ನಿರ್ಮಾಪಕ ಕೆ ಮಂಜು 'ಕೊಬ್ರಿ ಮಂಜು' ಆದ ಕಥೆ ಇದು

ಮನೆಯಲ್ಲಿರುತ್ತಿದ್ದ ಕೊಬ್ಬರಿಗಳನ್ನು ಮಂಜು ಯಾರಿಗೂ ಗೊತ್ತಾಗದ ಹಾಗೆ ಕದ್ದು ಅಂಗಡಿಗೆ ಮಾರುತ್ತಿದ್ದರು. ಬಂದ ಹಣದಲ್ಲಿ ತಮ್ಮ ಬಾಲ್ಯದ ಜೀವನದಲ್ಲಿ ಈ ಹಣದಿಂದ ಸಿನಿಮಾ ನೋಡುವ ಆಸೆಗಳನ್ನು ಪೂರೈಸಿಕೊಳ್ಳುತ್ತಿದ್ದರಂತೆ.
ಅದರಲ್ಲೂ ತಾನು ಹೆಚ್ಚಾಗಿ ನೋಡುತ್ತಿದ್ದದ್ದು ವಿಷ್ಣುವರ್ಧನ್ ಸಿನಿಮಾಗಳನ್ನು. ಅಲ್ಲಿಂದ ಊರಿನ ಜನ ನನ್ನನ್ನು ಕೊಬ್ರಿ ಮಂಜು ಎಂದು ಕರೆಯಲಾರಂಭಿಸಿದರು ಎಂದು ನಿರ್ಮಾಪಕ ಕೆ ಮಂಜು 'ಕೊಬ್ರಿ ಮಂಜು' ಆದ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಿದ್ದಾರೆ.
ಅಂದು ಕೊಬ್ರಿ ಕದ್ದು ಡಾ.ವಿಷ್ಣು ಚಿತ್ರ ನೋಡುತ್ತಿದ್ದ ಇದೇ ಮಂಜು ವಿಷ್ಣುವರ್ಧನ್ ಅಭಿನಯದ ಕೆಲ ಚಿತ್ರಗಳನ್ನ ನಿರ್ಮಿಸಿ ಅವರಿಗೆ ಹತ್ತಿರವಾದರು. ವಿಷ್ಣು ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿರುವ ಮಂಜು ತನ್ನ ಗುರುವಿಗೆ ಟ್ರಿಬ್ಯೂಟ್ ಸಲ್ಲಿಸಲು ಯೋಜನೆ ಸಿದ್ದ ಪಡಿಸುತ್ತಿದ್ದಾರೆ.
ತನ್ನ ಐವತ್ತನೇ ಚಿತ್ರ ವಿಷ್ಣುವರ್ಧನ್ ಅವರದ್ದೇ ಆಗಬೇಕೆನ್ನುವುದು ಮಂಜು ಅವರ ಕನಸು. ಆದರೆ ವಿಷ್ಣು ಈಗ ನಮ್ಮನ್ನು ಅಗಲಿದ್ದಾರೆ. ಮತ್ತೆ ಹೇಗೆ ಮಂಜು ವಿಷ್ಣು ಸಿನಿಮಾ ಮಾಡುತ್ತಾರೆ ಎನ್ನುವ ಸಂದೇಹಕ್ಕೆ ಮಂಜು ಉತ್ತರಿಸುವುದು ಹೀಗೆ " ವಿಷ್ಣುವರ್ಧನ್ ಚಿತ್ರ ಸಂಪೂರ್ಣ animation ಚಿತ್ರವಾಗಿರುತ್ತದೆ. ವಿಷ್ಣು ಅವರನ್ನು animated ಮಾಡಿ ಸಿಂಹದಂತೆ ಘರ್ಜಿಸಲು ವ್ಯವಸ್ಥೆ ಮಾಡುವುದು ನನ್ನ ಕನಸು' ಎಂದಿದ್ದಾರೆ.
ಪ್ರಸ್ತುತ ಮೂವತ್ತೇಳು ಚಿತ್ರಗಳನ್ನು ತನ್ನ ಪ್ರೊಫೈಲ್ ನಲ್ಲಿ ಇಟ್ಟುಕೊಂಡಿರುವ ಮಂಜು, ಐವತ್ತನ್ನು ಸಮೀಪಿಸಲು ಕನಿಷ್ಠ ಇನ್ನೆರಡು ಮೂರು ವರ್ಷಗಳು ಬೇಕಾಗಬಹುದು.
ಆಮೇಲಷ್ಟೇ ವಿಷ್ಣು ಸರ್ ಚಿತ್ರವನ್ನು ಈ ರೀತಿ ತೋರಿಸಲು ಸಾಧ್ಯ. ಆದರೆ ಇಂಥದೊಂದು ಸಿನಿಮಾ ಮಾಡುವ ಕನಸನ್ನು ಮಾತ್ರ ನಾನು ಈಗಿಂದಲೇ ಕಾಣುತ್ತಿದ್ದೇನೆ ಎಂದು ಮಂಜು ಹೇಳಿದ್ದಾರೆ.
ಕಥೆ, ಚಿತ್ರಕಥೆ, ನಿರ್ದೇಶಕರ ಬಗ್ಗೆ ಇನ್ನು ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ನನ್ನ ಐವತ್ತನೇ ಚಿತ್ರವನ್ನು ಈ ರೀತಿ ಮಾಡಿದರೆ ಹೇಗೆ ಎನ್ನುವ ಆಲೋಚನೆಯಲ್ಲಿದ್ದೇನೆ. ಬರುವ ದಿನಗಳಲ್ಲಿ ಇದಕ್ಕೊಂದು ಸ್ಪಷ್ಟ ರೂಪ ಸಿಗುತ್ತೆ ಎನ್ನುವ ನಂಬಿಕೆ ನನ್ನಲ್ಲಿದೆ ಎಂದು ಕೊಬ್ರಿ ಮಂಜು ವಿಶ್ವಾಸದ ಮಾತನ್ನಾಡಿದ್ದಾರೆ (ಒನ್ ಇಂಡಿಯಾ)


Click it and Unblock the Notifications











