ಡಾ.ವಿಷ್ಣುವರ್ಧನ್ ನೀಡಿದ್ದ ಬಿಸ್ಕತ್ ಪ್ಯಾಕೆಟ್ ಕಥೆ
ಸಾಮಾನ್ಯವಾಗಿ ತಿಂಗಳ ಕೊನೆಯ ವಾರಾಂತ್ಯದಲ್ಲಿ ಡಾ.ವಿಷ್ಣುವರ್ಧನ್ ಅವರು ತಮ್ಮ 'ಸ್ನೇಹಲೋಕ' ತಂಡದೊಂದಿಗೆ ಜಯನಗರದಲ್ಲಿರುವ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುವುದು ವಾಡಿಕೆ. ಕ್ರಿಕೆಟ್ ಆಡುವುದು ಎನ್ನುವುದಕ್ಕಿಂತಲೂ ಎಲ್ಲರೂ ಒಟ್ಟಾಗಿ ಸೇರಿ.. ಉಭಯಕುಶಲೋಪರಿ ವಿಚಾರಿಸಿ.. ಕ್ರಿಕೆಟ್ ಆಡಿ.. ನಂತರ ಹೋಟೆಲ್ ನಲ್ಲಿ ಎಲ್ಲರೂ ಮಧ್ಯಾಹ್ನದ ಭೋಜನ ಮಾಡುತ್ತಿದ್ದರು.
2003 ಮೇ ತಿಂಗಳಲ್ಲಿ ನಾನು ಮತ್ತು ನನ್ನ ಕುಟುಂಬ ವಿಷ್ಣು ನೋಡುವ ಬಯಕೆಯಾಗಿ, ಅವರು ಕ್ರಿಕೆಟ್ ಆಡುವ ಮೈದಾನಕ್ಕೆ ಹೋದೆವು. ಆಟಗಾರರೆಲ್ಲ ಹಳದಿ ಮತ್ತು ಹಸಿರು ಬಣ್ಣದ ಉಡುಗೆ ತೊಟ್ಟು ತಾಲೀಮು ನಡೆಸುತ್ತಿದ್ದರು. ನನ್ನನ್ನು ನೋಡಿದ ನಿರ್ಮಾಪಕರಾದ ಬಿ.ವಿಜಯ್ ಕುಮಾರ್ ಬನ್ನಿ ಎಂದು ವಿಷ್ಣು ಅವರ ಬಳಿ ಕರೆದೊಯ್ದರು. ವಿಷ್ಣು ನೋಡಿದೊಡನೆ ರೋಮಾಂಚನಗೊಂಡೆ.

ನಾಗರಹಾವಿನ ರಾಮಾಚಾರಿ, ಭೂತಯ್ಯನ ಮಗ ಅಯ್ಯುವಿನ ಗುಳ್ಳ, ಹೊಂಬಿಸಿಲಿನ ನಟರಾಜ್, ಬಂಧನದ ಹರೀಶ್, ಸುಪ್ರಭಾತದ ವಿಜಯ್, ಮುತ್ತಿನ ಹಾರದ ಕ್ಯಾಪ್ಟನ್ ಅಚ್ಚಪ್ಪ, ಸೂರ್ಯವಂಶದ ಸತ್ಯಮೂರ್ತಿ ಇವರೇನಾ ಎಂದು ಒಮ್ಮೆ ಆಲೋಚಿಸಿದೆ. ಕಾರಣ ವಿಷ್ಣು ಎಲ್ಲರಂತೆ ತಾನೂ ಸಹ ಸರಳ ಉಡುಗೆಯಲ್ಲಿ ಒಂದು ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕುಳಿತ್ತಿದ್ದರು.
ಯಜಮಾನರ ಕೈ ಕುಲುಕಿ ನನ್ನ ಕುಟುಂಬವನ್ನು ಪರಿಚಯಿಸಿದೆ. ಕುಳಿತುಕೊಳ್ಳಿ ಎಂದು ಪಕ್ಕದಲ್ಲಿದ್ದ ಮೂರ್ನಾಲ್ಕು ಕುರ್ಚಿಗಳನ್ನು ನಮ್ಮ ಬಳಿ ಎಳೆದು ಕೂರಿಸಿದರು.
ವಿಷ್ಣು ನಮ್ಮನ್ನು ಮೊದಲು ಕೇಳಿದ್ದು ''ತಿಂಡಿ ಆಯ್ತಾ. ಈ ಬಿಸಿಲಿನಲ್ಲಿ ಪಾಪ ಪುಟ್ಟ ಮಗುವನ್ನು ಎತ್ತಿಕೊಂಡು ಬಂದಿದ್ದೀರಾ ಬೇರೆ. ರಾಧು (ವಿಷ್ಣು ಸಹಾಯಕ ರಾಧಾಕೃಷ್ಣ) ಕಾರ್ ನಲ್ಲಿರುವ ಬಿಸ್ಕತ್ ಪ್ಯಾಕೆಟ್ ತೆಗೆದುಕೊಂಡು ಬಾ'' ಎಂದು ಹೇಳಿದರು. ಕೂಡಲೇ ನಾನು "ಸರ್ ನಮ್ಮೆಲ್ಲರ ತಿಂಡಿ ಆಗಿದೆ, ಪರ್ವಾಗಿಲ್ಲ" ಎಂದೇ. ಆಗ ವಿಷ್ಣು "ನಿಮಗಲ್ಲ ನಿಮ್ಮ ಪುಟ್ಟ ಮಗುವಿಗೆ" ಎಂದರು. ದಾದಾ ಅವರ ಸಮಯ ಪ್ರಜ್ಞೆ, ಹಾಸ್ಯ ಮನೋಭಾವ ಕಂಡು ಚಕಿತನಾದೆ.

ಸ್ವಲ್ಪ ಲೋಕಾರೂಢಿಯಾಗಿ ನಮ್ಮೊಂದಿಗೆ ಮಾತನಾಡಿದ ವಿಷ್ಣು ಆನಂತರ ಆಟವಾಡಲು ಸಿದ್ದರಾದರು. ಹೊರಡುವ ಮುನ್ನ ಅವರೊಂದಿಗೆ ನಮ್ಮ ಫ್ಯಾಮಿಲಿ ಫೋಟೋ ತೆಗೆಸಿಕೊಂಡೆನು. ನಾವು ಮೈದಾನದಿಂದ ಗೇಟ್ ವರೆಗೂ ನಡೆದುಕೊಂಡು ಹೋಗುವುದನ್ನು ವಿಷ್ಣು ಅವರು ಒಂದೆರಡು ಬಾರಿ ತಿರುಗಿ ನೋಡಿದರು. ಅವರು ನಮ್ಮ ಬಳಿ ಏನೋ ಹೇಳುವ ವಿಷಯ ಇತ್ತೇ.? ಗೊತ್ತಿಲ್ಲ. ಗೇಟ್ ನಿಂದ ಹೊರಹೋಗುವ ಮೊದಲು ನಾನು ದಾದಾ ಅವರನ್ನು ಬೈ ಎಂದು ಕೈಬೀಸಿದೆ.
ಸ್ವಲ್ಪ ದಿನಗಳ ನಂತರ ಒಂದು ಮಧ್ಯಾಹ್ನ ನಾನು ವಿಷ್ಣು ಬಗ್ಗೆ ಬರೆದಿದ್ದ ಲೇಖನಗಳನೆಲ್ಲಾ ತಿರುವಿ ಹಾಕುತ್ತಲಿದ್ದೆ. ಒಂದು ಪುಟದಲ್ಲಿ ಮಾರಿ ಬಿಸ್ಕತ್ ಪ್ಯಾಕೆಟ್ ನ ಕವರ್ ನೋಡಿದೆ. ಆಶ್ಚರ್ಯಗೊಂಡು ಪತ್ನಿಯಲ್ಲಿ ವಿಚಾರಿಸಿದೆ. ಕಾರಣ ತಿಳಿದು ಮೂಕವಿಸ್ಮಿತನಾದೆ. ಅಂದು ವಿಷ್ಣು ಅವರು ನನ್ನ ಮಗಳಿಗೆ ಕೊಟ್ಟಿದ್ದ ಬಿಸ್ಕತ್ ಪ್ಯಾಕೆಟ್ ಉಪಯೋಗಿಸಿದ ಬಳಿಕ, ಅದನ್ನು ನನ್ನಾಕೆ ದಾದಾ ಅವರ ಸವಿನೆನಪಿಗಾಗಿ ನೀಟಾಗಿ ಓಪನ್ ಮಾಡಿ ಫೈಲ್ ನಲ್ಲಿ ಇಟ್ಟಿದ್ದಳು. ಪ್ರೀತಿ ಅಭಿಮಾನಕ್ಕೆ ಮುಪ್ಪಿಲ್ಲ.
ಇಂದು ದೈಹಿಕವಾಗಿ ವಿಷ್ಣು ಅವರು ನಮ್ಮೊಂದಿಗೆ ಇಲ್ಲದಿದ್ದರೂ ಸಹ ಅವರ ನೆನಪು ಸದಾ ಕಾಡುತ್ತಲಿರುತ್ತದೆ. ಅವರೊಂದಿಗೆ ನನ್ನ ಕೆಲವು ಭೇಟಿಗಳು ಇಂದಿಗೂ ಅಚ್ಚಹಸುರಾಗಿದೆ. "ಅಭಿಮಾನಿಗಳೇ ನನ್ನ ಪ್ರಾಣ, ಅಭಿಮಾನಿಗಳೇ ನನ್ನ ಧ್ಯಾನ''
ಅಂದ್ಹಾಗೆ, ತಮ್ಮ ಅನುಭವಗಳನ್ನು ಇಷ್ಟೊತ್ತು ಹಂಚಿಕೊಂಡಿದ್ದು ಪತ್ರಕರ್ತರಾದ ಜನಾರ್ಧನ ರಾವ್ ಸಾಳಂಕೆ. ಈಗಾಗಲೇ ಇವರು ಡಾ.ವಿಷ್ಣುವರ್ಧನ್ ರವರ ಕುರಿತಾಗಿ ಸುಮಾರು 6 ಪುಸ್ತಕಗಳನ್ನು ಬರೆದಿದ್ದಾರೆ.


Click it and Unblock the Notifications