'ತಿಥಿ'ಯೂಟ ಹಾಕಿಸಿದ ಸೆಂಚುರಿಗೌಡ್ರು ತರ್ಲೆ ಮಾಡ್ತಾವ್ರೇ ಕಣ್ರೀ.!
'ತಿಥಿ' ಚಿತ್ರದ ಮೂಲಕ ಇಡೀ ವಿಶ್ವದಾದ್ಯಂತ ಫೇಮಸ್ ಆದ ತಮ್ಮೇ ಗೌಡ್ರು, ಚನ್ನೇ ಗೌಡ್ರು ಹಾಗೂ ಅಭಿಷೇಕ್ ಹೆಚ್.ಎನ್ ಅವರ ಯಶಸ್ಸಿನ ಪರಿಣಾಮ ಇದೀಗ ಇವರೆಲ್ಲರನ್ನು ಮತ್ತೊಂದು ಚಿತ್ರ ಹುಡುಕಿಕೊಂಡು ಬಂದಿದೆ.
ಹೌದು ಪಕ್ಕಾ ಹಳ್ಳಿ ಪ್ರತಿಭೆಗಳಾಗಿರುವ ಇವರೆಲ್ಲರೂ ಬಣ್ಣ ಹಚ್ಚದೇ ಇಡೀ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿ ನಂತರ ಇದೀಗ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. 'ತರ್ಲೆ ವಿಲೇಜ್' ಎಂಬ ವಿಭಿನ್ನ ಕಥಾಹಂದರ ಇರುವ ಈ ಚಿತ್ರದಲ್ಲಿ ಗಡ್ಡಪ್ಪ, ತಮ್ಮಣ್ಣ, ಅಭಿ ಮತ್ತು ಸೆಂಚುರಿ ಗೌಡ್ರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.['ತಿಥಿ'ಯಲ್ಲಿ ಪಾಲ್ಗೊಂಡ ವಿಮರ್ಶಕರು ಹೇಳಿದ್ದೇನು?]

ಮೈಸೂರು ಮೂಲದ ಕೆ.ಎಸ್ ರಘು ಎಂಬುವವರು 'ತರ್ಲೆ ವಿಲೇಜ್' ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಸಿದ್ದೇಗೌಡ ಎಂಬುವವರು ಕಥೆ ಬರೆದಿದ್ದಾರೆ. ಸುಮಾರು 70ಕ್ಕೂ ಹೆಚ್ಚು ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದು, ಬರೀ ಹಳ್ಳಿಯ ಜನರೇ ಇಲ್ಲಿ ಕಲಾವಿದರಾಗಿದ್ದಾರೆ.
ಈಗಾಗಲೇ ಚಿತ್ರದ ಮುಹೂರ್ತ ಮೈಸೂರಿನ ನೂರೊಂದು ಗಣಪತಿ ದೇವಸ್ಥಾನದಲ್ಲಿ ನೆರವೇರಿದೆ. ಈ ಸಂಭ್ರಮದ ಮುಹೂರ್ತ ಸಮಾರಂಭದ ಕಾರ್ಯಕ್ರಮದಲ್ಲಿ 'ತಿಥಿ' ಕಲಾವಿದರು ಸಡಗರದಿಂದ ಪಾಲ್ಗೊಂಡಿದ್ದರು.[ವಿಶ್ವದಾದ್ಯಂತ ಹವಾ ಎಬ್ಬಿಸಿರುವ 'ತಿಥಿ'ಯ ಚಿತ್ರವಿಮರ್ಶೆ]

'ತಿಥಿ' ಚಿತ್ರವನ್ನು ನೋಡಿ ಬೆಂಬಲಿಸಿ ಪ್ರೋತ್ಸಾಹಿಸಿದಂತೆ 'ತರ್ಲೆ ವಿಲೇಜ್' ಚಿತ್ರವನ್ನೂ ಕೂಡ ಪ್ರೋತ್ಸಾಹಿಸಿ ಎಂದು ಚಿತ್ರತಂಡ ಪ್ರೇಕ್ಷಕರಲ್ಲಿ ಕೋರಿಕೊಂಡಿದೆ.
'ಪಕ್ಕಾ ಹಳ್ಳಿ ಸೊಗಡಿನ ಈ ಸಿನಿಮಾದಲ್ಲಿ 8-9 ಕಥೆಗಳಿದ್ದು, 'ತಿಥಿ' ತಂಡದವರಿಗೆ ಹೇಳಿ ಮಾಡಿಸಿದಂತಿದೆ. ಕಡಿಮೆ ಬಜೆಟ್ ನಲ್ಲಿ ತಯಾರಾಗುತ್ತಿರುವ ಈ ಚಿತ್ರದ ಶೂಟಿಂಗ್ ಮಂಡ್ಯ ಸುತ್ತ-ಮುತ್ತ ನಡೆಯಲಿದೆ' ಎನ್ನುತ್ತಾರೆ ಚಿತ್ರದ ನಿರ್ಮಾಪಕ ಎಸ್.ಬಿ ಶಿವ ಅವರು.

ಒಟ್ನಲ್ಲಿ ಪ್ರೇಕ್ಷಕರಿಗೆ ಭರ್ಜರಿ 'ತಿಥಿ' ಊಟ ಹಾಕಿಸಿದ್ದ ಸೆಂಚುರಿ ಗೌಡ್ರು ಇದೀ ತರ್ಲೆ ಮಾಡಲು ಹೊರಟಿದ್ದು, ಪ್ರೇಕ್ಷಕರಿಗೆ ಮತ್ತೊಮ್ಮೆ ಥಿಯೇಟರ್ ನಲ್ಲಿ ಫುಲ್ ಮೀಲ್ಸ್ ಸಿಗೋದು ಗ್ಯಾರೆಂಟಿ.


Click it and Unblock the Notifications











