ಮಲ್ಟಿಪ್ಲೆಕ್ಸ್ ಗಳಲ್ಲಿನ್ನು ಕನ್ನಡ ಚಿತ್ರ ಪ್ರದರ್ಶನ ಕಡ್ಡಾಯ!
ಕನ್ನಡ ಚಿತ್ರ ಪ್ರಿಯರಿಗೆ ಇದೋ ಇಲ್ಲಿದೆ ಸಿಹಿ ಸುದ್ದಿ. ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಗಳನ್ನ ವೀಕ್ಷಿಸಬೇಕು ಅಂತ ಕಾಯುವ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಪರ್ ಉಡುಗೊರೆ ನೀಡಿದ್ದಾರೆ.
ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ಮಾಡಲೇಬೇಕು ಅಂತ ಎಲ್ಲಾ ಮಲ್ಟಿಪ್ಲೆಕ್ಸ್ ಮಾಲೀಕರಿಗೆ ಸಿ.ಎಂ. ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ. ಅಲ್ಲದೇ, ಟಿಕೆಟ್ ದರ ಕೂಡ ಕಡಿಮೆ ಮಾಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.

ಈ ಬಗ್ಗೆ ಇಂದು ಬೆಳ್ಳಗ್ಗೆ ಸಿ.ಎಂ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಮಲ್ಟಿಪ್ಲೆಕ್ಸ್ ಓನರ್ ಗಳೊಂದಿಗೆ ಸಿದ್ದರಾಮಯ್ಯ ಸಭೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಪರಿಷತ್ ಸದಸ್ಯ, ನಟ ಜಗ್ಗೇಶ್, ನಟಿ ತಾರಾ ಅನೂರಾಧ, ಹಿರಿಯ ನಟಿ ಜಯಮಾಲಾ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಹಲವರು ಚರ್ಚೆ ನಡೆಸಿದರು.
ಚರ್ಚೆಯ ಬಳಿಕ ಮಾತನಾಡಿದ ನವರಸ ನಾಯಕ ಜಗ್ಗೇಶ್, ''ಕನ್ನಡದ ಬಗ್ಗೆ ಇಷ್ಟು ಗಟ್ಟಿ ಧ್ವನಿಯಲ್ಲಿ ಮಾತನಾಡಿದ ಮತ್ತೊಬ್ಬ ಸಿಎಂ ಅನ್ನು ನೋಡಿಲ್ಲ. ಇದಕ್ಕಿಂತ ಹೆಚ್ಚು ಇನ್ನೇನು ಬೇಕು? ಮಲ್ಟಿಪ್ಲೆಕ್ಸ್ ನಲ್ಲಿ ಕನ್ನಡ ಚಿತ್ರ ಪ್ರದರ್ಶನ ಮಾಡಲೇಬೇಕು ಅಂತ ಸಿ.ಎಂ ಖಡಾಖಂಡಿತ ಆದೇಶ ನೀಡಿದ್ದಾರೆ.'' ಅಂದರು.

''ಸಿ.ಎಂ ಜೊತೆ ನಡೆದ ಸಭೆ ಯಶಸ್ವಿ ಆಗಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರ ಮತ್ತು ಅದರ ದರ ನಿಗದಿ ಮಾಡುವುದಕ್ಕೆ ರೋಷನ್ ಬೇಗ್ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತೆ. ಇದರಿಂದ ಕನ್ನಡಿಗರೂ ಮಲ್ಟಿಪ್ಲೆಕ್ಸ್ ಗಳಿಗೆ ಹೋಗಬಹುದು'' ಅಂತ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಹೇಳಿದರು. [ಇಂದಿನಿಂದ ನಿರ್ಮಾಪಕರ ಸರಣಿ ಉಪವಾಸ ಸತ್ಯಾಗ್ರಹ]

ತಮಿಳುನಾಡಿನಲ್ಲಿ ಚಾಲ್ತಿಯಲ್ಲಿರುವ 'ಅಮ್ಮಾ ಥಿಯೇಟರ್' ಮಾದರಿಯಲ್ಲಿ ಕರ್ನಾಟಕದಲ್ಲೂ 'ಜನತಾ ಥಿಯೇಟರ್' ಆರಂಭಿಸಿ ಕಡಿಮೆ ಟಿಕೆಟ್ ದರದಲ್ಲಿ ಜನಸಾಮಾನ್ಯರಿಗೆ ಮನರಂಜನೆ ನೀಡುವ ಬಗ್ಗೆಯೂ ಮುಖ್ಯಮಂತ್ರಿಗಳ ಜೊತೆ ಸಭೆಯಲ್ಲಿ ಮಾತುಕತೆ ನಡೆದಿದೆ.


Click it and Unblock the Notifications











