'ಆಗುಂಬೆ ಪಾಯಿಂಟ್'ನಲ್ಲಿ 'ಕೃಷ್ಣ'ನ್ ಲವ್ ಸ್ಟೋರಿ
ಇದೊಂದು ಭಿನ್ನ ಪ್ರೇಮಕಥಾ ಹಂದರದ ಚಿತ್ರ. ಹದ್ದಿನಂತಹ ಹುಡುಗ, ಗಿಣಿಯಂತಹ ಹುಡುಗಿಯ ಕಥೆ. ಆಕ್ಷನ್ ಕಟ್ ಹೇಳುತ್ತಿರುವವರು ಕೃಷ್ಣ ಬೆಳ್ತಂಗಡಿ. ಈ ಹಿಂದೆ ಇವರು ಬಣ್ಣದ ಕೊಡೆ ಎಂಬ ಚಿತ್ರ ನಿರ್ದೇಶಿಸಿದ್ದರು. ಇದೀಗ ತಮ್ಮ ಎರಡನೇ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.
ಈ ಚಿತ್ರಕ್ಕೆ ಇಂದು (ಗುರುವಾರ, ಏಪ್ರಿಲ್ 16) ದಕ್ಷಿಣ ಬೆಂಗಳೂರಿನ ಅತ್ಯಂತ ಹಳೆಯ ಪ್ರದೇಶಗಳಲ್ಲಿ ಒಂದಾದ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ. ಈ ಚಿತ್ರದ ನಾಯಕ ಶಿವಕುಮಾರ್. ನಾಯಕಿ ಪಾತ್ರಕ್ಕೆ ಹೊಂದುವ ಹುಡುಗಿಗಾಗಿ ಹುಡುಕಾಟ ನಡೆದಿದೆ. [ಪುರಿ ಜಗನ್ನಾಥ್ ಆಕ್ಷನ್ ಕಟ್ ನಲ್ಲಿ ಎಚ್ಡಿಕೆ ಪುತ್ರ ನಿಖಿಲ್]

ಚಿತ್ರದ ಹೆಸರು ಕೇಳಿದರೆ ಇದು ಲವ್ ಸ್ಟೋರಿ ಇರಬಹುದೇ ಎಂಬ ಸಂದೇಹ ಬರುವುದು ಸಹಜ. ಆಗುಂಬೆ ಪಾಯಿಂಟ್ ಎಂದರೆ ಒಂದಷ್ಟು ಭಯ, ಪ್ರೇಮಿಗಳು, ಪಿಸುಮಾತು ಹೀಗೆ ನೂರೆಂಟು ಪ್ರಶ್ನೆಗಳು ಮೂಡುತ್ತವೆ. ಆದರೆ ಇವೆಲ್ಲಕ್ಕೂ ಉತ್ತರ ಸಿಗಬೇಕಾದರೆ ಸ್ವಲ್ಪ ದಿನ ಕಾಯಲೇಬೇಕು.
ಜಯರಾಮಯ್ಯ ನಿರ್ಮಿಸುತ್ತಿರುವ ಈ ಚಿತ್ರದ ಬಹುತೇಕ ಕಥೆ ಕಾಡಿನಲ್ಲೇ ನಡೆಯಲಿದೆ. "ಬಹು ದಿನಗಳ ಶ್ರಮ, ಗೆಳೆಯರೆಲ್ಲರ ನಿರಂತರ ಹಾರೈಕೆ, ಕನಸು ಕೂಡಿಬರುತ್ತಿರೋ ಕಾಲ. ನನ್ನ ಮೊದಲ ನಿರ್ದೇಶನದ ಕಲಾತ್ಮಕ ಸಿನಿಮಾ 'ಬಣ್ಣದ ಕೊಡೆ'ಗೆ ಶ್ರೇಷ್ಠ ಬಾಲನಟಿ ಪ್ರಶಸ್ತಿ ಬಂತು. ಈಗ ಸಿನಿಮಾ ನಿರ್ದೇಶನದಲ್ಲಿ ಎರಡನೇ ಇನ್ನಿಂಗ್ಸ್ ಗೆ ಸಜ್ಜು. ಪಕ್ಕಾ ಕಮರ್ಷಿಯಲ್ ಸಬ್ಜೆಕ್ಟ್" ಎನ್ನುತ್ತಾರೆ ಎನ್ನುತ್ತಾರೆ ಕೃಷ್ಣ ಬೆಳ್ತಂಗಡಿ.
ಬಾಲ್ಯದಲ್ಲೇ ಅಪರಾಧ ಮಾಡಿ ಕಾಡು ಸೇರಿ ಗುರುವಿನ ಬಳಿಯೇ ಇರುವ ನಾಯಕ ಒಂದು ಕಡೆಯಾದರೆ, ಇನ್ನೊಂದು ಕಡೆ ಅಚಾನಕ್ ಆಗಿ ಕಾಡಿಗೆ ಅಡಿಯಿಡುವ ನಾಯಕಿ. ಆಮೇಲೆ ಫ್ಲ್ಯಾಶ್ ಬ್ಯಾಕ್ ನಲ್ಲಿ ಸಾಗುವ ಕಥೆ. ಹೆಜ್ಜೆ ಹೆಜ್ಜೆಗೂ ಕುತೂಹಲ ಮೂಡಿಸುತ್ತಾ ಸಾಗುತ್ತದೆ ಎನ್ನುತ್ತಾರೆ ನಿರ್ದೇಶಕರು.
ಈ ಚಿತ್ರಕ್ಕೆ ಹಿತನ್ ಹಾಸನ್ ಸಂಗೀತ, ನಾಗರಾಜ್ ಅದ್ವಾನಿ ಅವರ ಛಾಯಾಗ್ರಹಣ ಇದ್ದು, ತುಂಬಾ ಸೂಕ್ಷ್ಮ ಎಳೆಗಳನ್ನು ಈ ಚಿತ್ರದಲ್ಲಿ ತರುತ್ತಿದ್ದೇನೆ ಎನ್ನುತ್ತಾರೆ ಕೃಷ್ಣ. ಬಣ್ಣದ ಕೊಡೆ ಚಿತ್ರದ ಬಳಿಕ ಸಾಕಷ್ಟು ಗ್ಯಾಪ್ ತೆಗೆದುಕೊಂಡು ಬಂದ ಕಾರಣ ಚಿತ್ರದ ಬಗ್ಗೆ ಕುತೂಹಲ ಇದ್ದೇ ಇದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











