ಒನ್ಇಂಡಿಯಾ ಜೊತೆ ನಟ ಕಿಶೋರ್ ಮಾತುಕತೆ
ಕನ್ನಡದ ಪ್ರತಿಭಾವಂತ ನಟರಲ್ಲಿ ಕಿಶೋರ್ ಸಹ ಒಬ್ಬರು. ಅವರೊಬ್ಬ ಅಪ್ಪಟ ಕಲಾವಿದ. 'ಕಂಟಿ' ಚಿತ್ರದ ಮೂಲಕ ಕನ್ನಡ ಬೆಳ್ಳಿಪರದೆಗೆ ಅಡಿಯಿಟ್ಟ ಅವರು, ಆಕಾಶ್, ಕಲ್ಲರಳಿ ಹೂವಾಗಿ, ದುನಿಯಾ, ಕಬಡ್ಡಿ, ಕಳ್ಳರ ಸಂತೆ ಚಿತ್ರಗಳಲ್ಲಿ ಅಮೋಘ ಅಭಿನಯ ನೀಡಿದ್ದಾರೆ.
ಕೇವಲ ಕನ್ನಡದಷ್ಟೇ ಸೀಮಿತವಾಗದ ನಟ. ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಈಗ ಹಿಂದಿ ಚಿತ್ರಗಳತ್ತಲೂ ಗಮನ ಹರಿಸಿದ್ದಾರೆ. ಎಷ್ಟೇ ಬಿಜಿಯಾಗಿದ್ದರೂ ಕೊಂಚ ಬಿಡುವುದು ಮಾಡಿಕೊಂಡು ನಮ್ಮ ಒನ್ಇಂಡಿಯಾ ಕಚೇರಿಗೆ ಭೇಟಿ ನೀಡಿದ್ದರು.
ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. ಸ್ಲೈಡ್ ಗಳಲ್ಲಿ ಓದುತ್ತಾ ಸಾಗಿ. ಕಿಶೋರ್ ತಮ್ಮ ಮುಂದಿನ ಚಿತ್ರಗಳು, ಹವ್ಯಾಸಗಳು, ಡ್ರೀಮ್ ರೋಲ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಒನ್ಇಂಡಿಯಾ ಕನ್ನಡಕ್ಕಾಗಿಯೇ ಕೊಟ್ಟ ವಿಶೇಷ ಸಂದರ್ಶನವಿದು. ಫೋಟೋಗಳಲ್ಲಿ ಒನ್ಇಂಡಿಯಾ ಸಿಬ್ಬಂದಿಯನ್ನೂ ಕಾಣಬಹುದು.

ಅಟ್ಟಹಾಸ ಆಯ್ತು ಮುಂದಿನ ಚಿತ್ರ ಯಾವುದು?
ಜಟ್ಟಾ ಹಾಗೂ ಶಸ್ತ್ರ ಎಂಬೆರಡೆ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಜಟ್ಟಾ ಚಿತ್ರ ಗಂಡು ಮತ್ತು ಹೆಣ್ಣಿನ ಅಹಂ ಬಗೆಗಿನ ಕಥಾವಸ್ತುವನ್ನು ಒಳಗೊಂಡಿದೆ. ಈ ಚಿತ್ರಕ್ಕೆ ಗಿರಿರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಶಸ್ತ್ರ ಚಿತ್ರ ನಕ್ಸಲ್ ಚಳವಳಿ ಬಗೆಗಿನ ಚಿತ್ರವಿದು. ಈ ಚಿತ್ರದ ಶೂಟಿಂಗ್ ನಡೀತಿದೆ. ಡಾ.ವಾಸು ನಿರ್ದೇಶಿಸುತ್ತಿರುವ ಚಿತ್ರವಿದು.

ಮತ್ತೆ ಪೋಲೀಸ್ ಪಾತ್ರ ಯಾವಾಗ?
ಸದ್ಯಕ್ಕಂತೂ ಇಲ್ಲ. ಯಾವುದೇ ಪೋಲೀಸ್ ಪಾತ್ರಗಳು ಹುಡುಕಿಕೊಂಡು ಬಂದಿಲ್ಲ.

ಕನ್ನಡದಲ್ಲಿ 'ಡಬ್ಬಿಂಗ್' ಬೇಕೆ,ಬೇಡವೆ?
ನನ್ನ ಪ್ರಕಾರ ಸಿನಿಮಾ ಎನ್ನುವುದು ಪಕ್ಕಾ ವ್ಯಾಪಾರವಿದ್ದಂತೆ. ರೀಮೇಕ್ ಚಿತ್ರಗಳಿರಬೇಕಾದರೆ ಡಬ್ಬಿಂಗ್ ಯಾಕೆ ಬೇಡ. ಡಬ್ಬಿಂಗ್ ಚಿತ್ರಗಳು ಬರುವುದರಿಂದ ನಮ್ಮಲ್ಲಿ ಇನ್ನೂ ಉತ್ತಮ ಚಿತ್ರಗಳು ಬರುತ್ತವೆ. ಗುಣಮಟ್ಟ, ಸೃಜನಶೀಲತೆ ಹೆಚ್ಚುತ್ತದೆ.

ಅವಕಾಶ ಸಿಕ್ಕಿದರೆ ಮತ್ತೆ ಕನ್ನಡ ಪಾಠ ಮಾಡ್ತೀರಾ?
ಖಂಡಿತ. ಆದರೆ ಸದ್ಯಕ್ಕೆ ಟೈಮೇ ಇಲ್ಲದಂತಾಗಿದೆ. ಕನ್ನಡದ ಪ್ರೇಕ್ಷಕರೇ ನನಗೆ ಗುರುಗಳಿದ್ದಂತೆ. ಇಲ್ಲೇ ಸಾಕಷ್ಟು ಪಾಠ ಕಲಿತಿದ್ದೇನೆ.

ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಆಕ್ಟೀವ್ ಆಗಿದ್ದೀರಾ?
ಈಗೀಗಷ್ಟೇ ಫೇಸ್ ಬುಕ್, ಟ್ವಿಟ್ಟರ್ ತಾಣಗಳಿಗೆ ಅಡಿಯಿಟ್ಟಿದ್ದೇನೆ. ಫೇಸ್ ಬುಕ್ (Kishore-Actor) ನಂತ ತಾಣಗಳಲ್ಲಿ ನನ್ನ ಬಗ್ಗೆ ನಾನು ಹೇಳಿಕೊಳ್ಳಲು ಸಂಕೋಚ. ಹಾಗಾಗಿ ಹೆಚ್ಚಾಗಿ ಆಕ್ಟೀವ್ ಆಗಿಲ್ಲ. ಇನ್ನು ಟ್ವಿಟ್ಟರ್ ನಲ್ಲೂ ಅಕೌಂಟ್ ತೆರೆದಿದ್ದೇನೆ (@actorkishore). ಆಗಾಗ ಟ್ವೀಟ್ ಮಾಡುತ್ತಿರುತ್ತೇನೆ.

ನಿಮ್ಮ ಕನಸಿನ ಪಾತ್ರ ಯಾವುದಾರೂ ಇದೆಯಾ?
ಆ ರೀತಿ ಯಾವುದೂ ಇಲ್ಲ. ಆದರೂ ಕಾಮಿಡಿ, ಪೀರಿಯಡ್ ಫಿಲಂನಲ್ಲಿ ಅಭಿನಯಿಸಬೇಕೆಂದಿದ್ದೇನೆ. ಮುಖ್ಯವಾಗಿ ಟಿಪ್ಪು ಸುಲ್ತಾನ್ ಪಾತ್ರ ಮಾಡಬೇಕು ಎಂಬುದು ನನ್ನ ಕನಸು.

ನಿಮ್ಮ ಹವ್ಯಾಸಗಳ ಬಗ್ಗೆ ತಿಳಿಸಿ?
ಚಿತ್ರರಂಗಕ್ಕೆ ಬಂದ ಮೇಲೆ ಎಲ್ಲಾ ಹವ್ಯಾಸಗಳು ಮರೆತು ಹೋದವು. ಮುಂಚೆ ಫ್ಯಾಷನ್ ಡಿಸೈನ್ ಮಾಡುತ್ತಿದ್ದೆ. ಚಿತ್ರೀಕರಣದಲ್ಲಿರಬೇಕಾದರೆ ಬಹಳಷ್ಟು ಸಮಯ ಸಿಗುತ್ತಿರುತ್ತದೆ. ಆಗೆಲ್ಲಾ ಪುಸ್ತಕಗಳೇ ನನಗೆ ಸಂಗಾತಿ. ಅದು ಬಿಟ್ಟರೆ ಸಿಗರೇಟು, ಕುಡಿತ ಇದ್ಯಾವ ಅಭ್ಯಾಸಗಳು ನನಗಿಲ್ಲ.

ಕನ್ನಡದಲ್ಲಿ ಯಾವ ರೀತಿಯ ಪುಸ್ತಕಗಳು ಇಷ್ಟ?
ಪೂರ್ಣಚಂದ್ರ ತೇಜಸ್ವಿ ಅವರ ಕೃತಿಗಳೆಂದರೆ ಇಷ್ಟ. ಕಾಡು, ವೈಜ್ಞಾನಿಕ ವಸ್ತು, ಪತ್ತೇದಾರಿ ವಿಧಾನದ ವಸ್ತುಗಳು ಇಷ್ಟ. ಅಟ್ಟಹಾಸ ಚಿತ್ರ ನನ್ನ ಅಭಿರುಚಿಗಳಿಗೆ ತುಂಬಾ ಹತ್ತಿರವಾಗಿತ್ತು. ಹಾಗಾಗಿಯೇ ಚಿತ್ರ ಚೆನ್ನಾಗಿ ಮೂಡಿಬಂತು.

ಚಿತ್ರ ನಿರ್ದೇಶನ ಏನಾದರೂ ಕೈಗೆತ್ತಿಕೊಳ್ಳುತ್ತೀರಾ?
ನಟನಾಗಿಯೇ ನಾನಿನ್ನೂ ಏನೇನು ಕಲಿತಿಲ್ಲ. ಇನ್ನು ಚಿತ್ರ ನಿರ್ದೇಶನ ಮಾತು ತುಂಬಾ ದೂರವಾದದ್ದು.

ಚಿತ್ರರಂಗಕ್ಕೆ ಬರುವ ಹೊಸಬರಿಗೆ ನಿಮ್ಮ ಕಿವಿಮಾತು?
ಅವರಿಗೆ ಹಿತವಚನ ಹೇಳುವಷ್ಟು ಹಿರಿಯ ನಾನಲ್ಲ. ಆದರೂ ಚಿತ್ರರಂಗಕ್ಕೆ ಬರುವ ಮುನ್ನ ಚಿತ್ರರಂಗದ ಬಗ್ಗೆ ಒಂದಷ್ಟು ಅರಿವಿರಬೇಕು. ಇದೊಂದು ಜವಾಬ್ದಾರಿಯುತವಾದ ಮಾಧ್ಯಮ. ನಟನಾಗಬೇಕು ಎಂದಿರುವರಿಗೆ ಸಮಾಜದ ಬಗ್ಗೆ ಕಾಳಜಿ ಇರಬೇಕು.

ಈಗಲೂ ಟೂ ವ್ಹೀಲರ್ ನಲ್ಲೇ ಓಡಾಡ್ತೀರಾ?
ಹೌದು. ನನಗೆ ಕಂಪೋರ್ಟಬಲ್ ಆಗಿರುತ್ತದೆ. ಜನ ಅವರವರ ಕೆಲಸಗಳಲ್ಲಿ ಬಿಜಿಯಾಗಿರುತ್ತಾರೆ. ಯಾರೂ ತಡೆದು ನಿಲ್ಲಿಸಿ ಮಾತನಾಡುವ ಗೋಜಿಗೆ ಹೋಗ್ತಾರೆ ಹೇಳಿ ಎಂದು ಮುಗುಳ್ನಕ್ಕರು.


Click it and Unblock the Notifications











