'ಬಾಸ್' ಇದು ದರ್ಶನ್-ರೇಣುಕಾಸ್ವಾಮಿ ಕಥೆನಾ? ಕೇಸ್ ಟ್ರಯಲ್ನಲ್ಲಿ ಇರುವಾಗ ಸಿನಿಮಾ ಮಾಡಬಹುದೇ?
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಈ ಕೇಸ್ನಲ್ಲಿ ಮೊದಲ ಆರೋಪಿಯಾಗಿ ಪವಿತ್ರಾ ಗೌಡ ಹಾಗೂ 2ನೇ ಆರೋಪಿಯಾಗಿ ದರ್ಶನ್ ಇದ್ದಾರೆ. ಹೀಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಸೇರಿದಂತೆ ಅವರ ಸಹಚರರನ್ನು ಇರಿಸಲಾಗಿದೆ. ಸದ್ಯ ಈ ಕೇಸ್ ಈಗ ಟ್ರಯಲ್ ಸ್ಟೇಜ್ನಲ್ಲಿದೆ. ಹೀಗಾಗಿ ದರ್ಶನ್ಗೆ ಯಾವಾಗ ಜಾಮೀನು ಸಿಗುತ್ತೋ ಅಂತ ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಈ ಮಧ್ಯೆ 'ಬಾಸ್' ಅನ್ನೋ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಹಾಗಂತ ಈ ಸಿನಿಮಾದಲ್ಲಿ ಡಿ ಬಾಸ್ ಇಲ್ಲ. ಆದರೆ, ದರ್ಶನ್ ಹಾಗೂ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಸನ್ನಿವೇಶಗಳು ಮೇಲ್ನೋಟಕ್ಕೆ ಕಾಣಿಸುತ್ತಿವೆ. ಈಗಾಗಲೇ ಟೀಸರ್ ಬಿಡುಗಡೆಯಾಗಿದ್ದು, ದೊಡ್ಡ ಸಂಚಲವನ್ನೇ ಸೃಷ್ಟಿಸುತ್ತಿದೆ. 'ಬಾಸ್' ಸಿನಿಮಾ ತುಣುಕಿನಲ್ಲಿ ರೇಣುಕಾಸ್ವಾಮಿ ಹತ್ಯೆಯನ್ನು ಹೋಲಿವಂತಹ ಕಥೆಯಿದೆ ಎಂದು ಗೆಸ್ ಮಾಡಲಾಗುತ್ತಿದೆ.

ನಿರ್ದೇಶಕ ಲವ 'ಬಾಸ್' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ವೃತತಿಯಲ್ಲಿ ವಕಿಲರೂ ಆಗಿರುವ ಲವ, ನೈಜ ಘಟನೆಗಳನ್ನು ಆಧರಿಸಿ, ಈ ಸಿನಿಮಾವನ್ನು ಮಾಡಲಾಗಿದೆ ಎಂದು ಲವ್ ಹೇಳಿಕೊಂಡಿದ್ದಾರೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ 'ಬಾಸ್' ಸಿನಿಮಾ ದರ್ಶನ್ ಹಾಗೂ ರೇಣುಕಾಸ್ವಾಮಿ ಘಟನೆಯನ್ನೇ ಇಟ್ಕೊಂಡು ಮಾಡಿದ ಸಿನಿಮಾವೆಂದು ವಾದಿಸುತ್ತಿದ್ದಾರೆ. ಹಾಗಿದ್ದರೆ, ಟ್ರಯಲ್ನಲ್ಲಿ ಇರುವ ಕೇಸ್ ಅನ್ನು ಇಟ್ಕೊಂಡು ಸಿನಿಮಾ ಮಾಡಬಹುದೇ? ಇಲ್ಲಿದೆ ಉತ್ತರ.
ಸಿನಿಮಾದ ಟೀಸರ್ ವಿವಾದಕ್ಕೆ ಸಿಲುಕುತ್ತಿದ್ದಂತೆ ನಿರ್ದೇಶಕ ಲವ ಇದು ನೈಜ ಘಟನೆಯನ್ನು ಇಟ್ಟುಕೊಂಡು ಮಾಡಿದ ಸಿನಿಮಾ ಎಂದಿದ್ದಾರೆ. "ಈ ಸಿನಿಮಾ ನೈಜ ಘಟನೆಗಳನ್ನು ಆಧರಿಸಿ ಮಾಡಲಾಗಿದೆ. ಸಮಾಜದಲ್ಲಿ ನಡೆಯುವ ಕೆಲವು ಘಟನೆಗಳನ್ನು ಇಟ್ಕೊಂಡು ಸಿನಿಮಾ ಮಾಡಿದ್ದೇವೆ. ಒಂದು ಕೊಲೆಯನ್ನು ಇಟ್ಕೊಂಡು ಸಿನಿಮಾಗೆ ಕಥೆಯನ್ನು ಹೆಣೆಯಾಗಿದೆ" ಎಂದಿದ್ದಾರೆ.
'ಬಾಸ್' ದರ್ಶನ್ ಹಾಗೂ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದ ಸಿನಿಮಾವಲ್ಲ ಅಂತಾನೂ ನಿರ್ದೇಶಕ ಲವ ಹೇಳಿಕೊಂಡಿದ್ದಾರೆ. "ಈ ಸಿನಿಮಾ ನೋಡಿದ ಬಳಿಕ ಇದು ರಿಯಲ್ ಸ್ಟೋರಿನಾ? ಇಲ್ಲಾ ನಿರ್ದೇಶಕರ ಕಾಲ್ಪನಿಕ ಕಥೆನಾ? ಅನ್ನೋದು ಗೊತ್ತಾಗುತ್ತೆ. ಸದ್ಯ ಸಿನಿಮಾದ ಫಸ್ಟ್ ಲುಕ್ ಲಾಂಚ್ ಮಾಡಿದ್ದೇವೆ. ನಂತರ ನಾವು ಟ್ರೈಲರ್ ಲಾಂಚ್ ಮಾಡಿದ ಬಳಿಕ ಸಂಕ್ಷಿಪ್ತವಾಗಿ ಗೊತ್ತಾಗುತ್ತೆ." ಎಂದು ಹೇಳಿದ್ದಾರೆ.
ಹಾಗೇ, "ಇದು ಖಂಡಿತವಾಗಿಯೂ ದರ್ಶನ್ ಸರ್ ಅವರ ಪ್ರಕರಣ ಅಲ್ಲ. ಸಾಮಾಜದಲ್ಲಿ ನಡೆದ ಘಟನೆಯನ್ನು ಇಟ್ಕೊಂಡು ಮಾಡಿದಂತಹ ಸಿನಿಮಾ. ಎರಡು-ಮೂರು ವರ್ಷಗಳಲ್ಲಿ ನಡೆದ ಘಟನೆಯನ್ನು ಇಟ್ಕೊಂಡು ಮಾಡಿದಂತಹ ಸಿನಿಮಾ. ಎರಡು ಮೂರು ವರ್ಷಗಳ ಹಿಂದೆ ಸಾಕಷ್ಟು ಘಟನೆಗಳು ನಡೆದಿವೆ. ಅದನ್ನು ಇಟ್ಕೊಂಡು ಈ ಸಿನಿಮಾವನ್ನು ಮಾಡಲಾಗಿದೆ." ಎಂದು ಲವ ಮಾಧ್ಯಮಗಳಿಗೆ ಹೇಳಿದ್ದಾರೆ.

ಇನ್ನು ಇದೊಂದು ಕಂಟೆಂಟ್ ಇರುವ ಸಿನಿಮಾ. ಹಗಲು-ರಾತ್ರಿ ಬೆಂಗಳೂರು ಸುತ್ತಮುತ್ತ ಸುಮಾರು 42 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. "ಒಳ್ಳೊಳ್ಳೆ ಕಲಾವಿದರನ್ನು ಪರಿಚಯ ಮಾಡಿದ್ದೇವೆ. ಕೆಲವು ಸೀನಿಯರ್ ಆಕ್ಟರ್ ಅನ್ನು ಕೇಳಿದಾಗ ಅವರು ಕಥೆಯನ್ನು ಕೇಳಿ ಹಿಂದೇಟು ಹಾಕಿದರು. ಕೆಲವು ಹೀರೋಯಿನ್ಗಳು ಹೆದರಿಕೊಂಡು ಬಂದೇ ಇಲ್ಲ. ಕೆಲವರು ಫೋನ್ ಅನ್ನು ಪಿಕ್ ಮಾಡುತ್ತಿಲ್ಲ. ಒಳ್ಳೆಯ ಕಂಟೆಂಟ್ ಇದೆ. ಸಿನಿಮಾ ಗೆಲ್ಲುತ್ತೆ ಅನ್ನೋ ಭರವಸೆಯಿದೆ." ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ 'ಬಾಸ್' ಸಿನಿಮಾ ದರ್ಶನ್ ಹಾಗೂ ರೇಣುಸ್ವಾಮಿ ಕೇಸ್ ಸಂಬಂಧಿಸಿದ್ದೇ ಆದರೆ, ಕೇಸ್ ಟ್ರಯಲ್ ಹಂತದಲ್ಲಿ ಇರುವಾಗಲೇ ಸಿನಿಮಾ ಮಾಡಬಹುದೇ? ಎಂಬ ಪ್ರಶ್ನೆಗೆ ವಕೀಲರು ಉತ್ತರಕೊಟ್ಟಿದ್ದಾರೆ. "ಟ್ರಯಲ್ ನಡೆಯುವಾಗ ಆ ಘಟನೆಗೆ ಸಂಬಂಧಿಸಿದ ಸಿನಿಮಾ ಮಾಡಬಾರದು. ನಾನು ದರ್ಶನ್ ಸರ್ ಅವರ ರಿಯಲ್ ಸ್ಟೋರಿ ಮಾಡುತ್ತಿಲ್ಲ. ಇದು ನನ್ನ ಕಾಲ್ಪನಿಕ ಕಥೆ. ಸಮಾಜದಲ್ಲಿ ನಡೆಯುವ ಅನೇಕ ಘಟನೆಗಳನ್ನು ಒಟ್ಟು ಸೇರಿಸಿ ಮಾಡಿರುವಂತಹ ಸಿನಿಮಾ. ನಾನು ಕೂಡ ದರ್ಶನ್ ಅಭಿಮಾನಿ. ಅವರನ್ನು ಸಮಾಜಕ್ಕೆ ಸಂದೇಶ ನೀಡುವ ಹೀರೋ ಅಂತಾನೇ ನೋಡುತ್ತೇವೆ." ಎಂದಿದ್ದಾರೆ.


Click it and Unblock the Notifications















