ತೆಲುಗು ಸಿನಿಮಾ ವಿರುದ್ಧ ಫಿಲಂ ಚೇಂಬರ್ ಮೆಟ್ಟಿಲೇರಿದ ನಟಿ ಶರ್ಮಿಳಾ ಮಾಂಡ್ರೆ
ನಟಿ ಶರ್ಮಿಳಾ ಮಾಂಡ್ರೆ ಈಗ ನಿರ್ಮಾಪಕರೂ ಹೌದು, ತಮ್ಮ ಶರ್ಮಿಳಾ ಮಾಂಡ್ರೆ ಪ್ರೊಡಕ್ಷನ್ ಹೌಸ್ ವತಿಯಿಂದ ಸಿನಿಮಾ ನಿರ್ಮಣ ಮಾಡುತ್ತಿದ್ದು, ಈಗ ತೆಲುಗು ಸಿನಿಮಾ ಒಂದರ ವಿರುದ್ಧ ನ್ಯಾಯಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ.
ಶರ್ಮಿಳಾ ಮಾಂಡ್ರೆ ತಮ್ಮ ನಿರ್ಮಾಣ ಸಂಸ್ಥೆಯ ವತಿಯಿಂದ ಸತೀಶ್ ನೀನಾಸಂ ನಟನೆಯ 'ದಸರ' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣವಾಗಿದ್ದು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ.
ಆದರೆ ಇದೇ ಸಮಯಕ್ಕೆ ಸರಿಯಾಗಿ ತೆಲುಗಿನ ಸ್ಟಾರ್ ನಟನ ಸಿನಿಮಾ ಒಂದು ಟೀಸರ್ ಬಿಡುಗಡೆ ಮಾಡಿದ್ದು, ಆ ಸಿನಿಮಾದ ಹೆಸರು ಸಹ 'ದಸರ' ಎಂದೇ ಇದೆ. ಇದು ಶರ್ಮಿಳಾ ಮಾಂಡ್ರೆ ಅಸಮಾಧಾನಕ್ಕೆ ಕಾರಣವಾಗಿದೆ.

''ನಾನು ನನ್ನ ನಿರ್ಮಾಣದ ಮೊದಲ ಸಿನಿಮಾ 'ದಸರ' ಟೈಟಲ್ ಅನ್ನು 2020 ರ ಸೆಪ್ಟೆಂಬರ್ ತಿಂಗಳಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೊಂದಣಿ ಮಾಡಿಸಿದ್ದೆ. ಅದಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿ ಇದೆ. ಈಗ ಸಿನಿಮಾದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಸಿನಿಮಾ ಇದೆ. ಈ ನಡುವೆ ಸುಧಾಕರ್ ಚೆರುಕುರಿ ಎಂಬುವರು ಎಸ್ಎಲ್ವಿ ಬ್ಯಾನರ್ ಅಡಿಯಲ್ಲಿ 'ದಸರ' ಹೆಸರಿನ ಸಿನಿಮಾದ ಟೀಸರ್ ಅನ್ನು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಇದರಿಂದ ನಮಗೆ ಸಮಸ್ಯೆ ಆಗಲಿದೆ'' ಎಂದು ಫಿಲಂ ಚೇಂಬರ್ಗೆ ಬರೆದಿರುವ ಪತ್ರದಲ್ಲಿ ಶರ್ಮಿಳಾ ಹೇಳಿದ್ದಾರೆ.
''ನಮ್ಮ ಸಿನಿಮಾದ ಹೆಸರನ್ನು ನಾವು ಈಗಾಗಲೇ ಬಹಿರಂಗಗೊಳಿಸಿದ್ದೇವೆ. ಅದೇ ಹೆಸರಿನಿಂದ ಸಿನಿಮಾದ ಪ್ರಚಾರ ಸಹ ಮಾಡಿದ್ದೇವೆ. ಈಗ ಅದೇ ಹೆಸರಿನಲ್ಲಿ ತೆಲುಗು ನಿರ್ಮಾಪಕರು ತಮ್ಮ ಸಿನಿಮಾವನ್ನು ಕನ್ನಡ ಭಾಷೆಯಲ್ಲಿ ಬಿಡುಗಡೆ ಮಾಡಿದರೆ ನಮ್ಮ ಸಿನಿಮಾಕ್ಕೆ ಸಮಸ್ಯೆ ಆಗುತ್ತದೆ. ನಮ್ಮ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆಯೂ ಹೊಡೆತ ಬೀಳುತ್ತದೆ'' ಎಂದಿದ್ದಾರೆ ಶರ್ಮಿಳಾ.
''ತೆಲುಗಿನ ನಿರ್ಮಾಪಕರು ತಮ್ಮ ಸಿನಿಮಾದ ಹೆಸರನ್ನು ಕನಿಷ್ಟ ಪಕ್ಷ ಕನ್ನಡ ಡಬ್ಬಿಂಗ್ ವರ್ಷನ್ನಲ್ಲಿಯಾದರೂ ಬದಲಾಯಿಸುವಂತೆ ಸೂಚಿಸಿ'' ಎಂದು ನಟಿ ಶರ್ಮಿಳಾ ಮಾಂಡ್ರೆ ಮನವಿ ಮಾಡಿದ್ದಾರೆ.
ತೆಲುಗಿನ 'ದಸರ' ಸಿನಿಮಾದಲ್ಲಿ ನಟ ನಾನಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಸಿನಿಮಾದ ಪೋಸ್ಟರ್ ಹಾಗೂ ಟೀಸರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಹಳ್ಳಿ ಹೈದನ ಪಾತ್ರದಲ್ಲಿ ನಾನಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವು ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗುತ್ತಿದ್ದಂತೆ ಈ ಹೆಸರಿನ ಸಮಸ್ಯೆಗಳು ಹೆಚ್ಚಾಗುತ್ತಿವೆ. ಕೆಲವು ದಿನಗಳ ಹಿಂದೆ ತೆಲುಗಿನಲ್ಲಿ ರವಿತೇಜ ನಟನೆಯ 'ಖಿಲಾಡಿ' ಸಿನಿಮಾ ಬಿಡುಗಡೆ ಆಗಿತ್ತು. ಅದೇ ಸಿನಿಮಾದ ಹಿಂದಿ ವರ್ಷನ್ 'ಖಿಲಾಡಿ' ಹೆಸರಿನಲ್ಲಿಯೇ ಬಿಡುಗಡೆ ಆಗಿತ್ತು. ಆದರೆ ಇದಕ್ಕೆ ಹಿಂದಿಯಲ್ಲಿ 1992 ರಲ್ಲಿ ಬಿಡುಗಡೆ ಆಗಿದ್ದ 'ಖಿಲಾಡಿ' ಸಿನಿಮಾದ ನಿರ್ಮಾಪಕರ ತಕರಾರು ಎತ್ತಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದು ಸಿನಿಮಾದ ಬಿಡುಗಡೆ ಮೇಲೆ ಪರಿಣಾಮ ಬೀರಿತು.


Click it and Unblock the Notifications











