Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಮ್ಮ ಸಿನಿಮಾ ತಾರೆಗಳ 'ಅವಕಾಶವಾದಿ ಕನ್ನಡ ಪ್ರೇಮ'
'ಕನ್ನಡ, ಕರ್ನಾಟಕದ'ದ ಬಗ್ಗೆ ಸಂಭಾಷಣೆ, ಸನ್ನಿವೇಶ, ಹಾಡುಗಳು ಕನ್ನಡ ಸಿನಿಮಾಗಳ ಸಾಮಾನ್ಯ ಅಂಶ. ನಾಯಕ ವಿದೇಶದಲ್ಲಿರುತ್ತಾನೆ ಆದರೆ ಅಲ್ಲಿಯೂ ಕನ್ನಡದ ಬಗ್ಗೆ ಅನ್ಯ ಭಾಷಿಕರ ಮುಂದೆ ಭಾಷಣ ಬಿಗಿಯುತ್ತಾನೆ ಇಂಥಹಾ ಉದಾಹರಣೆಗಳು ಹೊಸ ತಲೆಮಾರಿನ ಕನ್ನಡ ಸಿನಿಮಾಗಳಲ್ಲಿ ಸಾಕಷ್ಟು.
ಕನ್ನಡ ಸಿನಿಮಾರಂಗದವರ ಕನ್ನಡ ಪ್ರೇಮವನ್ನು ಪ್ರಶ್ನಿಸುವುದು ತುಸುಸ ಅಧಿಕಪ್ರಸಂಗ ಎನಿಕೊಳ್ಳಬಹುದು. ಕನ್ನಡದ ಪ್ರಸಾರ, ಪ್ರಚಾರದಲ್ಲಿ ಕನ್ನಡ ಚಿತ್ರರಂಗದ ಪಾಲು ಬಹು ದೊಡ್ಡದು. ಜನಪದ, ಅಕ್ಷರ ಸಾಹಿತ್ಯದ ನಂತರ ಕನ್ನಡದ ಪ್ರಸಾರ, ಪ್ರಚಾರ ಮಾಡಿದ ಮುಖ್ಯ ರಂಗ ಕನ್ನಡ ಚಿತ್ರರಂಗ.
ಆದರೆ ಈಗಿನ ಕೆಲವು ಕನ್ನಡ ಸಿನಿಮಾ ಸೆಲೆಬ್ರಿಟಿಗಳ ಕನ್ನಡ ಪ್ರೇಮಕ್ಕೆ ಅವಕಾಶವಾದಿತನ ಅಂಟುಕೊಂಡಿತಾ ಎಂಬ ಅನುಮಾನ ಮೂಡುತ್ತಿದೆ. ಈ ಅನುಮಾನ ಮೂಡಲು ಇತ್ತೀಚಿನ ಕೆಲವು ಘಟನೆಗಳು, ಘಟನೆಗಳಿಗೆ ಕನ್ನಡ ನಟ-ನಟಿಯರು, ಸಿನಿಮಾ ಸೆಲೆಬ್ರಿಟಿಗಳು ಎನಿಸಿಕೊಂಡವರು ಸ್ಪಂದಿಸಿದ ರೀತಿಯೇ ಕಾರಣ.
ತಮ್ಮ ಸಿನಿಮಾಕ್ಕೆ ಸಮಸ್ಯೆ ಆದಾಗ ಸಿನಿಮಾ ನಟ-ನಟಿಯರು ಚಿಪ್ಪಿನಿಂದ ಹೊರಗೆ ಬರುತ್ತಾರೆ. ಸುದ್ದಿಗೋಷ್ಠಿ ನಡೆಸುತ್ತಾರೆ. ಕನ್ನಡ ಭಾಷೆ ಗೌರವ, ಭಾಷಾ ಪ್ರೇಮ ಇತ್ಯಾದಿ ವಿಷಯಗಳ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಹೊಡೆಯುತ್ತಾರೆ. ಕನ್ನಡಿಗರ ಆತ್ಮಾಭಿಮಾನ ಬಡಿದೆಬ್ಬಿಸುವ ಯತ್ನ ಮಾಡುತ್ತಾರೆ. ಆದರೆ ಅವರಿಗೆ ಕಾಳಜಿ ಇರುವುದು ಅವರ ಸಿನಿಮಾ ಬಗ್ಗೆಯೊ ಅಥವಾ ಕನ್ನಡದ ಬಗ್ಗೆಯೊ ಎಂಬುದು ಪ್ರಶ್ನೆ. ಅವರ ಸಿನಿಮಾಕ್ಕೆ ಹೊರರಾಜ್ಯದ ಸಿನಿಮಾದಿಂದ ಸಮಸ್ಯೆ ಆದಾಗಲಷ್ಟೆ ಅವರಿಗೆ ಕನ್ನಡದ ನೆನಪಾಗಿರುತ್ತದೆಯೇ ಹೊರತು, ಬೇರೆ ಸಮಯದಲ್ಲಿ ಅಲ್ಲ. ಹಲವು ಸಿನಿಮಾ ಸೆಲೆಬ್ರಿಟಿಗಳು 'ಜೈ ಕರ್ನಾಟಕ' ಹ್ಯಾಷ್ಟ್ಯಾಗ್ ಬಳಸಿ ಟ್ವಿಟ್ಟರ್ನಲ್ಲಿ ಮೂರು ಸಾಲು ಬರೆದು 'ಜವಾಬ್ದಾರಿ' ಮುಗಿಸುತ್ತಾರೆ.
ಅವಕಾಶವಿದ್ದರೂ ಕನ್ನಡತನ ಮೆರೆಯಲು ಹಿಂದೇಟು
ತಮ್ಮ ಸಿನಿಮಾಕ್ಕೆ ಇಂಗ್ಲಿಷ್ ಹೆಸರಿಡದೇ ಇರುವುದು, ತಮ್ಮ ಸಿನಿಮಾಗಳಲ್ಲಿ ಹೊರ ರಾಜ್ಯದವರಿಗೆ ಅವಕಾಶ ಕೊಡುವ ಬದಲು, ಕನ್ನಡದ ನಟ-ನಟಿ, ತಂತ್ರಜ್ಞರಿಗೆ ಅವಕಾಶ ಕೊಡುವುದು, ಇವೆಲ್ಲವೂ ನಮ್ಮ ಸಿನಿಮಾ ಸೆಲೆಬ್ರಿಟಿಗಳಿಗೆ ಕನ್ನಡ ಪ್ರೇಮ ಮೆರೆವ ಅವಕಾಶ ಎನಿಸುವುದಿಲ್ಲ. ಬದಲಿಗೆ ತಮ್ಮ ಸಿನಿಮಾಕ್ಕೆ ಹೊರ ರಾಜ್ಯದ ಸಿನಿಮಾಗಳಿಂದ ತೊಂದರೆ ಆಗುವುದನ್ನು ಮಾತ್ರವೇ 'ಕನ್ನಡಕ್ಕೆ ಆದ ಅವಮಾನವೆಂದು, ಕನ್ನಡದ ತುಳಿತವೆಂದು' ಬಿಂಬಿಸಲು ಯತ್ನಿಸುತ್ತಾರೆ. ಇದು ಕೆಲ ವರ್ಷಗಳಿಂದಲೂ ನಡೆದು ಬಂದಿದೆ.
ಕರ್ನಾಟಕದ ಹಲವು ಸಮಸ್ಯೆಗಳಿಗೆ ಸಿನಿರಂಗದವರ ಮೌನ
ಬೆಳಗಾವಿ ಗಡಿ ವಿವಾದ, ಹಿಂದಿ ಹೇರಿಕೆ, ರೈಲ್ವೆ, ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕನ್ನಡ ನಿರ್ಲಕ್ಷ್ಯ, ರಾಜ್ಯಕ್ಕೆ ಬರಬೇಕಾದ ಪರಿಹಾರ ವಿಳಂಬ, ಕನ್ನಡಿಗ ಕಾರ್ಮಿಕರ ಮೇಲೆ ಕಾರ್ಪೊರೇಟ್ ಸಂಸ್ಥೆಗಳ ದಬ್ಬಾಳಿಕೆ, ಕನ್ನಡ ಕಾರ್ಮಿಕರ ಚಳವಳಿ, ಕೇಂದ್ರದ ಕಾರ್ಯಕ್ರಮಗಳಲ್ಲಿ ಕನ್ನಡದ ಬಗ್ಗೆ ಅಸಡ್ಡೆ, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಇನ್ನೂ ಅನೇಕ ನಿಜವಾದ ಕನ್ನಡ ಅಸ್ಮಿತೆಗೆ ಧಕ್ಕೆ ತರುವ ಸಮಸ್ಯೆಗಳು ಇವೆ ಆದರೆ ಇವುಗಳ ಬಗ್ಗೆ ನಮ್ಮ ಸಿನಿಮಾ ಸೆಲೆಬ್ರಿಟಿಗಳು ಮೂಗರೂ, ಕುರುಡರೂ, ಕಿವುಡರಾಗಿ ಬಿಡುತ್ತಾರೆ. ಆದರೆ ಯಾವಾಗ ತಮ್ಮ ಸಿನಿಮಾಕ್ಕೆ ತುಸು ಸಮಸ್ಯೆ ಆಗುತ್ತದೆಯೋ ಆವಾಗ ಇವರೊಳಗಿನ ಕನ್ನಡ ಪ್ರೇಮ, ಕನ್ನಡಪರ ಹೋರಾಟಗಾರ ಹೊರಬರುತ್ತಾನೆ. ಮತ್ತೆ ನಿದ್ರಾವಸ್ತೆಗೆ ಜಾರುತ್ತಾನೆ. ಇದನ್ನು ಅವಕಾಶವಾದಿ ಕನ್ನಡ ಪ್ರೇಮ ಎನ್ನದೇ ಇನ್ನೇನೆನ್ನಲು ಸಾಧ್ಯ.
ತಮಿಳು-ತೆಲುಗಿಗೆ ಹೋಲಿಸಿದರೆ ನಮ್ಮವರಿಗೆ ಭಾಷಾಭಿಮಾನ ಕಡಿಮೆ: ದರ್ಶನ್
ತಮ್ಮ ನಟನೆಯ 'ರಾಬರ್ಟ್' ಸಿನಿಮಾವನ್ನು ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಮಾಡಲು ತಡೆ ಮಾಡಲಾಗಿದೆ ಎಂಬ ಕಾರಣಕ್ಕೆ ನಟ ದರ್ಶನ್ ಸಿಟ್ಟಾಗಿದ್ದಾರೆ. 'ತಮಿಳು-ತೆಲುಗಿಗೆ ಹೋಲಿಸಿದರೆ ನಮ್ಮವರಿಗೆ ಭಾಷಾಪ್ರೇಮ ಕಡಿಮೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ವ್ಯಂಗ್ಯವೆಂದರೆ ಇದೇ ನಟ ದರ್ಶನ್ ಅವರು ಲೋಕಸಭೆ ಚುನಾವಣೆ ವೇಳೆ ಸುಮಲತಾ ಪರ ಪ್ರಚಾರ ಮಾಡುತ್ತಾ ಮಂಡ್ಯದಲ್ಲಿ ತಮಿಳಿನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ್ದರು. ಆದರೆ ಈಗ ಕನ್ನಡಿಗರಿಗೆ ಭಾಷಾ ಪ್ರೇಮ ಕಡಿಮೆ ಎಂದು ಆರೋಪಿಸುತ್ತಿದ್ದಾರೆ.
Recommended Video
'ಕನ್ನಡ' ಎಂದರೆ 'ಸಿನಿಮಾ' ಅಲ್ಲ
'ಕನ್ನಡ' ಎಂದರೆ ಸಿನಿಮಾ ಎಂಬ ಭ್ರಮೆಯಿಂದ ಸಿನಿಮಾರಂಗದ ಜನ ಹೊರಗೆ ಬರಬೇಕಿದೆ. ಕನ್ನಡ ಚಿತ್ರರಂಗ ಇಡೀಯ ಕರ್ನಾಟಕವನ್ನು, ಕನ್ನಡವನ್ನು ಪ್ರತಿನಿಧಿಸುತ್ತದೆ. ಕನ್ನಡ ಸಿನಿಮಾಗಳಿಗೆ ಸಮಸ್ಯೆಯಾದರೆ ಅದು ಕನ್ನಡಕ್ಕೆ ಸಮಸ್ಯೆ ಎಂಬ ಭಾವನೆ ಬಿತ್ತುವ ಕಾರ್ಯವನ್ನೂ ಸಹ ಕೈಬಿಡಬೇಕು. ಸಿನಿಮಾರಂಗದ ಹಲವರ ಈ 'ಅವಕಾಶವಾದಿ ಕನ್ನಡ ಪ್ರೇಮ' ಜನರಿಗೆ ಅರ್ಥವಾದ ದಿನ ಸಿನಿಮಾ 'ತಾರೆ'ಯರು ಕಳಚಿ ನೆಲಕ್ಕೆ ಬೀಳುತ್ತಾರಷ್ಟೆ.