ಪುನೀತ್ ನಮನ ಕಾರ್ಯಕ್ರಮ: ಏನಿರುತ್ತೆ? ಯಾರೆಲ್ಲಾ ಬರ್ತಾರೆ?
ಸ್ಯಾಂಡಲ್ವುಡ್ನ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿಕೆ ನೋವು ಎಂದಿಗೂ ಕಡಿಮೆ ಆಗುವುದಿಲ್ಲ. ಅಭಿಮಾನಿಗಳ ಆರಾಧ್ಯದೈವ ಅಪ್ಪು ಜಾಗರಣೆ ಕೊನೆಯಾಗಲು ಸಾಧ್ಯನೇ ಇಲ್ಲ. ಸ್ಯಾಂಡಲ್ವುಡ್ನ ಪರಮಾತ್ಮ ನಮ್ಮೊಂದಿಗಿಲ್ಲ ಅನ್ನುವ ಕಟು ಸತ್ಯ ಅಭಿಮಾನಿಗಳಿಗೆ, ಚಿತ್ರರಂಗಕ್ಕೆ, ಅವರ ಕುಟುಂಬಕ್ಕೂ ಗೊತ್ತಿದೆ. ಆದರೆ, ಬದುಕು ಮುಂದೆ ಸಾಗಲೇ ಬೇಕಿದೆ. ಹೀಗಾಗಿ ಪವರ್ ಸ್ಟಾರ್ ಅಗಲಿಕೆ ನೋವಿನಲ್ಲಿ ಕರ್ನಾಟಕದ ವಾಣಿಜ್ಯ ಮಂಡಳಿ ನಮನ ಸಲ್ಲಿಸಲು ಸಜ್ಜಾಗಿದೆ.
ಪುನೀತ್ ರಾಜ್ಕುಮಾರ್ ಸ್ಯಾಂಡಲ್ವುಡ್ ಹೆಮ್ಮೆ. ಕೇವಲ ಅಣ್ಣಾವ್ರ ಮಗ ಅಂತಲ್ಲ. ಸಿನಿಮಾಗಳಲ್ಲಿ ನಟಿಸಿದ್ದಾರೆ ಅಂತನೂ ಅಲ್ಲ. ಇಂದು ಅಭಿಮಾನಿಗಳು ಅಪ್ಪು ಅಜರಾಮರ ಅಂತ ಕೂಗು ಹಾಕುತ್ತಿರುವುದಕ್ಕೆ ಕಾರಣನೇ ಬೇರೆ. ಪುನೀತ್ ಸಮಾಜಮುಖಿ ಕೆಲಸಗಳು ಎಲ್ಲರಿಗೂ ಮಾದರಿಯಾಗಿದೆ. ಅದಕ್ಕೆ ಈ ಪರಮಾತ್ಮ ಅಂದರೆ, ಎಲ್ಲರಿಗೂ ಪ್ರೀತಿ, ಗೌರವ, ಅಭಿಮಾನ. ಸದಾ ಅಭಿಮಾನಿಗಳನ್ನು, ಯುವಕರನ್ನು ಪ್ರೇರೆಪಿಸುತ್ತಿದ್ದ ಅಪ್ಪುಗೆ ನಮನ ಸಲ್ಲಿಸಲು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಏನೇನು ಸಿದ್ಧತೆಗಳನ್ನು ಮಾಡಿಕೊಂಡಿದೆ ಅನ್ನುವ ಪೂರ್ಣ ವಿವರ ಇಲ್ಲಿದೆ.

'ಪುನೀತ್ ನಮನ' ಹೆಸರಲ್ಲಿ ಶ್ರದ್ಧಾಂಜಲಿ
ಇಂದು(ನವೆಂಬರ್ 16) ಪುನೀತ್ ರಾಜ್ಕುಮಾರ್ಗೆ ಶ್ರದ್ಧಾಂಜಲಿ ಸಲ್ಲಿಸಲು ಫಿಲ್ಮ್ ಚೇಂಬರ್ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿದೆ. 'ಪುನೀತ್ ನಮನ' ಕಾರ್ಯಕ್ರಮಕ್ಕೆ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಇಂದು ( ನವೆಂಬರ್ 16) ಮಧ್ಯಾಹ್ನ 3 ಗಂಟೆಯಿಂದ ಕಾರ್ಯಕ್ರಮ ಆರಂಭ ಆಗಿ, ಸಂಜೆ 6 ಗಂಟೆವರೆಗೂ ಗೀತ ನಮನ ಹಾಗೂ ನುಡಿ ನಮನ ಸಲ್ಲಿಸಲಾಗುತ್ತಿದೆ.

ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ 'ಗಾನ ನಮನ'
ಪುನೀತ್ ನಮನ ಕಾರ್ಯಕ್ರಮದ ರೂಪು-ರೇಷೆಗಳು ಈಗಾಗಲೇ ಫೈನಲ್ ಆಗಿದೆ. ಡಾ. ನಾಗೇಂದ್ರ ಪ್ರಸಾದ್ ಬರೆದ ಸಾಹಿತ್ಯಕ್ಕೆ ಗುರುಕಿರಣ್ ರಾಗ ಸಂಯೋಜಿಸಿದ್ದಾರೆ. ಈ ಗೀತೆಯ ಮೂಲಕವೇ ಪುನೀತ್ ನಮನ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸ್ಯಾಂಡಲ್ವುಡ್ ಗಾಯಕರಾದ ವಿಜಯ್ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ತಂಡ ಅಪ್ಪು ಹೆಜ್ಜೆ ಗುರುತನ್ನು ನೆನಪಿಸುವ ಗೀತೆಯನ್ನು ಹಾಡನ್ನು ಗಣ್ಯರ ಮುಂದೆ ಹಾಡಲಿದೆ. ಅಣ್ಣಾವ್ರ ಇಡೀ ಕುಟುಂಬ ಹಾಗೂ ಸ್ಯಾಂಡಲ್ವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ಗಣ್ಯರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ.

ಇಡೀ ಸ್ಯಾಂಡಲ್ವುಡ್ಗೆ ಆಹ್ವಾನ
ಅಣ್ಣಾವ್ರ ಹಿರಿ ಮಗ ಶಿವರಾಜ್ಕುಮಾರ್, ಎರಡನೇ ಪುತ್ರ ರಾಘವೇಂದ್ರ ರಾಜ್ಕುಮಾರ್ ಕುಟುಂಬಕ್ಕೆ ಆಹ್ವಾನ ನೀಡಿಲಾಗಿದೆ. ಅಲ್ಲದೆ ಅಣ್ಣಾವ್ರ ಹೆಣ್ಣು ಮಕ್ಕಳು, ಅಳಿಯಂದಿರು, ಮಕ್ಕಳು, ಮರಿ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹಾಗೇ ಇಡೀ ಸ್ಯಾಂಡಲ್ವುಡ್ಗೂ ಆಹ್ವಾನ ನೀಡಲಾಗಿದ್ದು, ಸ್ಯಾಂಡಲ್ವುಡ್ನ ಗಣ್ಯರು ಉಪಸ್ಥಿತಿ ಇರಲಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ, ಯಶ್, ಕಿಚ್ಚ ಸುದೀಪ್, ಗಣೇಶ್, ರಮೇಶ್ ಅರವಿಂದ್, ಧ್ರುವ ಸರ್ಜಾ, ರಕ್ಷಿತ್ , ರಿಷಬ್ ಸೇರಿದಂತೆ ಸ್ಯಾಂಡಲ್ವುಡ್ನ ಹಿರಿಯ ನಟರಿಗೆ ತಂತ್ರಜ್ಞರಿಗೆ, ಕಲಾವಿದರಿಗೆ ಆಹ್ವಾನ ನೀಡಲಾಗಿದೆ.

ರಾಜಕೀಯ ಮುಖಂಡರಿಗೆ ಚೇಂಬರ್ ಕಡೆಯಿಂದ ಆಹ್ವಾನ
ಅಪ್ಪು ಅಗಲಿಕೆ ನೋವಿನಲ್ಲಿ ಆಯೋಜಿಸಿರುವ 'ಪುನೀತ್ ನಮನ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದಾರೆ. ಇವರೊಂದಿಗೆ ರಾಜ್ಯದ ಸಚಿವರು ಹಾಗೂ ಶಾಸಕರ ಉಪಸ್ಥಿತಿಯೂ ಇರಲಿದೆ. ಕಾರ್ಯಕ್ರಮದ ಮತ್ತೊಬ್ಬ ಅತಿಥಿಯಾಗಿ ಮೈಸೂರಿನ ಮಹಾರಾಜ ಯದುವೀರ್ ಒಡೆಯರ್ ಕೂಡ ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ರಜನಿ, ಚಿರಂಜೀವಿ, ಮೋಹನ್ ಲಾಲ್ಗೆ ಆಹ್ವಾನ
ಪುನೀತ್ ರಾಜ್ಕುಮಾರ್ ಅಂದ್ರೆ, ಪರಭಾಷೆಯ ನಟರಿಗೂ ಪ್ರೀತಿ. ಹೀಗಾಗಿ 'ಪುನೀತ್ ನಮನ' ಕಾರ್ಯಕ್ರಮದಲ್ಲಿ ಪರಭಾಷೆಯ ಸ್ಟಾರ್ಗಳಿಗೂ ಫಿಲ್ಮ್ ಚೇಂಬರ್ ಆಹ್ವಾನ ನೀಡಿದೆ. ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ದಿಗ್ಗಜರಿಗೆ ಆಹ್ವಾನ ನೀಡಲಾಗಿದೆ. ಬಿಗ್ ಬಿ ಅಮಿತಾಬ್ ಬಚ್ಚನ್, ಸೂಪರ್ಸ್ಟಾರ್ ರಜನಿಕಾಂತ್, ವಿಶಾಲ್, ವಿಜಯ್ ಸೇತುಪತಿ ಆಗಮಿಸುವ ನಿರೀಕ್ಷೆಯಿದೆ. ಹಾಗೇ ಮೆಗಾಸ್ಟಾರ್ ಚಿರಂಜೀವಿ, ಜ್ಯೂ. ಎನ್ ಟಿ ಆರ್, ಅಲ್ಲು ಅರ್ಜುನ್, ರಾಮ್ ಚರಣ್ ಜೊತೆಗೆ ಮಲಯಾಳಂ ಚಿತ್ರರಂಗದಿಂದ ಮೋಹನ್ ಲಾಲ್ ಮಮ್ಮುಟ್ಟಿಗೆ ಆಹ್ವಾನ ನೀಡಿದೆ.
ಪುನೀತ್ ನಮನ ಕಾರ್ಯಕ್ರಮಕ್ಕೆ ಪುನೀತ್ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಆಹ್ವಾನವಿಲ್ಲ. ಕೇವಲ 1500 ಪಾಸ್ಗಳನ್ನು ವಿವರಿಸಲಾಗಿದೆ. ಎರಡು ಸಾವಿರ ಮಂದಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಪಾಸ್ ಇದ್ದವರಿಗೆ ಮಾತ್ರ ಒಳಬಿಡುವಂತೆ ಕಟ್ಟು ನಿಟ್ಟಿನ ಸೂಚನೆಯನ್ನು ಫಿಲ್ಮ್ ಚೇಂಬರ್ ನೀಡಿದೆ.


Click it and Unblock the Notifications











