ಗ್ಯಾಂಗ್ರಿನ್ ನಿಂದ ಕಾಲು ಕಳೆದುಕೊಂಡ ಹಿರಿಯ ನಟ ಸತ್ಯಜಿತ್
ಹಿರಿಯ ಕಲಾವಿದ ಸತ್ಯಜಿತ್ ಗ್ಯಾಂಗ್ರಿನ್ ರೋಗದಿಂದ ತಮ್ಮ ಎಡಗಾಲನ್ನ ಕೆಳೆದುಕೊಂಡಿದ್ದಾರೆ. ಸತ್ಯಜಿತ್ ಮೂಲತಃ ಹುಬ್ಬಳ್ಳಿಯವರು. ಕೆ.ಎಸ್.ಆರ್.ಟಿ.ಸಿ ಬಸ್ ಡ್ರೈವರ್ ಆಗಿದ್ದ ಸತ್ಯಜಿತ್ ನಟನೆಗಾಗಿ ವೃತ್ತಿ ತೊರೆದರು.
ಕನ್ನಡದ ಹಿರಿಯ ಕಲಾವಿದ ಸತ್ಯಜಿತ್ ಅವರಿಗೆ 'ಗ್ಯಾಂಗ್ರಿನ್' ಇದ್ದ ಕಾರಣ, ತಮ್ಮ ಎಡಗಾಲನ್ನ ಕಳೆದುಕೊಂಡಿದ್ದಾರೆ. ಜೀವಕ್ಕೆ ಅಪಾಯವಿದ್ದ ಹಿನ್ನೆಲೆ ಎಡಗಾಲಿನ ತೊಡೆವರೆಗೂ ಕಾಲನ್ನ ಕತ್ತರಿಸಲಾಗಿದೆ. ಕಳೆದ ಜೂನ್ ತಿಂಗಳಿನಿಂದ ಸತ್ಯಜಿತ್ ಅವರಿಗೆ ಈ ಸಂಕಷ್ಟ ಎದುರಾಗಿದ್ದು, ಈಗ ಜೀವನಕ್ಕಾಗಿ ಸರ್ಕಾರದ ಸಹಾಯ ಕೇಳುತ್ತಿದ್ದಾರೆ.

ಕಳೆದ 10 ವರ್ಷದಿಂದ ಸತ್ಯಜಿತ್ ಅವರಿಗೆ ಸಕ್ಕರೆ ಕಾಯಿಲೆ ಇತ್ತು. ಅದಕ್ಕೆ ತಕ್ಕಂತೆ ಚಿಕಿತ್ಸೆ ಹಾಗೂ ಔಷಧಿಗಳನ್ನು ಕೂಡ ಪಡೆಯುತ್ತಿದ್ದರು. ಆದ್ರೆ, ಶೂಟಿಂಗ್ ಗಾಗಿ ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದ ಸತ್ಯಜಿತ್ ಅವರ ಆರೋಗ್ಯದಲ್ಲಿ ತಮಗೆ ಗೊತ್ತಿಲ್ಲದೆ 'ಗ್ಯಾಂಗ್ರಿನ್' ಆವರಿಸಿಕೊಂಡಿದ್ದು ಅಘಾತ ತಂದಿತ್ತು.
ಕಾಲು ತೆಗೆಯದಿದ್ದರೆ ಜೀವಕ್ಕೆ ಅಪಾಯವಿದೆ ಎಂಬ ವೈದ್ಯರ ಸಲಹೆ ಮೆರೆಗೆ ತಮ್ಮ ಎಡಗಾಲನ್ನ ಕತ್ತರಿಸಲಾಗಿದೆ.

ಸತ್ಯಜಿತ್ ಅವರು ಕಳೆದ 35 ವರ್ಷಗಳಿಂದ ತಮ್ಮ ನಟನೆಯ ಮೂಲಕ ಅಭಿಮಾನಿಗಳನ್ನ ರಂಜಿಸಿದ್ದಾರೆ. ಹಾಸ್ಯ ನಟನಾಗಿ, ಖಳನಟನಾಗಿ, ಪೋಷಕನಟನಾಗಿ ಸುಮಾರು 650ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಡಾ.ಅಂಬರೀಶ್, ಪ್ರಭಾಕರ್ ಅವರಿಂದ ಹಿಡಿದು ರವಿಚಂದ್ರನ್, ಉಪೇಂದ್ರ, ಸುದೀಪ್, ದರ್ಶನ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ದುನಿಯಾ ವಿಜಯ್ ಸೇರಿದಂತೆ ಎಲ್ಲ ನಟರ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

'ಭೂಮಿ ತಾಯಣೆ', 'ವರ್ಣಚಕ್ರ', 'ಅರುಣ ರಾಗ', 'ಬಂಧ ಮುಕ್ತ', 'ತಾಯಿಗೊಬ್ಬ ಕರ್ಣ', 'ಅತಿರಥ ಮಹಾರಥ', 'ಅಂತಿಮ ತೀರ್ಪು', 'ಆಪ್ತಮಿತ್ರ', 'ಅಪ್ಪು', 'ಅಭಿ', 'ದಾಸ', 'ವೀರಕನ್ನಡಿಗ' ಚಿತ್ರಗಳು ಸೇರಿದಂತೆ ಸುಮಾರು 650ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೀಗೆ ಪುನೀತ್ ರಾಜ್ ಕುಮಾರ್ ಅಭಿನಯದ 'ದೊಡ್ಮನೆ ಹುಡುಗ' ಚಿತ್ರದಲ್ಲೂ ಸತ್ಯಜಿತ್ ಕಾಣಿಸಿಕೊಂಡಿದ್ದರು. ಸತ್ಯಜಿತ್ ಅವರು ಅಭಿನಯಿಸಿರುವ ಇನ್ನೂ 8 ಸಿನಿಮಾಗಳು ಬಿಡುಗಡೆಗೆ ಸಿದ್ದವಾಗಿದೆಯಂತೆ.
ಮೂಲತಃ ಹುಬ್ಬಳಿಯವರಾದ ಸತ್ಯಜಿತ್ ಬಡಕುಟುಂಬದಲ್ಲಿ ಜನಿಸಿದ್ದರು. ಕೆ.ಎಸ್.ಆರ್.ಟಿ.ಸಿ ಬಸ್ ಡ್ರೈವರ್ ಆಗಿ ಕಾರ್ಯನಿರ್ಹಸುತ್ತಿದ್ದ ಸತ್ಯಜಿತ್, ಚಿಕ್ಕವಯಸ್ಸಿನಿಂದಲೂ ಹಾಡುವುದು, ನಟನೆ ಮಾಡುವುದು ಹವ್ಯಾಸವನ್ನ ಬೆಳಸಿಕೊಂಡಿದ್ದರು. ತದ ನಂತರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕ ನಂತರ ಡ್ರೈವರ್ ವೃತ್ತಿಗೆ ಗುಡ್ ಬೈ ಹೇಳಿ, ಪೂರ್ಣ ಪ್ರಮಾಣದಲ್ಲಿ ಕಲಾವಿದನಾಗಿ ತೊಡಗಿಸಿಕೊಂಡರು.
ಹೀಗೆ, ಮೂರುವರೆ ದಶಕಗಳಿಂದ ನಿರಂತರವಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕಲಾವಿದನ ಬದುಕು, ಈಗ ಹೇಳತೀರದಾಗಿದೆ. ಸದ್ಯ, ಸತ್ಯಜಿತ್ ಅವರಿಗೆ ಕೃತಕ ಕಾಲು ಅಳವಡಿಸಲು ಅವಕಾಶವಿದ್ದು, ಅದಕ್ಕಾಗಿ ಹಣದ ಸಹಾಯ ಬೇಕಿದೆ. ಯಾರ ಬಳಿಯೂ ಕೈಚಾಚಲೊಪ್ಪದ ಸತ್ಯಜಿತ್ ಅವರು, ಕಷ್ಟದಲ್ಲಿರುವ ಕಲಾವಿದರಿಗೆ ಪರಿಹಾರ ಕೊಡಿ ಅಂತ ಸಿ.ಎಂ.ಸಿದ್ಧರಾಮಯ್ಯನವರನ್ನ ಕೇಳುತ್ತಿದ್ದಾರೆ.


Click it and Unblock the Notifications











