ಅಪ್ಪು ಮತ್ತೆ ಹುಟ್ಟಿ ಬಾ, ಹುಟ್ಟಿ ಬಾ, ಹುಟ್ಟಿ ಬಾ: ಭಾವಾವೇಷಕ್ಕೊಳಗಾದ ಸಿಎಂ ಬೊಮ್ಮಾಯಿ
ಅಭಿಮಾನಿಗಳನ್ನು ಅಗಲಿದ ಪುನೀತ್ ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗಿದೆ. ಪ್ರಶಸ್ತಿಯನ್ನು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಸ್ವೀಕಾರ ಮಾಡಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸೂಪರ್ ಸ್ಟಾರ್ ರಜನೀಕಾಂತ್, ಜೂ ಎನ್ಟಿಆರ್, ಶಿವರಾಜ್ ಕುಮಾರ್, ಸುಧಾ ಮೂರ್ತಿ ಇನ್ನಿತರ ಮಹನೀಯರ ಉಪಸ್ಥಿತಿಯಲ್ಲಿ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ನೀಡಲಾಯಿತು.
ಕಾರ್ಯಕ್ರಮದ ಸಮಯಕ್ಕೆ ಜೋರು ಮಳೆ ಬಂದರೂ ಸಹ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಕದಲದೆ ಕಾರ್ಯಕ್ರಮ ವೀಕ್ಷಿಸಿದರು. ಅತಿಥಿಗಳೂ ಸಹ ಮಳೆಯಲ್ಲಿಯೇ ನಿಂತು ಪುನೀತ್ ರಾಜ್ಕುಮಾರ್ ಅವರ ಗುಣಗಾನ ಮಾಡಿದರು.
ಮಳೆಯ ಕಾರಣ ಯೋಜನೆಯಂತೆ ಕಾರ್ಯಕ್ರಮ ನಡೆಯದಿದ್ದರೂ ಸಹ ಕಾರ್ಯಕ್ರಮದ ಉದ್ದೇಶ ತುಸುವೂ ಮುಕ್ಕಾಗಲಿಲ್ಲ. ವೇದಿಕೆಯ ಮೇಲಿದ್ದವರೆಲ್ಲ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಂಡರು, ಹಾಡಿ ಹೊಗಳಿದರು.

ವರುಣ ದೇವ ಆಶೀರ್ವಾದ ಮಾಡಿದ್ದಾನೆ: ಸಿಎಂ
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಭಾವುಕತೆಯಿಂದ ಆವೇಶಕ್ಕೊಳಗಾದಂತೆ ಮಾತನಾಡಿದರು. ''ವರುಣ ದೇವ ಇಂದು ಆಶೀರ್ವಾದ ಮಾಡಿದ್ದಾನೆ, ದೊಡ್ಡ ಪ್ರಮಾಣದಲ್ಲಿ ಈ ಕಾರ್ಯಕ್ರಮಕ್ಕೆ ಆಶೀರ್ವಾದ ಮಾಡುತ್ತಿದ್ದಾನೆ. ಅಪ್ಪು ಅನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕರ್ನಾಟಕವೇ ಇಂದು ಹೆಮ್ಮೆ ಪಡುವಂಥ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪುನೀತ್ ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ನೀಡುತ್ತಿರುವುದು ನನ್ನ ಪುಣ್ಯ ಭಾಗ್ಯ, ಸರ್ಕಾರದ ಪುಣ್ಯ ಭಾಗ್ಯ'' ಎಂದರು.

ಅಪ್ಪು ನಮ್ಮ ಜೊತೆಗೇ ಇದ್ದಾನೆ: ಬಸವರಾಜ ಬೊಮ್ಮಾಯಿ
ಅಪ್ಪು ನಮ್ಮ ಜೊತೆಗಿದ್ದಾನೆ, ಪ್ರತಿ ಗ್ರಾಮದಲ್ಲಿ ಇದ್ದಾನೆ, ಕನ್ನಡದ ಕಣಕಣದಲ್ಲಿ ಇದ್ದಾನೆ, ಆತ ನಿಜವಾದ ರತ್ನ, ನಿಜವಾದ ಧ್ರುವ ತಾರೆ, ಆಕಾಶದಿಂದ ಅಪ್ಪು ಇದೆಲ್ಲವನ್ನೂ ನೋಡುತ್ತಿದ್ದಾನೆ, ನಮಗೆ ಶುಭ ಕೋರಿದ್ದಾನೆ ಎಂದ ಸಿಎಂ ಬಸವರಾಜ ಬೊಮ್ಮಾಯಿ, ಕಾರ್ಯಕ್ರಮಕ್ಕೆ ಆಗಮಿಸಿದ ರಜನೀಕಾಂತ್, ಜೂ ಎನ್ಟಿಆರ್, ಸುಧಾ ಮೂರ್ತಿ ಹಾಗೂ ಇಡೀ ದೊಡ್ಮನೆ ಕುಟುಂಬಕ್ಕೆ ಧನ್ಯವಾದ ಹೇಳಿದರು.

ಭಾವಾವೇಷಕ್ಕೆ ಒಳಗಾದ ಸಿಎಂ
ಬಳಿಕ ತುಸು ಭಾವಾವೇಷಕ್ಕೆ ಒಳಗಾದ ಸಿಎಂ, ಪುನೀತ್, ಒಮ್ಮೆ ಕೆಳಗೆ ಬಂದು ನೋಡು ಬಾ ನಿನ್ನ ಅಭಿಮಾನಿಗಳು ಹೇಗೆ ಗಟ್ಟಿಯಾಗಿ ನಿಂತಿದ್ದಾರೆ. ಅಭಿಮಾನದ ಸಾಗರವೇ ಇಲ್ಲಿ ಹರಿದಿದೆ. ಇವರ ಪ್ರೀತಿ ವಿಶ್ವಾಸಕ್ಕೆ ಆದರೂ ನೀನು ಮತ್ತೆ ಹುಟ್ಟಿ ಬಾ, ಅಪ್ಪು ಹುಟ್ಟಿ ಬಾ, ಹುಟ್ಟಿ ಬಾ, ಪುನೀತ್ ಹುಟ್ಟಿ ಬಾ, ಡಾ ಪುನೀತ್ ಹುಟ್ಟಿ ಬಾ ಎಂದರು.

ಚುಟುಕಾಗಿ ಮಾತನಾಡಿದ ಶಿವರಾಜ್ ಕುಮಾರ್
ಚುಟುಕಾಗಿ ಮಾತನಾಡಿದ ನಟ ಶಿವರಾಜ್ ಕುಮಾರ್, ಮೂವತ್ತು ವರ್ಷಗಳ ಹಿಂದೆ ಇದೇ ಜಾಗದಲ್ಲಿ ತಂದೆಯವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಲಾಗಿತ್ತು. ಈಗ ಮೂವತ್ತು ವರ್ಷಗಳ ಬಳಿಕ ಪುನೀತ್ ರಾಜ್ಕುಮಾರ್ ಅವರಿಗೆ ನೀಡಲಾಗುತ್ತಿದೆ. ಇದಕ್ಕೆ ನಾನು ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಕಾರ್ಯಕ್ರಮಕ್ಕೆ ಆಗಮಿಸಿದ ರಜನೀಕಾಂತ್ ಹಾಗೂ ಜೂ ಎನ್ಟಿಆರ್ಗೆ ಸಹ ಧನ್ಯವಾದ. ನಿಮ್ಮ ಪ್ರೀತಿ ಹೀಗೆ ಮುಂದುವರೆಯಲಿ, ನಿಮ್ಮ ಪ್ರೀತಿಗೆ ಧನ್ಯವಾದ ಎಂದು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು.


Click it and Unblock the Notifications











