ಚುನಾವಣೆ ಪ್ರಚಾರಕ್ಕೆ ನಟ ಯಶ್ ಧುಮುಕಿರುವುದರ ಹಿಂದಿನ ಗುಟ್ಟು ರಟ್ಟು.!
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿರುವಾಗಲೇ, ವಿವಿಧ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ನಟ ಯಶ್ ಮುಂದಾಗಿದ್ದಾರೆ. 'ಪಕ್ಷಕ್ಕಿಂತ ಅಭ್ಯರ್ಥಿ ಮುಖ್ಯ' ಅಂತ ಹೇಳಿರುವ ರಾಕಿಂಗ್ ಸ್ಟಾರ್ ಯಶ್, ನಿನ್ನೆ ಹಾಗೂ ಇವತ್ತು ಜೆ.ಡಿ.ಎಸ್ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ.
ಕೆ.ಆರ್.ನಗರದ ಜೆ.ಡಿ.ಎಸ್ ಅಭ್ಯರ್ಥಿ ಸಾ.ರಾ.ಮಹೇಶ್ ಹಾಗೂ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮ್ ದಾಸ್ ಗೆ ಬೆಂಬಲ ಸೂಚಿಸಿ ಮೈಸೂರಿನ ಬೀದಿಗಳಲ್ಲಿ ನಿನ್ನೆ ನಟ ಯಶ್ ರೋಡ್ ಶೋ ನಡೆಸಿದರು.
ಅಷ್ಟಕ್ಕೂ, ಸಾ.ರಾ.ಮಹೇಶ್ ಪರವಾಗಿ ಚುನಾವಣಾ ಪ್ರಚಾರಕ್ಕೆ ನಟ ಯಶ್ ಧುಮುಕಿದ್ದು ಯಾಕೆ ಎಂಬ ಗುಟ್ಟು ಈಗ ರಟ್ಟಾಗಿದೆ. ಸಾ.ರಾ.ಮಹೇಶ್ ಪರವಾಗಿ ಮತಯಾಚನೆ ಮಾಡಲು ಕಾರಣವೇನು ಎಂಬುದನ್ನ ಸ್ವತಃ ಯಶ್ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿರಿ...

ನಂಬಿಕೆ ಇರುವವರ ಮೇಲೆ ಮಾತ್ರ ಪ್ರಚಾರ.!
''ನಾನು ಜನರಿಂದ ಸ್ಟಾರ್ ಆಗಿದ್ದೇನೆ. ಮುಂದಿನ ಐದು ವರ್ಷ ಜನರ ಜೀವನ ಈ 10 ದಿನಗಳ ಕೆಲಸದ ಮೇಲೆ ನಿರ್ಧಾರ ಆಗುತ್ತದೆ. ಇದರಲ್ಲಿ ನನ್ನ ಕರ್ತವ್ಯ ಕೂಡ ಇದೆ. ನನಗೆ ನಂಬಿಕೆ ಇರುವವರು, ನನ್ನ ಸ್ನೇಹಿತರನ್ನು ಮಾತ್ರ ನಾನು ಬೆಂಬಲಿಸುತ್ತಿದ್ದೇನೆ. ಯಾವುದೇ ಪಕ್ಷ, ಸಿದ್ದಾಂತಕ್ಕೆ ನಾನು ಬೆಲೆ ಕೊಡಲ್ಲ'' ಅಂತಾರೆ ನಟ ಯಶ್.

ಸಾರಾ ಮಹೇಶ್ ಪರ ಪ್ರಚಾರ ಯಾಕೆ.?
''ಆಡಿದ ಮಾತನ್ನ ಸಾರಾ ಮಹೇಶ್ ತಪ್ಪುವುದಿಲ್ಲ. ನಾನು ಹಾಗೂ ಸಾರಾ ಮಹೇಶ್ ಬಹಳ ವರ್ಷಗಳಿಂದ ಸ್ನೇಹಿತರು. ಸಾರಾ ಮಹೇಶ್ ಅಧಿಕಾರಕ್ಕೆ ಬಂದರೆ, ನಾನು ಅವರ ಕೈಯಲ್ಲಿ ಕೆಲಸ ಮಾಡಿಸುತ್ತೇನೆ. ಅದು ನನ್ನ ಜವಾಬ್ದಾರಿ'' ಅಂತ ಹೇಳಿದ್ದಾರೆ ನಟ ಯಶ್.

ನಂಬಿಕೆ ಇರುವವರ ಮೇಲೆ ಮತ ಹಾಕಲಿ...
''ನಾನು ಎರಡು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿರುವೆ. ಇದರಿಂದ ಜನ ಕನ್ಫ್ಯೂಸ್ ಆಗಬಾರದು. ಯಾವ ಅಭ್ಯರ್ಥಿ ಕೆಲಸ ಮಾಡುತ್ತಾರೆ ಅಂತ ಜನರಿಗೆ ನಂಬಿಕೆ ಇರುತ್ತೋ, ಅವರಿಗೆ ಮತ ಹಾಕಲಿ'' ಎಂದಿದ್ದಾರೆ ನಟ ಯಶ್.

ಭರವಸೆ ಕೊಟ್ಟಿರುವ ಯಶ್
ಜನಪ್ರತಿನಿಧಿಯಾಗಿ ಉತ್ತಮ ಕೆಲಸ ಮಾಡುವ ಅಭ್ಯರ್ಥಿಗಳನ್ನ ಗೆಲ್ಲಿಸಲು ಹಾಗೂ ಸಮಾಜ ಸುಧಾರಿಸಲು ಚುನಾವಣಾ ಪ್ರಚಾರಕ್ಕೆ ನಟ ಯಶ್ ಧುಮುಕಿದ್ದಾರೆ. ತಾವು ಪ್ರಚಾರ ಮಾಡುತ್ತಿರುವ ಅಭ್ಯರ್ಥಿಗಳ ಕೈಯಲ್ಲಿ ಕೆಲಸ ಮಾಡಿಸುವೆ ಎಂಬ ಭರವಸೆಯನ್ನೂ ನಟ ಯಶ್ ನೀಡಿದ್ದಾರೆ. ಅಲ್ಲಿಗೆ, ಯಶ್ ಮೇಲೆ ನಂಬಿಕೆ ಇದ್ದವರು, ಯಶ್ ಪ್ರಚಾರ ಮಾಡುತ್ತಿರುವ ಅಭ್ಯರ್ಥಿಗಳಿಗೆ ಮತ ಚಲಾಯಿಸಬಹುದು.


Click it and Unblock the Notifications











