ಬಿಡುಗಡೆಗೂ ಮುನ್ನವೇ ಕಾಂತಾರ ವೀಕ್ಷಿಸುವ ಅವಕಾಶ; ಟಿಕೆಟ್ ದರ ಯಾವ ಚಿತ್ರಮಂದಿರದಲ್ಲಿ ಎಷ್ಟೆಷ್ಟು?
'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ' ಎಂಬ ವಿಭಿನ್ನ ಹಾಗೂ ಅಚ್ಚುಕಟ್ಟಾದ ಸಿನಿಮಾ ನಿರ್ದೇಶಿಸಿ ಅತ್ಯುತ್ತಮ ಮಕ್ಕಳ ಚಿತ್ರ ಎಂಬ ಕೆಟಗರಿ ಅಡಿಯಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದಿದ್ದ ರಿಷಬ್ ಶೆಟ್ಟಿ ಇದೀಗ ತಮ್ಮ ನಾಲ್ಕನೇ ನಿರ್ದೇಶನದಲ್ಲಿ ನಿಗೂಢ ಕಾಡಿನ ಕಥೆಯನ್ನು ಹೇಳಲು ಹೊರಟಿದ್ದಾರೆ.
ಪ್ರಸ್ತುತ ಕನ್ನಡ ಚಿತ್ರರಂಗದ ಅತಿ ದೊಡ್ಡ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಕಾಂತಾರ ರಿಚ್ ಆಗಿ ಮೂಡಿ ಬಂದಿದ್ದು, ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳಲ್ಲಿ ನೆಕ್ಸ್ಟ್ ಲೆವೆಲ್ ಮೇಕಿಂಗ್ ಇರುವುದನ್ನು ಕಾಣಬಹುದಾಗಿದೆ. ಇನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಒಟ್ಟು 6 ಚಿತ್ರಗಳು ಇಲ್ಲಿಯವರೆಗೂ ಚಿತ್ರಮಂದಿರಕ್ಕೆ ಕಾಲಿಟ್ಟಿದ್ದು ಈ ಪೈಕಿ ಮೂರು ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರಗಳಾದರೆ, ಇನ್ನುಳಿದ 3 ಚಿತ್ರಗಳು ಯಶ್ ಅಭಿನಯದ್ದು. ಹೀಗೆ ಇದೇ ಮೊದಲ ಬಾರಿಗೆ ಅಪ್ಪು ಮತ್ತು ಯಶ್ ತಾರಾಗಣದಲ್ಲಿ ಇಲ್ಲದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಚಿತ್ರ ಈ ವಾರ ತೆರೆಗೆ ಅಪ್ಪಳಿಸಲಿದೆ.
ಟಿಕೆಟ್ ಖರೀದಿಸಿ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನಿಗೆ ನಿರ್ದೇಶನದ ಮೂಲಕ ಇಲ್ಲಿಯವರೆಗೂ ನಿರಾಸೆ ಮೂಡಿಸದ ರಿಷಬ್ ಶೆಟ್ಟಿ ಈ ಬಾರಿಯೂ ಸಹ ತಮ್ಮ ತನವನ್ನು ಮುಂದುವರಿಸುವ ಸೂಚನೆಗಳನ್ನು ಸಂದರ್ಶನದಲ್ಲಿನ ಅವರ ಮಾತುಗಳಲ್ಲಿನ ವಿಶ್ವಾಸದ ಮೂಲಕ ಕಾಣಬಹುದಾಗಿದೆ. ಇನ್ನು ಕಾಂತಾರ ಇದೇ ಶುಕ್ರವಾರ ( ಸೆಪ್ಟೆಂಬರ್ 30 ) ಬಿಡುಗಡೆಯಾಗುತ್ತಿದ್ದು, ಚಿತ್ರ ವೀಕ್ಷಿಸಲು ಸಿನಿರಸಿಕರು ಕಾದು ಕುಳಿತಿದ್ದಾರೆ. ಇಂತಹ ಸಿನಿಪ್ರೇಕ್ಷಕರು ಕಾಂತಾರ ಚಿತ್ರವನ್ನು ಬಿಡುಗಡೆಯ ದಿನಕ್ಕೂ ಮುಂಚೆಯೇ ಕಣ್ತುಂಬಿಕೊಳ್ಳಬಹುದಾಗಿದ್ದು, ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳನ್ನು ಚಿತ್ರತಂಡ ಏರ್ಪಡಿಸಿದೆ.

ಗುರುವಾರ ಸಂಜೆಯೇ ಪ್ರದರ್ಶನಗಳು ಆರಂಭ
ಬೆಂಗಳೂರಿನ ಊರ್ವಶಿ ಚಿತ್ರಮಂದಿರ ಸೇರಿದಂತೆ ನಗರದ ಹಲವಾರು ಮಲ್ಟಿಪ್ಲೆಕ್ಸ್ ಪರದೆಗಳಲ್ಲಿ ಗುರುವಾರ ( ಸೆಪ್ಟೆಂಬರ್ 29 ) ಸಂಜೆ 6 ಗಂಟೆಯಿಂದಲೇ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗಿದೆ. ಸದ್ಯ ಈ ಪೈಕಿ ಕೆಲ ಚಿತ್ರಮಂದಿರಗಳ ಮುಂಗಡ ಬುಕಿಂಗ್ ಅನ್ನು ಬುಕ್ ಮೈಶೋ ಅಪ್ಲಿಕೇಶನ್ನಲ್ಲಿ ತೆರೆಯಲಾಗಿದ್ದು, ಆಸಕ್ತರು ಟಿಕೆಟ್ ಕಾಯ್ದಿರಿಸಿಕೊಳ್ಳಬಹುದಾಗಿದೆ. ಬೆಂಗಳೂರು ಮಾತ್ರವಲ್ಲದೇ ಮೈಸೂರು, ಮಂಗಳೂರು, ಶಿವಮೊಗ್ಗ, ಉಡುಪಿ ಹಾಗೂ ರಾಜ್ಯದ ಇನ್ನೂ ಕೆಲ ಪ್ರಮುಖ ನಗರಗಳಲ್ಲಿ ಗುರುವಾರದ ಪೇಯ್ಡ್ ಪ್ರಿಮಿಯರ್ ಶೋಗಳ ಮುಂಗಡ ಬುಕ್ಕಿಂಗ್ ಆರಂಭಗೊಂಡಿದೆ. ಮಲ್ಟಿಪ್ಲೆಕ್ಸ್ ಟಿಕೆಟ್ ದರ 200ರಿಂದ 500 ರೂಪಾಯಿಗಳವರೆಗೆ ಇದ್ದು, ಊರ್ವಶಿ ಚಿತ್ರಮಂದಿರದಲ್ಲಿ ಟಿಕೆಟ್ ದರ 120, 150 ಹಾಗೂ 200 ರೂಪಾಯಿಗಳಷ್ಟಿದೆ.

ಸಿನಿಮಾವನ್ನು ಅಪ್ಪು ಮಾಡಬೇಕಿತ್ತು
ಇನ್ನು ಕಾಂತಾರ ಚಿತ್ರತಂಡ ಚಿತ್ರದ ಪ್ರಚಾರದ ವೇಳೆ ಈ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ನಾಯಕ ನಟನಾಗಿ ಅಭಿನಯಿಸಬೇಕಿತ್ತು ಎಂಬ ವಿಷಯವನ್ನು ಬಿಚ್ಚಿಟ್ಟಿದೆ. ಚಿತ್ರಕತೆಯನ್ನು ನಿರ್ಮಾಪಕ ವಿಜಯ್ ಕಿರಗಂದೂರು ಕೇಳಿದ ನಂತರ ಯಾವ ಸ್ಟಾರ್ ನಟ ಈ ಚಿತ್ರಕ್ಕೆ ಸರಿ ಹೊಂದುತ್ತಾರೆ ಎಂಬ ಪ್ರಶ್ನೆ ಕೇಳಿದ್ದಾಗ ರಿಷಬ್ ಶೆಟ್ಟಿ ಅಪ್ಪು ಅವರ ಹೆಸರನ್ನು ಸೂಚಿಸಿದ್ದರು ಹಾಗೂ ನಂತರ ಅಪ್ಪು ಕಥೆಯನ್ನು ಕೇಳಿ ಇಷ್ಟಪಟ್ಟು ನಟಿಸಲು ಸಹ ಮುಂದಾಗಿದ್ದರು. ಆದರೆ ಇತರೆ ಚಿತ್ರಗಳಲ್ಲಿ ಅಪ್ಪು ಬ್ಯುಸಿ ಇದ್ದ ಕಾರಣ ಈ ಚಿತ್ರಕ್ಕೆ ಡೇಟ್ ನೀಡಲಾಗದೆ ಮೊದಲಿನ ಯೋಜನೆಯಂತೆ ರಿಷಬ್ ಅವರೇ ಅಭಿನಯಿಸಲಿ ಎಂದು ಹೇಳಿದ್ದರಂತೆ.

ಹೆಚ್ಚಾಯ್ತು ಪೇಯ್ಡ್ ಪ್ರೀಮಿಯರ್ ಶೋ ಟ್ರೆಂಡ್
ಕನ್ನಡದಲ್ಲಿ ಪುನೀತ್ ಅಭಿನಯದ ನಟ ಸಾರ್ವಭೌಮ ಚಿತ್ರದ ಮೂಲಕ ಪೇಯ್ಡ್ ಪ್ರೀಮಿಯರ್ ಶೋ ಟ್ರೆಂಡ್ ಶುರುವಾಯ್ತು. ನಟಸಾರ್ವಭೌಮ ಬಳಿಕ ಬಿಗ್ ಬಜೆಟ್ ಅವನೇ ಶ್ರೀಮನ್ನಾರಾಯಣ ಕೂಡ ಇದೇ ಹಾದಿಯನ್ನು ಹಿಡಿದಿತ್ತು. ಹೀಗೆ ಹಾಗೊಂದು ಹೀಗೊಂದು ಕನ್ನಡದ ಚಿತ್ರಗಳು ಪೇಯ್ಡ್ ಪ್ರೀಮಿಯರ್ ಶೋ ಆಯೋಜಿಸುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಈ ಟ್ರೆಂಡ್ ಸಾಮಾನ್ಯವಾಗಿಬಿಟ್ಟಿದ್ದು, ಇತ್ತೀಚೆಗಷ್ಟೇ ತೆರೆಕಂಡ ಗಾಳಿಪಟ 2, ಲಕ್ಕಿ ಮ್ಯಾನ್ ಹಾಗೂ ಮಾನ್ಸೂನ್ ರಾಗ ಚಿತ್ರಗಳು ಸಹ ಈ ಪ್ರೀಮಿಯರ್ ಶೋ ಟ್ರೆಂಡ್ ಹಿಂದೆ ಬಿದ್ದಿದ್ದವು ಹಾಗೂ ಇದೀಗ ಕಾಂತಾರ ಕೂಡ ಅದೇ ದಾರಿಯಲ್ಲಿ ನಡೆದಿದೆ.


Click it and Unblock the Notifications











