ಜೀವನ ಎಂಬ ಸಾಗರದಲ್ಲಿ ತಾನು ಎದುರಿಸಿದ ಕಷ್ಟ ಹಂಚಿಕೊಂಡ 'ಶಾಸ್ತ್ರಿ' ನಾಯಕಿ ಮಾನ್ಯ
ಶಾಸ್ತ್ರಿ, ವರ್ಷ, ಅಂಬಿ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ಮಾನ್ಯ ಆಮೇಲೆ ಇಂಡಸ್ಟ್ರಿಯಲ್ಲಿ ಕಾಣಿಸಿಕೊಂಡಿಲ್ಲ. ಕನ್ನಡದಲ್ಲಿ ಸಿನಿಮಾ ಮಾಡುವುದಕ್ಕೂ ಮುಂಚೆ ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲಿ ಹೆಚ್ಚು ಆಕ್ಟೀವ್ ಆಗಿದ್ದರು.
ಒಳ್ಳೆಯ ಸಿನಿಮಾ, ಖ್ಯಾತಿ, ಹಣ ಎಲ್ಲವೂ ಗಳಿಸಿದ್ದ ಮಾನ್ಯ ಇದ್ದಕ್ಕಿದ್ದಂತೆ ಬಣ್ಣದ ಲೋಕದಿಂದ ದೂರವಾದರು. 2010ರಲ್ಲಿ ಮಲಯಾಳಂನಲ್ಲಿ ಕೊನೆಯ ಸಿನಿಮಾ ಮಾಡಿರುವ ಬಗ್ಗೆ ಮಾಹಿತಿ ಇದೆ. ಆಮೇಲೆ ಎಲ್ಲೊದ್ರು, ಈಗ ಏನು ಮಾಡ್ತಿದ್ದಾರೆ ಎಂಬ ಕುತೂಹಲ ಕಾಡಿದೆ.
ಆದ್ರೆ, ಇನ್ಸ್ಟಾಗ್ರಾಂಲ್ಲಿ ಹೆಚ್ಚು ಸಕ್ರಿಯರಾಗಿರುವ ಮಾನ್ಯ ತಮ್ಮ ಕುರಿತಾದ ಅಪ್ಡೇಟ್ ನೀಡುತ್ತಲೇ ಇದ್ದಾರೆ. ಇದೀಗ, ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ವೊಂದನ್ನು ಹಾಕಿದ್ದು, ತನ್ನ ಜೀವನದಲ್ಲಿ ತಾನು ಎದುರಿಸಿ ಕಷ್ಟ, ನೋವು ಹಾಗೂ ಸವಾಲು ಹೇಗಿತ್ತು ಎಂದು ಹಂಚಿಕೊಂಡಿದ್ದಾರೆ. ಇದು ಮತ್ತೊಬ್ಬರಿಗೆ ಸ್ಫೂರ್ತಿ ಆಗಲಿ ಎಂಬ ಕಾರಣಕ್ಕೆ ಹಂಚಿಕೊಳಗಳ್ಳುತ್ತಿದ್ದೇನೆ ಎಂದು ಸಹ ಹೇಳಿದ್ದಾರೆ. ಅಷ್ಟಕ್ಕೂ, ಮಾನ್ಯ ಹಂಚಿಕೊಂಡಿದ್ದೇನು? ಏನಿದೆ ಅವರ ಇನ್ಸ್ಟಾ ಪೋಸ್ಟ್ನಲ್ಲಿ? ಮುಂದೆ ಓದಿ.....

ಚಿಕ್ಕವಯಸ್ಸಿನಲ್ಲಿ ತಂದೆ ಕಳೆದುಕೊಂಡೆ
''ನಾನು ಚಿಕ್ಕವಳಿದ್ದಾಗ ನನ್ನ ತಂದೆ ತೀರಿಕೊಂಡರು. ನನ್ನ ಕುಟುಂಬವನ್ನು ನೋಡಿಕೊಳ್ಳಲು ನಾನು ಶಾಲೆ ಬಿಟ್ಟು ಕೆಲಸ ಮಾಡಲು ಆರಂಭಿಸಿದೆ. ನಾನು ಶಾಲೆಯನ್ನು ಪ್ರೀತಿಸುತ್ತಿದ್ದೆ, ಆದರೆ ಹಸಿವು ಏನು ಎಂದು ನನಗೆ ತಿಳಿದಿತ್ತು. ಹಾಗಾಗಿ, ಓದುವುದನ್ನು ನಿಲ್ಲಿಸಬೇಕಾದ ಅನಿವಾರ್ಯತೆ ಬಂತು'' ಎಂದು ಮಾನ್ಯ ತನ್ನ ಜೀವನದಲ್ಲಿ ಎದುರಾದ ಕಷ್ಟದ ಬಗ್ಗೆ ಹಂಚಿಕೊಂಡಿದ್ದಾರೆ.

ಹಣ ಗಳಿಸಿದ ಮೇಲೆ ಓದಲು ಆರಂಭಿಸಿದೆ
''ಬಹಳ ಕಷ್ಟಪಟ್ಟು ಕೆಲಸ ಮಾಡಿದ ನಾನು, ಸುಮಾರು 41 ಚಿತ್ರಗಳಲ್ಲಿ ಪ್ರಮುಖ ನಟಿಯಾಗಿ ನಟಿಸಿದ್ದೆ. ಇದರಿಂದ ನಾನು ಗಳಿಸಿದ ಎಲ್ಲ ಹಣವನ್ನು ನನ್ನ ತಾಯಿಗೆ ನೀಡಿದೆ. ಆಮೇಲೆ ನಾನು ಓದಲು ಪ್ರಾರಂಭಿಸಿದೆ. ಬಹಳ ಕಷ್ಟಪಟ್ಟು ಓದಿ ಸ್ಯಾಟ್ ಪರೀಕ್ಷೆ ಬರೆದೆ. ಅಲ್ಲದೇ ಐವಿ ಲೀಗ್ನಲ್ಲಿ ಓದುತ್ತೇನೆ ಎಂದು ಕನಸು ಕೂಡ ಕಂಡಿರಲಿಲ್ಲ. ಆಮೇಲೆ ನ್ಯೂಯಾರ್ಕ್ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದುಕೊಂಡೆ'' ಎಂದು ತಮ್ಮ ಶಿಕ್ಷಣದ ಬಗ್ಗೆ ಹೇಳಿಕೊಂಡಿದ್ದಾರೆ.

ಮೊದಲ ದಿನ ಬಿಕ್ಕಿ ಬಿಕ್ಕಿ ಅತ್ತಿದ್ದೇನೆ
''ಮೊದಲ ಬಾರಿಗೆ ಶಾಲಾ ಕ್ಯಾಂಪಸ್ ಪ್ರವೇಶಿಸಿದಾಗ ನಾನು ಬಿಕ್ಕಿ ಬಿಕ್ಕಿ ಅತ್ತಿದ್ದೆ. ಬಾಲ್ಯದಲ್ಲಿ ನಾನು ಇಷ್ಟಪಟ್ಟಿದ ಶಿಕ್ಷಣವನ್ನು ಮತ್ತೆ ಮುಂದುವರಿಸಲು ಸಾಧ್ಯವಾಗುತ್ತಿರುವುದಕ್ಕೆ ಬಂದ ಸಂತೋಷದ ಕಣ್ಣೀರು ಆಗಿತ್ತು. ಪ್ರವೇಶ ಪಡೆಯುವುದು ಸುಲಭವಾಗಿತ್ತು, ಆದರೆ ಗಣಿತ-ಸಂಖ್ಯಾಶಾಸ್ತ್ರದಲ್ಲಿ 4 ವರ್ಷ ಪೂರೈಸಿ ಪದವಿ ಪಡೆದಿದ್ದು ಮತ್ತು ಪೂರ್ಣ ವಿದ್ಯಾರ್ಥಿವೇತನ ಗಳಿಸಿದ್ದು ನನ್ನ ಜೀವನದ ಅತ್ಯಂತ ಕಠಿಣ ಭಾಗವಾಗಿತ್ತು.'' ಎಂದು ಮಾನ್ಯ ಭಾವುಕ ಸನ್ನಿವೇಶವನ್ನು ಸ್ಮರಿಸಿಕೊಂಡಿದ್ದಾರೆ.

ಶಿಕ್ಷಣವು ನಿಮಗೆ ಹಾರಲು ರೆಕ್ಕೆಗಳನ್ನು ನೀಡುತ್ತದೆ
''ನಾನು ದಣಿದಿದ್ದರಿಂದ ಅನೇಕ ಬಾರಿ ಬಿಟ್ಟುಕೊಡಲು ಬಯಸಿದ್ದೆ. ಜೊತೆಗೆ ವೈಯಕ್ತಿಕ ಮತ್ತು ಆರೋಗ್ಯ ಸಮಸ್ಯೆಗಳೂ ಕಾಡಿದ್ದವು. ಆದರೆ ನನ್ನನ್ನೇ ನಾನೇ ಸಮಾಧಾನಪಡಿಸಿಕೊಂಡು ಮುಂದೆ ಸಾಗುತ್ತಿದ್ದೆ. ನನಗೆ ದೇವರ ಮೇಲೆ ನಂಬಿಕೆ ಇತ್ತು. ಹಾಗಾಗಿ, ಅದನ್ನೆಲ್ಲ ಅವನಿಗೆ ಬಿಟ್ಟಿದ್ದೆ. ಶಿಕ್ಷಣವು ನಿಮಗೆ ಹಾರಲು ರೆಕ್ಕೆಗಳನ್ನು ನೀಡುತ್ತದೆ. ನನ್ನ ಜ್ಞಾನವನ್ನು ಯಾರೂ ನನ್ನಿಂದ ತೆಗೆದುಕೊಳ್ಳಲು ಸಾಧ್ಯವಿಲ್ಲ'' ಎಂದು ಅನುಭವ ಹಂಚಿಕೊಂಡಿದ್ದಾರೆ.
Recommended Video

ಈ ಪೋಸ್ಟ್ ಒಬ್ಬ ವ್ಯಕ್ತಿಯನ್ನಾದರೂ ಪ್ರೋತ್ಸಾಹಿಸುತ್ತದೆ
''ವಿಶ್ವದಲ್ಲಿ ನೀವು ಎಷ್ಟು ಚಿಕ್ಕವರಾಗಿದ್ದೀರಿ ಎಂದು ನೀವು ತಿಳಿದುಕೊಳ್ಳುವಾಗ ನೀವು ಹೆಚ್ಚು ಜ್ಞಾನವನ್ನು ಪಡೆಯುತ್ತೀರಿ, ಹೆಚ್ಚು ವಿನಮ್ರರಾಗುತ್ತೀರಿ. ನಾವೆಲ್ಲರೂ ಅನನ್ಯವಾಗಿ ಜನಿಸಿದ್ದೇವೆ - ಅದನ್ನು ಯಾವಾಗಲೂ ನೆನಪಿಡಿ. ನನ್ನ ಈ ಪೋಸ್ಟ್ ಒಬ್ಬ ವ್ಯಕ್ತಿಯನ್ನಾದರೂ ಪ್ರೋತ್ಸಾಹಿಸುತ್ತದೆ ಎಂದು ಭಾವಿಸಿದ್ದೇನೆ. ಲವ್ ಯೂ ಆಲ್'' ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











