ನಾಳೆಯಿಂದ ಯುವ 'ಖೈದಿ'ಯ ಅಬ್ಬರ ಶುರು
'ರಣವಿಕ್ರಮ'ನ ಅಬ್ಬರದ ನಡುವೆ ಈ ವಾರ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುವುದಕ್ಕೆ ರೆಡಿಯಾಗಿವೆ. ನಿರ್ದೇಶಕ ಮೋಹನ್ ನಿರ್ಮಾಣದ 'ಮಳೆ ನಿಲ್ಲುವವರೆಗೆ', ರಾಜೇಶ್ ಕೃಷ್ಣನ್ ಅಭಿನಯದ 'ಮೆಲೋಡಿ', ಟಿ.ಎನ್.ಸೀತಾರಾಮ್ ನಿರ್ಮಿಸಿರುವ 'ಹಿಂಗ್ಯಾಕೆ' ಚಿತ್ರ ಈ ವಾರ ಬಿಡುಗಡೆ ಆಗುತ್ತಿದೆ.
ಈ ಎಲ್ಲಾ ಚಿತ್ರಗಳ ನಡುವೆ 'ಸೈಕೋ' ಖ್ಯಾತಿಯ ಧನುಷ್ ಮತ್ತು ಚಾಂದಿನಿ ಅಭಿನಯದ 'ಖೈದಿ' ಚಿತ್ರ ಕೂಡ ತೆರೆಗೆ ಅಪ್ಪಳಿಸುತ್ತಿದೆ. ದಿ ಗ್ರ್ಯಾಂಡ್ ಕ್ರಿಯೇಷನ್ಸ್ ಲಾಂಛನದಲ್ಲಿ ನಯನ ಶರತ್ ಮತ್ತು ಕಲಾ ಭಕ್ತ ನಿರ್ಮಿಸಿರುವ ಚಿತ್ರ 'ಖೈದಿ'.

'ಖೈದಿ' ಅಂದ ಕೂಡಲೆ 1984 ರಲ್ಲಿ ತೆರೆಕಂಡ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ 'ಖೈದಿ' ಸಿನಿಮಾ ನೆನಪಿಗೆ ಬರಬಹುದು. ಆದ್ರೆ, ಆ ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. 'ಖೈದಿ' ಚಿತ್ರದ ಸೂಪರ್ ಹಿಟ್ ''ತಾಳೆ ಹೂವ ಪೊದೆಯಿಂದ..'' ಹಾಡನ್ನ ಇಲ್ಲಿ ರೀಮಿಕ್ಸ್ ಮಾಡಲಾಗಿದೆ ಅಷ್ಟೆ. [ಸಂಕಷ್ಟಗಳ ಸಂಕೋಲೆಯಲ್ಲಿ 'ಸೈಕೋ' ಧನುಷ್ 'ಖೈದಿ']
'ಸೈಕೋ' ಚಿತ್ರದ ನಂತರ ಧನುಷ್ ಬಣ್ಣ ಹಚ್ಚಿರುವ ಚಿತ್ರ 'ಖೈದಿ'. ಹಾಗೇ, 'ಎ' ಖ್ಯಾತಿಯ ಚಾಂದಿನಿ ಕೂಡ ಬಹು ವರ್ಷಗಳ ನಂತರ ಇದೇ ಸಿನಿಮಾಗಾಗಿ ಬಣ್ಣ ಹಚ್ಚಿದ್ದಾರೆ. 'ಸೈಕೋ' ಚಿತ್ರಕ್ಕೆ ಬಂಡವಾಳ ಹಾಕಿದ್ದ ಗುರುದತ್, 'ಖೈದಿ'ಗೆ ಕಥೆ-ಚಿತ್ರಕಥೆ ರಚಿಸಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. [ಗಾಂಧಿನಗರದ ಹೊಸ 'ಖೈದಿ'ಯ ಆಟ ನೋಡಿರಣ್ಣ]
ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕರುಗಳಾದ ಜಸ್ಟಿನ್-ಉದಯ್ 'ಖೈದಿ' ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅದ್ದೂರಿಯಾಗಿ ರೆಡಿಯಾಗಿರುವ 'ಖೈದಿ' ನಾಳೆಯಿಂದ (ಏಪ್ರಿಲ್ 17) ನಿಮ್ಮ ಮುಂದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











