ತ್ರೀರೋಗ ತಜ್ಞರಾಗಿ ಕ್ರೇಜಿಸ್ಟಾರ್
ತಮ್ಮದೇ ಆದಂತಹ ಸ್ಟೈಲಿಶ್ ಚಿತ್ರಗಳಿಗೆ ಹೆಸರಾದವರು ಇಂದ್ರಜಿತ್ ಲಂಕೇಶ್. ಸತತ ಎರಡು ವರ್ಷಗಳ ಗ್ಯಾಪ್ ಬಳಿಕ ಅವರು ಹೊಸ ಚಿತ್ರದೊಂದಿಗೆ ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ. 'ದೇವ್ ಸನ್ ಆಫ್ ಮುದ್ದೇಗೌಡ' ಚಿತ್ರದ ಬಳಿಕ ಮತ್ತೆ ಆಕ್ಷನ್ ಕಟ್ ಗೆ ಮರಳಿದ್ದಾರೆ ಇಂದ್ರಜಿತ್.
ಅವರ ಹೊಸ ಇನ್ನಿಂಗ್ಸ್ 'ಲವ್ ಯು ಆಲಿಯ' ಇದೇ ಭಾನುವಾರ (ಅ.26) ಸೆಟ್ಟೇರಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ವಾರ್ತಾ ಸಚಿವ ಆರ್ ರೋಷನ್ ಬೇಗ್ ಸೇರಿದಂತ ಹಲವು ಗಣ್ಯರ ಸಮ್ಮುಖದಲ್ಲಿ ಇಂದ್ರಜಿತ್ ಚಿತ್ರ ಚಾಲನೆ ಪಡೆದುಕೊಂಡಿತು.
ಇದೊಂದು ಬಹುತಾರಾಗಣದ ಚಿತ್ರವಾಗಿದ್ದು ಪಾತ್ರವರ್ಗದಲ್ಲಿ ಕ್ರೇಜಿಸ್ಟಾರ್, ಕನಸುಗಾರ ರವಿಚಂದ್ರನ್, ಭೂಮಿಕಾ ಚಾವ್ಲಾ, ಚಂದನ್, ಸಂಗೀತಾ ಚೌಹಾಣ್ ಹಾಗೂ ಅದಿತಿ ಆಚಾರ್ಯ ಮುಂತಾದವರು ಇದ್ದಾರೆ. ಮ್ಯಾಜಿಕ್ ಸಿನಿಮಾ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ.

ಲವ್ ಯು ಆಲಿಯ ಯುವ ಜನಾಂಗಕ್ಕೆ ಹತ್ತಿರದ ಕಥೆ
ಇಂದ್ರಜಿತ್ ಅವರ ಬಹುತೇಕ ಚಿತ್ರಗಳ ಕಥಾವಸ್ತು ಯುವ ಹೃದಯಗಳಿಗೆ ಸಮೀಪದ್ದಾಗಿರುತ್ತದೆ. ಈ ಬಾರಿಯೂ ಅವರು ಅಂಥಹದ್ದೇ ಕಥೆವಸ್ತುವನ್ನು 'ಲವ್ ಯು ಆಲಿಯ' ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

ಯೂತ್ ಸೆಂಟ್ರಿಕ್ ಚಿತ್ರ ಇದು: ಇಂದ್ರಜಿತ್
"ಯೂತ್ ಸೆಂಟ್ರಿಕ್ ಚಿತ್ರವಾಗಿರುವ ಇದು ಮನರಂಜನೆಯ ಜೊತೆಗೆ ಸಂದೇಶವನ್ನೂ ಕೊಡುತ್ತದೆ. ಹಾಗಂತ ನೀತಿ ಪಾಠ ಹೇಳಿಕೊಂಡು ಬೋರು ಹೊಡೆಸುವ ಸಿನಿಮಾ ಇದಲ್ಲ. ಥಿಯೇಟರ್ ನಿಂದ ಹೊರಬಂದಾಗ ಪ್ರೇಕ್ಷಕರ ಮುಖದಲ್ಲಿ ಸಂತಸ ಎದ್ದು ಕಾಣುತ್ತದೆ" ಎಂದರು ಇಂದ್ರಜಿತ್.

ಸ್ತ್ರೀರೋಗ ತಜ್ಞರಾಗಿ ಕ್ರೇಜಿಸ್ಟಾರ್ ರವಿಚಂದ್ರನ್
ಕ್ರೇಜಿಸ್ಟಾರ್ ರವಿಚಂದ್ರನ್ ಅವರಂತಹ ಅನುಭವಿ ಕಲಾವಿದರ ಜೊತೆಗೆ ಕೆಲಸ ಮಾಡುತ್ತಿರುವುದು ನಿಜಕ್ಕೂ ನನಗೆ ಸವಾಲಿನ ಕೆಲಸ. ಚಿತ್ರದಲ್ಲಿ ಅವರು ಸ್ತ್ರೀರೋಗ ತಜ್ಞನ ಪಾತ್ರ ಪೋಷಿಸುತ್ತಿದ್ದಾರೆ. ತಮ್ಮ ವೃತ್ತಿ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಅವರು ವೈದ್ಯನಾಗಿ ಕಾಣಿಸುತ್ತಿದ್ದಾರೆ.

ಬಿಜಿಯಾಗಿದ್ದರೂ ಕಾಲ್ ಶೀಟ್ ಕೊಟ್ಟ ರವಿಚಂದ್ರನ್
"ರವಿಚಂದ್ರನ್ ಅವರನ್ನು ಭಿನ್ನವಾಗಿ ತೋರಿಸುವ ಪಾತ್ರ ಇದು. ಇದುವರೆಗೂ ಅವರು ಮಾಡಿರದಂತಹ ಪಾತ್ರ ಈ ಚಿತ್ರದಲ್ಲಿರುತ್ತದೆ. ಹಲವಾರು ಚಿತ್ರಗಳಲ್ಲಿ ಅವರು ಬಿಜಿಯಾಗಿದ್ದರೂ ಕಥೆ ಕೇಳಿದ ಕೂಡಲೆ ಈ ಚಿತ್ರವನ್ನು ಒಪ್ಪಿಕೊಂಡರು. ಮೊದಲು ಅವರ ಭಾಗದ ಚಿತ್ರೀಕರಣ ಮುಗಿಸುತ್ತೇನೆ" ಎಂದರು ಇಂದ್ರಜಿತ್.

ಬೆಂಗಳೂರು, ಚೆನ್ನೈ ಮತ್ತು ಮದ್ರಾಸ್ ನಲ್ಲಿ ಶೂಟಿಂಗ್
ಬೆಂಗಳೂರು, ಚೆನ್ನೈ ಮತ್ತು ಮದ್ರಾಸ್ ನಲ್ಲಿ ಲವ್ ಯು ಆಲಿಯ ಚಿತ್ರೀಕರಣ ನಡೆಯಲಿದೆ. ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಅವರ ಸಂಗೀತ, ಸಂತೋಷ್ ರೈ ಪತಾಜೆ ಅವರ ಛಾಯಾಗ್ರಹಣ ಇದೆ.


Click it and Unblock the Notifications











