ರೇಡಿಯೋ ಜಾಕಿಯಾದ ಜಗ್ಗೇಶ್ ಪತ್ನಿ ಪರಿಮಳ
ರೇಡಿಯೋ ಸಿಟಿ 91.1 ಎಫ್ ಎಂ ನಲ್ಲಿ ಮೂಡಿ ಬರುತ್ತಿರುವ ಹೊಚ್ಚ ಹೊಸ ಕಾರ್ಯಕ್ರಮ 'ಪರಿಚಯ ವಿತ್ ಪರಿಮಳ' ಮೂಲಕ ರೇಡಿಯೋ ಜಾಕಿಯಾಗಿದ್ದಾರೆ ನವರಸ ನಾಯಕ ಜಗ್ಗೇಶ್ ಪತ್ನಿ ಪರಿಮಳ.
'ಪರಿಚಯ ವಿತ್ ಪರಿಮಳ' ಸ್ಪೆಷಾಲಿಟಿ ಏನಂದ್ರೆ, ನಾನಾ ರಂಗಗಳಲ್ಲಿ ಹೆಸರು ಮಾಡಿರುವ ಸೆಲೆಬ್ರಿಟಿಗಳ ಪತ್ನಿಯರೇ ಇಲ್ಲಿನ ಅತಿಥಿಗಳು.!

ಸಾಮಾನ್ಯವಾಗಿ ಸೆಲೆಬ್ರಿಟಿಗಳ ಪತ್ನಿಯರೆಂದರೆ, ಅವರಿಗೆ ಸಮಸ್ಯೆಗಳೇ ಇರುವುದಿಲ್ಲ. ಸುಖದ ಸುಪ್ಪತ್ತಿಗೆಯಲ್ಲಿರುತ್ತಾರೆ...ಎಂಬಿತ್ಯಾದಿ ಭಾವನೆಗಳು ಜನರಲ್ಲಿ ಮನೆಮಾಡಿರುತ್ತದೆ. ಆದರೆ, ವಾಸ್ತವ ಸಂಗತಿಯೇ ಬೇರೆ. ಎಂಥಾ ಸೆಲೆಬ್ರಿಟಿಗಳ ಕೈ ಹಿಡಿದವರೇ ಆದರೂ, ಅವರಿಗೂ ವೈಯಕ್ತಿಕ ಬಯಕೆ, ನಿರೀಕ್ಷೆಗಳಿರುತ್ತವೆ.
ಖ್ಯಾತಿಯ ಉತ್ತುಂಗದಲ್ಲಿರುವ ವ್ಯಕ್ತಿಯ ಪತ್ನಿಯಾಗಿರುವುದರಿಂದ ತಮ್ಮ ಮನಸ್ಸಿನ ಭಾವನೆಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳುವ ಸ್ವಾತಂತ್ರ್ಯ ಕೂಡ ಹಲವು ಬಾರಿ ಇಲ್ಲದಂತಾಗಿರುತ್ತದೆ. ಹೀಗೆ ಎಲ್ಲೂ ಹೊರಬರದೆ, ಉಳಿದುಹೋದ ಮಾತುಗಳನ್ನು ಜನಸಾಮಾನ್ಯರಿಗೆ ಅವರದ್ದೇ ದನಿಯಲ್ಲಿ ಕೇಳಿಸುವುದು 'ಪರಿಚಯ ವಿತ್ ಪರಿಮಳ' ಕಾರ್ಯಕ್ರಮದ ಉದ್ದೇಶ.

ಅಂದಹಾಗೆ, ಪರಿಮಳ ಜಗ್ಗೇಶ್ ಈ ಕಾರ್ಯಕ್ರಮದ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈಗಾಗಲೇ ಏಳು ಮಂದಿ ಸಾಧಕರ ಪತ್ನಿಯರನ್ನು ಮಾತಾಡಿಸಿದ್ದಾರೆ. ಅವು ಈ ವಾರದಿಂದ ಸರದಿಯಲ್ಲಿ ಒಂದೊಂದೇ ಪ್ರಸಾರಗೊಳ್ಳಲಿದೆ.
ಕ್ರಿಕೆಟ್ ಪಟು ವೆಂಕಟೇಶ್ ಪ್ರಸಾದ್ ಪತ್ನಿ ಜಯಂತಿ ಪ್ರಸಾದ್, ಮಾಜಿ ಸಚಿವ ಆರ್.ಅಶೋಕ್ ಪತ್ನಿ ಪ್ರಮೀಳಾ ಅಶೋಕ್, ಇಂದ್ರಜಿತ್ ಲಂಕೇಶ್ ಪತ್ನಿ ಅರ್ಪಿತಾ, ಯೋಗರಾಜ್ ಭಟ್ ಪತ್ನಿ ರೇಣುಕಾ, ಗುರುಕಿರಣ್ ಪತ್ನಿ ಪಲ್ಲವಿಯವರೊಂದಿಗೆ ಪರಿಮಳ ಸಂದರ್ಶನ ನಡೆಸಿದ್ದಾರೆ.


Click it and Unblock the Notifications











