ಉತ್ತರ ಕರ್ನಾಟಕದಲ್ಲಿ 'ಸ್ಟೂಡೆಂಟ್ಸ್' ವಿಜಯೋತ್ಸವ
ಯುವ ಪ್ರತಿಭೆಗಳೇ ಸೇರಿ ಮಾಡಿದ್ದ 'ಸ್ಟೂಡೆಂಟ್ಸ್' ಸಿನಿಮಾ ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಹೀಗಾಗಿ, ಚಿತ್ರದ ಯಶಸ್ಸಿನ ಸಂಭ್ರಮದಲ್ಲಿ ಚಿತ್ರತಂಡ ಭಾಗಿಯಾಗಿದ್ದು, ರಾಜ್ಯಾದ್ಯಂತ ಎಲ್ಲ ಚಿತ್ರಮಂದಿರಗಳಿಗೂ ಭೇಟಿ ನೀಡಿ ಪ್ರೇಕ್ಷಕರ ಜೊತೆ ಸಂತಸ ಹಂಚಿಕೊಳ್ಳುತ್ತಿದ್ದಾರೆ.
ಜೂನ್ 16 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದ 'ಸ್ಟೂಡೆಂಟ್ಸ್' ಈಗಲೂ ಅನೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಚಿತ್ರವನ್ನ ನೋಡುತ್ತಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಸಂತೋಷ್ ಕುಮಾರ್ ಮತ್ತು ತಂಡ, ಸದ್ಯ ಉತ್ತರ ಕರ್ನಾಟಕ ಭಾಗಕ್ಕೆ ಇತ್ತೀಚೆಗಷ್ಟೇ ಭೇಟಿ ಕೊಟ್ಟಿತ್ತು. ಈ ಚಿತ್ರತಂಡಕ್ಕೆ ಭರ್ಜರಿ ಸ್ವಾಗತ ಸಿಕ್ಕಿದ್ದು, ಸಿನಿಪ್ರೇಕ್ಷಕರು ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ಅಂದ್ಹಾಗೆ, 'ಸ್ಟೂಡೆಂಟ್ಸ್' ಸಿನಿಮಾ ಸಾಮಾಜಿಕ ಕಾಳಜಿ ಹೊಂದಿರುವ ಚಿತ್ರವಾಗಿದೆ. ಕಾಲೇಜು ಲೈಫ್ ನ ಸುತ್ತ ಕಥೆ ನಡೆಯುತ್ತದೆ. ಕಾಲೇಜು ಕೇವಲ ಟೈಮ್ ಪಾಸ್ ಅಲ್ಲ ಇಲ್ಲಿ ಕಲಿಕೆಗೆ ಕೊನೆ ಇಲ್ಲ ಎಂಬುದನ್ನು ಮನಮುಟ್ಟುವ ರೀತಿಯಲ್ಲಿ ತೋರಿಸಲಾಗಿದೆ. ಕಾಮಿಡಿ, ಸೆಂಟಿಮೆಂಟ್, ಮೆಸೆಜ್ ಹೀಗೆ ಎಲ್ಲ ರೀತಿಯ ಕಮರ್ಷಿಯಲ್ ಅಂಶಗಳನ್ನ ಪೂರ್ತಿ ಮನರಂಜನೆಯಾಗಿ ನೀಡಿದೆ.

ಸಚಿನ್ ಪುರೋಹಿತ್, ಸಚಿನ್ ಜಿ.ಎಸ್ ಮತ್ತು ಕಿರಣ್ ರಾಯಬಾಗಿ ನಾಯಕರಾಗಿ ಅಭಿನಯಿಸಿದ್ದಾರೆ. ಭವ್ಯ ಕೃಷ್ಣ, ಅಂಕಿತ, ಮತ್ತು ಕಿರುತೆರೆ ನಟಿ ಸುವರ್ಣ ಶೆಟ್ಟಿ ಎಂಬ ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಎಲ್ಲರೂ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ.

'ಸ್ಟೂಡೆಂಟ್ಸ್' ಚಿತ್ರಕ್ಕೆ ಜೆ.ಜೆ.ಶರ್ಮಾ ಅವರ ಛಾಯಾಗ್ರಹಣವಿದ್ದು, ಎಡ್ವರ್ಡ್ ಅವರು ಸಂಗೀತ ನೀಡಿದ್ದಾರೆ. ವಿ.ಎಚ್.ಹೇಮಂತ್ ಹಾವೇರಿ ಸಂಭಾಷಣೆ ಬರೆದಿದ್ದು, ನೆಲಮನೆ ರಾಘವೇಂದ್ರ ಅವರ ಸಾಹಿತ್ಯ ಚಿತ್ರಕ್ಕಿದೆ.


Click it and Unblock the Notifications











