ಯಕ್ಷಗಾನ ಪ್ರದರ್ಶನಕ್ಕೆ ಕಾಲಮಿತಿ ಖಂಡಿಸಿ ಬೃಹತ್ ಪಾದಯಾತ್ರೆ
ಇತ್ತಿಚೇಗಷ್ಟೆ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆ ಸಂಬಂಧಿಸಿ ಗದ್ದಲ ಭುಗಿಲೆದ್ದು ಸರ್ಕಾರ ಧ್ವನಿವರ್ಧಕ ಬಳಕೆಗೆ ಮಾರ್ಗಸೂಚಿ ಹೊರಡಿಸಿರುವುದು ಎಲ್ಲರಿಗೂ ಗೊತ್ತೆ ಇದೆ. ಇದೀಗ ಈ ಆದೇಶವನ್ನು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳಗಳಿಗೆ ಅನ್ವಯಿಸಲು ಹೊರಟಿರುವುದು ವಿವಾದಕ್ಕೆ ಕಾರಣವಾಗಿದೆ. ರಾತ್ರಿಯಿಂದ ಬೆಳಗ್ಗಿನವರೆಗೆ ನಡೆಯುತ್ತಿದ್ದ ದೇವರ ಸೇವೆಯನ್ನು ರಾತ್ರಿ ಹತ್ತರ ಒಳಗೆ ಮುಗಿಸುವ ಆಡಳಿತ ಮಂಡಳಿಯ ನಿರ್ಧಾರಕ್ಕೆ ದೇವಿ ಭಕ್ತರಿಂದ ವಿರೋಧ ವ್ಯಕ್ತವಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆರು ಯಕ್ಷಗಾನ ಮೇಳಗಳಿಂದ ಯಕ್ಷಗಾನ ಪ್ರದರ್ಶನ ನಡೆಯುತ್ತೆ. ಕಷ್ಟ ಕಾರ್ಪಣ್ಯಗಳ ನಿವಾರಿಸಿದ ಸಲುವಾಗಿ ದೇವಿಗೆ ಹರಕೆಯಾಗಿ ಈ ಯಕ್ಷಗಾನ ಪ್ರದರ್ಶನವನ್ನು ಭಕ್ತರು ದೇವಸ್ಥಾನ ಅಥವಾ ತಮ್ಮ ಪರಿಸರದಲ್ಲಿ ಹಮ್ಮಿಕೊಳ್ಳುತ್ತಾರೆ. ರಾತ್ರಿ ಆರಂಭವಾಗುವ ಯಕ್ಷಗಾನ ಸೇವೆ ಬೆಳಗ್ಗಿನವರೆಗೂ ನಡೆಯುತಿತ್ತು. ಆದ್ರೆ ಅಜಾನ್ ವಿವಾದ ಶುರುವಾದ ಬಳಿಕ ಸರ್ಕಾರ ರಾತ್ರಿ 10:30 ರ ನಂತರ 50 ಡೆಸಿಬಲ್ಗಿಂತ ಹೆಚ್ಚಿನ ಧ್ವನಿವರ್ಧಕ ಬಳಸದಂತೆ ಆದೇಶ ಹೊರಡಿಸಿತ್ತು. ಈ ಆದೇಶದನ್ವಯ ರಾತ್ರಿಯಿಡಿ ನಡೆಯುತ್ತಿದ್ದ ಯಕ್ಷಗಾನವನ್ನು ಸಂಜೆ ಐದು ಗಂಟೆಗೆ ಆರಂಭಿಸಿ ರಾತ್ರಿ 10ರ ಒಳಗೆ ಮುಗಿಸುವುದಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ. ದೇವಿಯ ಮುಂದೆ ಕಾಲಮಿತಿ ಯಕ್ಷಗಾನ ನಡೆಸುವ ಬಗ್ಗೆ ಹೂಪ್ರಶ್ನೆ ಇಟ್ಟಾಗ ದೇವಿಯು ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿದೆ ಅನ್ನೋದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಹರಿನಾರಾಯಣ ಅಸ್ರಣ್ಣ ಅವರ ವಾದ.

ಯಕ್ಷಸೇವಾ ಸಮಿತಿ ಖಂಡನೆ
ಆಡಳಿತ ಮಂಡಳಿಯ ಈ ನಿರ್ಧಾರವನ್ನು ಕಟೀಲು ಯಕ್ಷಸೇವಾ ಸಮನ್ವಯ ಸಮಿತಿ ಸೇರಿದಂತೆ ಯಕ್ಷಗಾನ ಸೇವೆ ನಡೆಸುವ ಕೆಲ ಭಕ್ತರು ಖಂಡಿಸಿದ್ದಾರೆ. ಕಟೀಲು ತಾಯಿ ರಾತ್ರಿಯ ಪೂಜೆಯ ನಂತರ ಕಟೀಲು ಮೇಳದ ಯಕ್ಷಗಾನ ವೀಕ್ಷಿಸಲು ತೆರಳುತ್ತಾಳೆ ಎಂಬುದು ಸಾರ್ವತ್ರಿಕ ನಂಬಿಕೆ. ಹೀಗಾಗಿ ಕಾಲಮಿತಿ ಯಕ್ಷಗಾನ ನಿರ್ಧಾರದಿಂದ ಮೂಲ ಆಶಯ ಸೊರಗಿ ಜನರ ಧಾರ್ಮಿಕ ನಂಬಿಕೆಗೆ ಘಾಸಿಯಾಗಿದೆ ಶ್ರೀ ಕಟೀಲು ಯಕ್ಷಸೇವಾ ಸಮನ್ವಯ ಸಮಿತಿ ಮುಖಂಡರಾದ ಸುಧಾಕರ್ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ
ಈ ನಿರ್ಧಾರವನ್ನು ಖಂಡಿಸಿ ಇದೇ ತಿಂಗಳ 6ನೇ ತಾರೀಖಿನಂದು ನಗರ ಹೊರವಲಯದ ಬಜಪೆಯಿಂದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಾಲಾಗಿದೆ. ದೇವಿಯ ಮುಂದೆ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿ ಈ ನಿರ್ಧಾರವನ್ನು ವಾಪಾಸು ತೆಗೆದುಕೊಳ್ಳುವಂತೆ ಸರ್ಕಾರವನ್ನು ಸಹ ಒತ್ತಾಯ ಮಾಡಲಿದ್ದಾರೆ.

20 ವರ್ಷಕ್ಕೆ ಎಲ್ಲ ಮೇಳಗಳೂ ಬುಕ್!
ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶವತಾರ ಯಕ್ಷಗಾನ ಮಂಡಳಿ ಆರು ಮೇಳಗಳನ್ನು ಹೊಂದಿದ್ದು ಮುಂದಿನ 20 ವರ್ಷಗಳ ಕಾಲ ಎಲ್ಲಾ ಮೇಳಗಳು ಮುಂಗಡ ಬುಕ್ ಆಗಿದೆ. ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಸೇವೆಯ ಯಕ್ಷಗಾನಕ್ಕೆ 65 ಸಾವಿರ ರೂಪಾಯಿ ದರವಾಗಿದ್ದು, ಪ್ರಸಂಗ ಅನುಸಾರವಾಗಿ ದರವಿದೆ. ವಾರ್ಷಿಕ ಕೋಟ್ಯಂತರ ರೂಪಾಯಿ ಆದಾಯ ಯಕ್ಷಗಾನದಿಂದ ಹರಿದು ಬರುತ್ತದೆ. ಕಟೀಲು ಮೇಳದ ಕಲಾವಿದರಿಂದ ಕಾಲಮಿತಿಗೆ ಒಪ್ಪಿಗೆ ಸಿಕ್ಕಿದ್ದು, ಈ ಬಗ್ಗೆ ಮೇಳದ ಕಲಾವಿದ ತಾರನಾಥ ವರ್ಕಾಡಿ ಮೇಳದ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಕಾಲಮಿತಿಯಿಂದ ಕಲಾವಿದರ ಆರೋಗ್ಯವೂ ಸುಧಾರಣೆಯಾಗುತ್ತದೆ. ಬೆಳಗ್ಗೆ ಬೇರೆ ಕೆಲಸಕ್ಕೆ ಹೋಗಿ ಸಂಜೆ ಯಕ್ಷಗಾನ ಸೇವೆ ಮಾಡುವವರಿಗೂ ಉಪಕಾರ ಆಗುತ್ತದೆ. ದೇವಸ್ಥಾನದ ಆಡಳಿತ ಮಂಡಳಿ ಕಾಲಮಿತಿ ನಿರ್ಧಾರದಿಂದ ಹಿಂದೆ ಸರಿಯೋದು ಬೇಡ ಅನ್ನೋದು ಕಟೀಲು ಮೇಳದ ಆಡಳಿತ ಮಂಡಳಿಗೆ ಕಟೀಲು ಯಕ್ಷಗಾನ ಕಲಾವಿದ ತಾರನಾಥ ವರ್ಕಾಡಿ ಪತ್ರದಲ್ಲಿ ಉಲ್ಲೇಖವಾಗಿದೆ.

ಎರಡು ಶತಮಾನಗಳ ಇತಿಹಾಸವಿದೆ
ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಗೆ ಸುಮಾರು ಎರಡು ಶತಮಾನಗಳ ಇತಿಹಾಸವಿದ್ದು ಒಟ್ಟು ಆರು ಮೇಳಗಳು ಇದೆ. ಈ ಬಾರಿಯ ತಿರುಗಾಟ ಕೆಲ ದಿನಗಳಲ್ಲಿ ಆರಂಭವಾಗಲಿದ್ದು ಭಕ್ತರ ಅಭಿಪ್ರಾಯಕ್ಕೆ ಆಡಳಿತ ಮಂಡಳಿ ಮನ್ನಣೆ ನೀಡುತ್ತಾ ಎಂದು ಕಾದುನೋಡಬೇಕಿದೆ..


Click it and Unblock the Notifications











