'ಜೋಗಿ' ಪ್ರೇಮ್ ಗುರು ನಿರ್ದೇಶಕ ಎ ಆರ್ ಬಾಬು ಇನ್ನಿಲ್ಲ
ನಟ ಅಂಬರೀಶ್ ಅವರ ನಿಧನದ ನೋವು ಮರೆಯುವ ಮುನ್ನ ನಿರ್ಮಾಪಕ ಎಸ್ ನಾಗರಾಜ ಶೆಟ್ಟಿ ನಿಧನವಾಗಿದ್ದರು. ಈಗ ಕನ್ನಡದ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕ ಎ ಆರ್ ಬಾಬು ವಿಧಿವಶರಾಗಿದ್ದಾರೆ.
ಅನೇಕ ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಇಂದು ಬೆಳಗ್ಗೆ 8:50ರ ಸುಮಾರಿಗೆ ಕೊನೆಯೂಸಿರೆಳೆದಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
'ಹಲೋ ಯಮ', 'ಕಾಸಿದ್ದವನೇ ಬಾಸ್', 'ಯಾರದ್ದೋ ದುಡ್ಡು ಯಲಮ್ಮನ ಜಾತ್ರೆ' 'ಆಂಧ್ರ ಹೆಂಡತಿ', 'ಆಗೋದೆಲ್ಲ ಒಳ್ಳೆದಕ್ಕೆ', 'ಚಮ್ಕಾಯ್ಸಿ ಚಿಂದಿ ಉಡಾಯ್ಸಿ', 'ಸಪ್ನೊಂಕಿ ರಾಣಿ' ಸೇರಿದಂತೆ ಅನೇಕ ಚಿತ್ರಗಳಿಗೆ ಇವರು ಆಕ್ಷನ್ ಕಟ್ ಹೇಳಿದ್ದರು.

ನಿರ್ದೇಶಕ ಜೋಗಿ ಪ್ರೇಮ್ ಸೇರಿದಂತೆ ಕೆಲ ಪ್ರತಿಭಾವಂತರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿದ್ದ ಖ್ಯಾತಿ ಇವರದ್ದಾಗಿತ್ತು. 'ಹಲೋ ಯಮ' ಸಿನಿಮಾದಲ್ಲಿ ಪ್ರೇಮ್ ಇವರ ಬಳಿ ಕೆಲಸ ಮಾಡಿದ್ದರು. ಈ ಚಿತ್ರದ 'ತೆರಿಯಾದು ಪೋಯಾ..' ಡೈಲಾಗ್ ಇಂದಿಗೂ ಜನಪ್ರಿಯವಾಗಿದೆ.
ಇವರ ಮಗ ಶಾನ್ ಕೂಡ 'ಬಾಬು ಅದೇ ಹಳೇ ಕಥೆ' ಎಂಬ ಸಿನಿಮಾದ ಮೂಲಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.


Click it and Unblock the Notifications











