ಮಂಡ್ಯದಲ್ಲಿ 'ದೊಡ್ಮನೆ ಹುಡುಗ' ಪುನೀತ್ ರ ದೊಡ್ಡತನ
ತೆರೆಮೇಲೆ ಉದ್ದುದ್ದ ಡೈಲಾಗ್ಸ್ ಹೇಳೋದು ಮಾತ್ರ ಅಲ್ಲ. ನಿಜ ಜೀವನದಲ್ಲೂ ಪುನೀತ್ ರಾಜ್ ಕುಮಾರ್ ಸಹೃದಯಿ, ಸಮಾಜಮುಖಿ ಅನ್ನೋದು ಎಲ್ಲರಿಗೂ ಗೊತ್ತು.
ಅನೇಕ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣಕಾಸಿನ ನೆರವು ನೀಡುತ್ತಿರುವ ಪುನೀತ್ ರಾಜ್ ಕುಮಾರ್ ಇಂದು ಮಂಡ್ಯದಲ್ಲಿ ಮೃತ ರೈತರ ಕುಟುಂಬಗಳನ್ನ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. [ಕನ್ನಡ ಉಳಿಸಿ, ಬೆಳೆಸಲು ಅಪ್ಪು ಅವರಿಂದ ಚಿನ್ನದ ಕೊಡುಗೆ]
ಮಂಡ್ಯ ಜಿಲ್ಲೆಯ ಪಾಂಡವಪುರದ ಸಕ್ಕರೆ ಕಾರ್ಖಾನೆಯೊಂದರಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ 'ದೊಡ್ಮನೆ ಹುಡುಗ' ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಇದೇ ವೇಳೆ ಆತ್ಮಹತ್ಯೆಗೆ ಶರಣಾದ ಅಲ್ಲಿನ ಅನ್ನದಾತರ ಮನೆಗೆ ಪುನೀತ್ ತೆರಳಿದರು.
ಐವರು ಮೃತ ರೈತರ ಕುಟುಂಬಗಳನ್ನ ಭೇಟಿ ಮಾಡಿದ ಪುನೀತ್ ರಾಜ್ ಕುಮಾರ್ ಎಲ್ಲರಿಗೂ ಆರ್ಥಿಕ ಸಹಾಯ ಮಾಡಿದ್ದಾರೆ. ''ನಮಗೆಲ್ಲಾ ಅನ್ನ ಕೊಡುವ ರೈತರು ದೇವರು. ಅವರುಗಳು ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳಬಾರದು. ಏನೇ ಆದರೂ ಧೈರ್ಯದಿಂದ ಎದುರಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು'' ಅಂತ ಪುನೀತ್ ರಾಜ್ ಕುಮಾರ್ ಹೇಳಿದರು. [ಹೆಚ್ಚುದಿನ ಬದುಕುಳಿಯದ ಇಬ್ಬರ ಜೊತೆ ಮಗುವಾದ ಪುನೀತ್]
ಬರೀ ಶೂಟಿಂಗು, ಔಟಿಂಗು ಅಂತ ಬಣ್ಣದ ಪ್ರಪಂಚದಲ್ಲೇ ತೇಲಾಡುವ ಸಿನಿಮಾ ಸ್ಟಾರ್ ಗಳ ಪೈಕಿ ಪುನೀತ್ ರಾಜ್ ಕುಮಾರ್ ವಿಭಿನ್ನ ಅಂತ ಅನಿಸಿಕೊಳ್ಳೋದು ಇದೇ ಕಾರಣಕ್ಕೆ. ಎಷ್ಟೇ ಆಗಲಿ ಅವರದ್ದು 'ದೊಡ್ಮನೆ ಕುಟುಂಬ' ಅಲ್ಲವೇ.


Click it and Unblock the Notifications












