ನಟಿ ವಿಜಯಲಕ್ಷ್ಮಿಗೆ ಸಹಾಯ ಮಾಡಲು ಮುಂದಾದ ಫಿಲ್ಮ್ ಚೇಂಬರ್
ಕನ್ನಡ ಚಿತ್ರರಂಗದಲ್ಲಿ ಒಂದ್ಕಾಲದಲ್ಲಿ ರಾಣಿಯಂತೆ ಮೆರೆದ ನಟಿ ವಿಜಯಲಕ್ಷ್ಮಿ ಇದೀಗ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಅಸ್ವಸ್ಥರಾಗಿದ್ದ ನಟಿ ವಿಜಯಲಕ್ಷ್ಮಿ ಕಳೆದ ಗುರುವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಆದರು.
ಮೊದಲೇ ಅವಕಾಶಗಳು ಇಲ್ಲದೇ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ವಿಜಯಲಕ್ಷ್ಮಿ ಕುಟುಂಬ ಚಿತ್ರರಂಗದ ನೆರವು ಕೋರಿತ್ತು. ವಿಜಯಲಕ್ಷ್ಮಿ ಸಹೋದರಿ ಉಷಾದೇವಿ ಕೋರಿಕೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸ್ಪಂದಿಸಿದೆ.
ಫಿಲ್ಮ್ ಚೇಂಬರ್ ಕಡೆಯಿಂದ ನಟಿ ವಿಜಯಲಕ್ಷ್ಮಿ ರವರಿಗೆ ಆರ್ಥಿಕ ನೆರವು ನೀಡುವ ಬಗ್ಗೆ ಗೌರವ ಕಾರ್ಯದರ್ಶಿ ಭಾ.ಮಾ.ಹರೀಶ್ ಭರವಸೆ ನೀಡಿದ್ದಾರೆ. ಇದಲ್ಲದೇ ವೈಯಕ್ತಿಕವಾಗಿಯೂ ಹಣಕಾಸು ಸಹಾಯ ಮಾಡಲು ಸಹೋದರರಾದ ಭಾ.ಮಾ.ಹರೀಶ್ ಮತ್ತು ಗಿರೀಶ್ ಮುಂದಾಗಿದ್ದಾರೆ.

ಹೈ ಬಿಪಿ ಮತ್ತು ತೀವ್ರ ಸುಸ್ತಾದ ಕಾರಣ ವಿಜಯಲಕ್ಷ್ಮಿ ರವರನ್ನು ಕಳೆದ ಗುರುವಾರ ಮಲ್ಯ ಆಸ್ಪತ್ರೆಗೆ ಸೇರಿಸಲಾಗಿತ್ತು. ''ಇಷ್ಟು ದಿನ ತಾಯಿಗೆ ಹುಷಾರಿರಲಿಲ್ಲ. ಅವರಿಗೆ ಚಿಕಿತ್ಸೆ ಕೊಡಿಸುತ್ತಿದ್ವಿ. ಈಗ ವಿಜಯಲಕ್ಷ್ಮಿ ಕೂಡ ಆಸ್ಪತ್ರೆ ಸೇರಿದ್ದಾಳೆ. ಚಿಕಿತ್ಸೆ ಕೊಡಿಸಲು ದುಡ್ಡು ಇಲ್ಲ. ಚಿತ್ರರಂಗದವರ ಸಹಾಯ ಬೇಕಿದೆ'' ಎಂದು ಸಹೋದರಿ ಉಷಾ ಕಣ್ಣೀರಿಟ್ಟಿದ್ದರು.
ಇದನ್ನ ನೋಡಿ ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಭಾ.ಮಾ.ಹರೀಶ್, ಗಿರೀಶ್ ಸೇರಿದಂತೆ ಹಲವರು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ವಿಜಯಲಕ್ಷ್ಮಿ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗೆ ನೆರವು ನೀಡುವ ಬಗ್ಗೆ ಆಶ್ವಾಸನೆ ಕೊಟ್ಟಿದ್ದಾರೆ.


Click it and Unblock the Notifications











