ನಟಿಗೆ ಲೈಂಗಿಕ ಕಿರುಕುಳ: ಸಿಡಿದೆದ್ದ ಸ್ಯಾಂಡಲ್ ವುಡ್ ನಾಯಕಿಯರು
ಬಹುಭಾಷಾ ನಟಿಯನ್ನ ಅಪಹರಣ ಮಾಡಿ, ಅವರ ಮೇಲೆ ದೈಹಿಕ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯ ಎಸೆಗಿರುವ ಘಟನೆಯಿಂದ ಇಡೀ ದಕ್ಷಿಣ ಭಾರತದ ಚಿತ್ರೋದ್ಯಮ ದಿಗ್ಭ್ರಮೆಗೊಂಡಿದೆ.
ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಕನ್ನಡ ಚಿತ್ರತಾರೆಯರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

'ಗನ್ ಇಟ್ಕೊಂಡು ಓಡಾಡ್ಬೇಕು'-ರಾಗಿಣಿ
''ಈ ಘಟನೆಯಿಂದ ತುಂಬಾ ಬೇಸರವಾಗಿದೆ. ನಾವು ಯಾವ ರೀತಿಯ ಸಮಾಜದಲ್ಲಿ ಇದ್ದೀವಿ ಅಂತ ಅರ್ಥವಾಗುತ್ತಿಲ್ಲ. ನಾವು ಹೊರಗಡೆ ಓಡಾಡೋಕೆ ಭಯ ಆಗ್ತಿದೆ. ಅಪರಿಚತರನ್ನ ನಂಬುವುದು ಆಗಲ್ಲ, ಆದ್ರೆ, ಪರಿಚತರನ್ನ ನಂಬುವುದಕ್ಕೂ ಕೂಡ ಈಗ ಆಗ್ತಿಲ್ಲ ಎನ್ನುವ ಸಂದರ್ಭ ಬರುತ್ತಿದೆ. ಮಹಿಳೆ ಎಂಬುದನ್ನ ಪುರುಷರು ಲಾಭ ಮಾಡಿಕೊಳ್ತಿದ್ದಾರೆ. ಇನ್ಮುಂದೆ ನಾವು ಗನ್ ಅಥವಾ ಚಾಕು ಇಡ್ಕೊಂಡು ಓಡಾಡ್ಬೇಕು ಅಷ್ಟೇ''-ರಾಗಿಣಿ

'ಅಪರಾಧಿಗಳಿಗೆ ತಕ್ಕ ಶಿಕ್ಷೆ ಆಗಲಿ'-ಐಂದ್ರಿತಾ ರೇ
''ಇದು ಅತ್ಯಂತ ಪಾಪ. ಅಪರಾಧಿಗಳು ಕೆಲವೇ ದಿನಗಳಲ್ಲಿ ಬೇಲ್ ತಗೊಂಡು ಹೊರಗೆ ಬರ್ತಿದ್ದಾರೆ. ಹಾಗಾಗಿ, ಯಾರಿಗೂ ಕಾನೂನಿ ಭಯವಿಲ್ಲದಂತಾಗಿದೆ. ಅಪರಾಧಿಗಳು ಯಾವ ವಯಸ್ಸಿನವರಾಗಿದ್ದರೂ ಶಿಕ್ಷೆ ಆಗಲೇಬೇಕು. ನಮ್ಮ ಕಾನೂನು ಗಟ್ಟಿಯಾಗಬೇಕು. ಆ ನಟಿಗೆ ಮತ್ತಷ್ಟು ಶಕ್ತಿ ಸಿಗಲಿ. ಅಪರಾಧಿಗಳಿಗೆ ತಕ್ಕ ಶಿಕ್ಷೆ ಆಗಲಿ.''- ಐಂದ್ರಿತಾ ರೇ

'ಹೆಣ್ಮಕ್ಕಳು ಆತ್ಮರಕ್ಷಣೆ ಕಲಿಯಬೇಕು'-ಸಂಜನಾ
''ಈ ಘಟನೆ ಕೇಳಿದಾಗ ನನಗೆ ತುಂಬಾ ಭಯ ಆಯ್ತು. ಹೆಣ್ಮಕ್ಕಳ ರಕ್ಷಣೆಯ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಾನೂನು ಬಲವಾಗಬೇಕು. ಪ್ರತಿಯೊಬ್ಬರು ಪೊಲೀಸರಂತೆ ಬಲವಾಗಿರಬೇಕು. ಹೆಣ್ಮಕ್ಕಳು ಕೈಕಟ್ಟಿ ಕೂರಬಾರದು. ಆತ್ಮರಕ್ಷಣೆ ಹೇಗೆ ಮಾಡಿಕೊಳ್ಳುವುದು ಎಂದು ಕಲಿಯಬೇಕು''.-ಸಂಜನಾ ಗರ್ಲಾನಿ

'ಪದೇ ಪದೇ ಆದರೂ ಯಾಕೆ ಕ್ರಮವಿಲ್ಲ'-ಪ್ರಿಯಾಮಣಿ
''ಒಬ್ಬ ನಟಿ ಎನ್ನುವುದಕ್ಕಿಂತ, ಒಬ್ಬ ಹೆಣ್ಣು. ಯಾವ ಹೆಣ್ಣಿಗೂ ಹೀಗಾಗಬಾರದು. ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಮತ್ತೆ ದೌರ್ಜನ್ಯ ಆಗುತ್ತಿದ್ದರು, ಯಾರೂ ಏನೂ ಮಾಡೋಕೆ ಆಗ್ತಿಲ್ಲ. ನಾವು ಎಷ್ಟು ಅಸಹಾಯಕರಾಗಿದ್ದೇವೆ ನೋಡಿ. ಅಪರಾಧಿಗಳಿಗೆ ಉಗ್ರ ಶಿಕ್ಷೆ ಆಗಬೇಕು''-ಪ್ರಿಯಾಮಣಿ

'ತುಂಬಾ ಆಘಾತವಾಗಿದೆ' -ಅನು ಪ್ರಭಾಕರ್
''ಅವರ ಘಟನೆಯಿಂದ ತುಂಬಾ ಬೇಸರವಾಗಿದೆ. ನಾನೊಬ್ಬ ನಟಿಯಾಗಿ ನನಗೆ ತುಂಬಾ ಆಘಾತವಾಗಿದೆ''- ಅನು ಪ್ರಭಾಕರ್


Click it and Unblock the Notifications











