ಡಬ್ಬಿಂಗ್ ಪರ ಧ್ವನಿಯೆತ್ತಿದವರಿಗೆ ಮೊದಲ ಜಯ
ಡಬ್ಬಿಂಗ್ ಚಿತ್ರಗಳ ಬಗ್ಗೆ ಭಾರತೀಯ ಸ್ಪರ್ಧಾ ಆಯೋಗ (Competation Commission of India) ನಡೆಸುತ್ತಿರುವ ತನಿಖೆಯನ್ನು ನಿಲ್ಲಿಸಬೇಕು ಎಂದು ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಇಂದು (ನ.20) ತಳ್ಳಿಹಾಕಿದೆ.
ಈ ಮೂಲಕ ಡಬ್ಬಿಂಗ್ ಚಿತ್ರಗಳ ಪರ ಧ್ವನಿಯೆತ್ತುತ್ತಿದ್ದವರಿಗೆ ಇನ್ನಷ್ಟು ಬಲ ಬಂದಂತಾಗಿದೆ. ಡಬ್ಬಿಂಗ್ ಚಿತ್ರಗಳ ವಿವಾದಕ್ಕೆ ಮತ್ತೊಂದು ತಿರುವೂ ಸಿಕ್ಕಂತಾಗಿದೆ. ಇನ್ನೊಂದು ಅರ್ಥದಲ್ಲಿ ಕನ್ನಡದಲ್ಲಿ ಡಬ್ಬಿಂಗ್ ಚಿತ್ರಗಳ ಪರ ವಾದ ಮಾಡುತ್ತಿದ್ದವರಿಗೆ ಮೊದಲ ಜಯವಿದು. [ಡಬ್ಬಿಂಗ್ ಮಾರಕವಲ್ಲ ಪೂರಕ, ಸತ್ಯಮೇವ ಜಯತೆ!]

ಡಬ್ಬಿಂಗ್ ಕುರಿತ ವಾದ ವಿವಾದಗಳೇನೇ ಇದ್ದರೂ ಭಾರತೀಯ ಸ್ಪರ್ಧಾ ಆಯೋಗದಲ್ಲಿಯೇ ಬಗೆಹರಿಸಿಕೊಳ್ಳಿ ಎಂದು ಫಿಲಂ ಚೇಂಬರ್ ಗೆ ಹೈಕೋರ್ಟ್ ಸೂಚಿಸಿದ್ದು, ರಿಟ್ ಅರ್ಜಿಯನ್ನು ವಜಾಗೊಳಿಸಿದೆ. ಡಬ್ಬಿಂಗ್ ಚಿತ್ರಗಳಿಗೆ ಬ್ರೇಕ್ ಹಾಕಲು ಹೊರಟ ಫಿಲಂ ಚೇಂಬರ್ ಗೆ ಆರಂಭದಲ್ಲೇ ಮುಖಭಂಗವಾಗಿದೆ.
ಈ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿರುವ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಬಿ ಸುರೇಶ್ (ಬೀಸು) ಅವರು, ಡಬ್ಬಿಂಗ್ ನಿಂದ ಮೊದಲ ಹೊಡೆತ ಬೀಳುವುದು ಕಿರುತೆರೆಗೆ. ಕನ್ನಡದ ಎಷ್ಟೋ ಧಾರಾವಾಹಿಗಳು ನಿಂತು ಹೋಗುತ್ತವೆ. ನಮ್ಮ ಕಲಾವಿದರ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿಯಾಗುತ್ತದೆ ಎಂದಿದ್ದಾರೆ.
ಈ ಕುರಿತು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ಹಾಗೂ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಮಾತನಾಡುತ್ತಾ, "ಡಬ್ಬಿಂಗ್ ಬೇಕು ಎನ್ನುವವರು ತಲೆಹಿಡುಕರು, ಡಬ್ಬಿಂಗ್ ನಿಂದ ನಮ್ಮ ಸಂಸ್ಕೃತಿಗೆ ಧಕ್ಕೆಯಾಗುತ್ತದೆ" ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ನಿರ್ಮಾಪಕ ಸಾ.ರಾ. ಗೋವಿಂದು, ನವರಸ ನಾಯಕ ಜಗ್ಗೇಶ್ ಅವರು ಸೇರಿದಂತೆ ಹಲವರು ಹೈಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾವು ಮುಂದಿನ ಕಾನೂನು ಕ್ರಮಕ್ಕೆ ಹೋರಾಡುವುದಾಗಿ ಹೇಳಿದ್ದಾರೆ.
ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್ ಆಗಲು ಯಾಕೆ ಅವಕಾಶ ಮಾಡಿಕೊಡುತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಭಾರತೀಯ ಸ್ಪರ್ಧಾ ಆಯೋಗಕ್ಕೆ ಕರ್ನಾಟಕ ಗ್ರಾಹಕರ ಒಕ್ಕೂಟ ದೂರು ಸಲ್ಲಿಸಿತ್ತು. ಅದರಂತೆ ಅದು ತನಿಖಾ ವರದಿ ತಯಾರಿಸಿದೆ. ಆದರೆ ಆ ವರದಿಯಲ್ಲಿ ಏನಿದು ಎಂಬುದು ಮಾತ್ರ ಇನ್ನೂ ಬಹಿರಂಗವಾಗಿಲ್ಲ.
ಒಟ್ಟಾರೆಯಾಗಿ ಇಷ್ಟು ದಿನ ಡಬ್ಬಿಂಗ್ ಬಗೆಗಿನ ಚರ್ಚೆ, ವಾದ ವಿವಾದಕ್ಕಷ್ಟೇ ಸೀಮಿತವಾಗಿದ್ದದ್ದು ಈಗ ಕಾನೂನು ಮಟ್ಟದ ಹೋರಾಟಕ್ಕೆ ಸಜ್ಜಾಗಿದೆ. ಮುಂದೇನಾಗುತ್ತದೋ ಏನೋ ಎಂಬ ಕುತೂಹಲ ಡಬ್ಬಿಂಗ್ ವಿರೋಧಿಗಳಿಗೂ ಮತ್ತು ಅದರ ಪರ ಇರುವರಿಗೂ ಕುತೂಹಲದ ಪ್ರಶ್ನೆಯಾಗಿದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











