ನಟಿ ಶ್ರುತಿ ತೀವ್ರ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಫುಡ್ ಪಾಯ್ಸನಿಂಗ್ ಕಾರಣ ಅವರು ತೀವ್ರವಾಗಿ ಅಸ್ವಸ್ಥಗೊಂಡಿದ್ದು ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಪತಿ ಚಂದ್ರಚೂಡ್ ಹಾಗೂ ಆಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಶ್ರುತಿ ಅವರ ಪತಿ ಚಂದ್ರಚೂಡ್ ಅವರು, "ದಯವಿಟ್ಟು ವದಂತಿಗಳನ್ನು ನಂಬಬೇಡಿ. ಶ್ರುತಿ ಅವರಿಗೆ ಏನೂ ಆಗಿಲ್ಲ. ಫುಡ್ ಪಾಯ್ಸನಿಂಗ್ ಕಾರಣ ಅವರು ಅಸ್ವಸ್ಥಗೊಂಡಿದ್ದರು. ಈಗ ಚಿಕಿತ್ಸೆ ಪಡೆಯುತ್ತಿರುವ ಅವರು ಚೇತರಿಸಿಕೊಂಡಿದ್ದಾರೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಲಿದ್ದಾರೆ" ಎಂದು ತಿಳಿಸಿದ್ದಾರೆ.
"ಶ್ರುತಿ ಅವರು ತುಂಬ ಧೈರ್ಯವಂತ ಹೆಣ್ಣುಮಗಳು. ಅವರು ಕಿತ್ತೂರು ರಾಣಿ ಚೆನ್ನಮ್ಮ ಇದ್ದಂತೆ. ಅವರು ಹೆದರಿ ಓಡಿಹೋಗುವಂತಹ ಮಹಿಳೆ ಅಲ್ಲ. ಶ್ರುತಿ ಅವರು ಶಿರಡಿ ಯಾತ್ರೆಗೆ ಹೋಗಿ ಬಂದಿದ್ದರು. ಆಗ ಫುಡ್ ಪಾಯ್ಸನಿಂಗ್ ಆಗಿರುವ ಸಾಧ್ಯತೆ ಇದೆ. ಅಲ್ಲಿಂದ ಬಂದ ಬಳಿಕ ಅವರಿಗೆ ವಾಂತಿ ಹಾಗೂ ಲೂಸ್ ಮೋಷನ್ ಆಗುತ್ತಿತ್ತು. ಹಾಗಾಗಿ ಆಸ್ಪತ್ರೆಗೆ ದಾಖಲಿಸಿದೆವು" ಎಂದಿದ್ದಾರೆ.
ಗಾಬರಿಬೀಳುವಂತಹದ್ದು ಅವರಿಗೆ ಏನೂ ಆಗಿಲ್ಲ. ಚೆನ್ನಾಗಿದ್ದಾರೆ ಎಂದು ವೈದ್ಯರು ಹೇಳಿದ ಮೇಲಷ್ಟೇ ನಾನು ಆಸ್ಪತ್ರೆಯಿಂದ ಹಿಂತಿರುಗುತ್ತಿದ್ದೇನೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ಸಿಕ್ಕಿ ಏನಾಗಿರಬಹುದು ಎಂದು ಬಂದು ಮಾತನಾಡಿಕೊಂಡು ಹೋಗಿದ್ದಾರೆ ಅಷ್ಟೇ ಎಂದು ವಿವರ ನೀಡಿದ್ದಾರೆ ಚಂದ್ರಚೂಡ್.
ಇನ್ನು ಆಸ್ಪತ್ರೆಯ ವೈದ್ಯರಾದ ಡಾ.ಪುಣ್ಯವತಿ ಅವರು ಮಾತನಾಡುತ್ತಾ, ಈಗ ಅವರ ಕಂಡೀಷನ್ ತುಂಬಾ ಚೆನ್ನಾಗಿದೆ. ರಿಕವರಿ ಆಗುತ್ತಿದ್ದಾರೆ. ಏನೂ ಪ್ರಾಬ್ಲಂ ಕಾಣುತ್ತಿಲ್ಲ. She is fine now. ಅವರಿಗೆ ಫುಡ್ ಪಾಯ್ಸನಿಂಗ್ ಆಗಿತ್ತು. ಹೊರಗಡೆ ಎಲ್ಲೋ ಊಟ ತಗೊಂಡಿದ್ದಾರೆ ಅನ್ನಿಸುತ್ತದೆ.
ಅವರು ಇಲ್ಲಿಗೆ ಬಂದಾಗ ಡೀಹೈಡ್ರೇಶನ್ ಇತ್ತು. ಈಗ ಚಿಕಿತ್ಸೆ ನೀಡಿದ್ದೇವೆ. ಅವರು ಆರಾಮವಾಗಿಯೇ ಇದ್ದಾರೆ. ಆಸ್ಪತ್ರೆಗೆ ಅವರನ್ನು ದಾಖಲಿಸಿದಾಗ ಅವರು ಎಲ್ಲರೊಂದಿಗೂ ಮಾತನಾಡುತ್ತಿದ್ದರು. ಬೆಳಗ್ಗೆಯಿಂದ ಮೂರು ನಾಲ್ಕು ಸಲ ವಾಂತಿಯಾಗಿತ್ತು. ಹಾಗಾಗಿ ಸುಸ್ತಾದಂತೆ ಕಂಡುಬರುತ್ತಿದ್ದರು. ಅವರು ಇಲ್ಲಿಗೆ ಬಂದಾಗ ಪ್ರಜ್ಞೆ ತಪ್ಪಿರಲಿಲ್ಲ. ಕಾನ್ಷಿಯಸ್ ಆಗಿಯೇ ಇದ್ದರು. ಇದು ಮೆಡಿಕೋ ಲೀಗಲ್ ಕೇಸಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ನಟಿ ಶ್ರುತಿ ಅವರ ಆರೋಗ್ಯದ ಬಗ್ಗೆ ಆಸ್ಪತ್ರೆ ವೈದ್ಯರು ಹಾಗೂ ಅವರ ಪತಿ ಚಂದ್ರಚೂಡ್ ಸ್ಪಷ್ಟಪಡಿಸುವುದಕ್ಕೂ ಮುನ್ನ ನಾನಾ ವದಂತಿಗಳು ಹಬ್ಬಿದ್ದವು. ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬುದೂ ಒಂದು ವದಂತಿ. ಇದರ ಜೊತೆಗೆ ಅವರನ್ನು ಐಸಿಯುನಲ್ಲಿ ಇಡಲಾಗಿದೆ ಎಂಬ ಸುದ್ದಿಗಳೂ ಬಿತ್ತರವಾದರು. ಆದರೆ ಇವೆಲ್ಲವೂ ಸುಳ್ಳು ಎಂದು ಅವರ ಪತಿ ಚಂದ್ರಚೂಡ್ ಹಾಗೂ ಆಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











