ಯಶ್ ಬಗ್ಗೆ ಪ್ರಶಾಂತ್ ನೀಲ್ ಸರ್ಪ್ರೈಸ್ ವಾಯ್ಸ್ ಮೆಸೇಜ್: ರಾಕಿಭಾಯ್ ಬಗ್ಗೆ ನೀಲ್ ಹೇಳಿದ್ದೇನು?
ನಟ ಯಶ್ ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್. 'ಕೆಜಿಎಫ್' ಸಿನಿಮಾದಿಂದಾಗಿ ದೊಡ್ಡ ಎತ್ತರಕ್ಕೆ ಬೆಳೆದು ನಿಂತಿದ್ದಾರೆ ರಾಕಿಂಗ್ ಸ್ಟಾರ್.
ಕಳೆದ ಆರು ವರ್ಷಗಳಲ್ಲಿ ಯಶ್ ನಟಿಸಿರುವುದು ಕೇವಲ ಎರಡೇ ಸಿನಿಮಾದಲ್ಲಿ ಆದರೆ ಅವರ ಸ್ಟಾರ್ಡಂ ಕಡಿಮೆಯಾಗಿಲ್ಲ ಬದಲಿಗೆ ಹೆಚ್ಚುತ್ತಲೇ ಸಾಗಿದೆ. 'ಕೆಜಿಎಫ್ 2' ಸಿನಿಮಾ ಭಾರಿ ದೊಡ್ಡ ಹಿಟ್ ಆದ ಬಳಿಕವಂತೂ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಬಾಲಿವುಡ್ ಮಾಧ್ಯಮಗಳು ಸಹ ಯಶ್ರ ಒಂದು ಸಂದರ್ಶನಕ್ಕಾಗಿ ಕಾದು ಕೂತಿವೆ.
ಬಾಲಿವುಡ್ನ ಜನಪ್ರಿಯ ಸಿನಿಮಾ ವಿಮರ್ಶಕಿ, ವಿಶ್ಲೇಷಕಿ ಅನುಪಮಾ ಚೋಪ್ರಾ ಫಿಲ್ಮಿ ಕಂಪ್ಯಾನಿಯನ್ ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಜನಪ್ರಿಯ ಈ ಚಾನೆಲ್ನ ವಾರ್ಷಿಕೋತ್ಸವದ ಪ್ರಯುಕ್ತ ಯಶ್ ಅವರ ವಿಶೇಷ ಸಂದರ್ಶನವನ್ನು ಮಾಡಿದ್ದಾರೆ. ಈ ವಿಶಿಷ್ಟ, ಆಸಕ್ತಿಕರ ಕಾರ್ಯಕ್ರಮದಲ್ಲಿ ಯಶ್ಗಾಗಿ ನಿರ್ದೇಶಕ ಪ್ರಶಾಂತ್ ನೀಲ್ ಕಳಿಸಿದ್ದ ವಿಶೇಷ ಆಡಿಯೋ ಕ್ಲಿಪ್ ಗಮನ ಸೆಳೆದಿದೆ.

ಯಶ್ ಸುಮ್ಮನೆ ಕೂರುವವರಲ್ಲ: ನೀಲ್
''ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್, ಆದರೆ ಅವರು ಬದಲಾಗಿಲ್ಲ. ಈಗಲೂ ಸಹ ಅದೇ ವಿನಯತೆಯೇ ಅವರಲ್ಲಿ ಮುಂದಿವರೆದಿದೆ. ಮುಂದೆಯೂ ಅವರು ಹಾಗೆಯೇ ಇರಲಿದ್ದಾರೆ. ಅದೇ ಅವರ ದೊಡ್ಡತನ'' ಎಂದಿದ್ದಾರೆ. ಮುಂದುವರೆದು, 'ಯಶ್ ಸುಮ್ಮನೆ ಕೂರುವ ವ್ಯಕ್ತಿಯೇ ಅಲ್ಲ. ಅವರಿಗೆ ಬಹಳ ದೊಡ್ಡ-ದೊಡ್ಡ ಕನಸುಗಳಿವೆ. ಅವರು ಕರ್ನಾಟಕ ಸಿನಿಮಾಕ್ಕೆ ಹಾಗೂ ಭಾರತೀಯ ಸಿನಿಮಾಕ್ಕೆ ದೊಡ್ಡ ಕೊಡುಗೆ ನೀಡುವ ಯೋಚನೆಯಲ್ಲಿದ್ದಾರೆ. ನನಗಂತೂ ಯಶ್ ಅವರ ಮೇಲೆ ಬಹಳ ದೊಡ್ಡ ಭರವಸೆ ಇದೆ'' ಎಂದಿದ್ದಾರೆ ಪ್ರಶಾಂತ್ ನೀಲ್.

''ಕೆಜಿಎಫ್' ಅನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ದಿದ್ದು ಯಶ್'
'ಕೆಜಿಎಫ್' ಜರ್ನಿ ಕುರಿತಾಗಿಯೂ ಮಾತನಾಡಿರುವ ನಟ ಯಶ್, ''ಕೆಜಿಎಫ್' ಸಿನಿಮಾವನ್ನು ಸಣ್ಣ ಕನ್ನಡ ಸಿನಿಮಾವಾಗಿ ಮಾಡಿ ಮುಗಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ ಯಶ್ಗೆ ಆ ಸಿನಿಮಾ ಮೇಲೆ ನಂಬಿಕೆ ಇತ್ತು. 'ಕೆಜಿಎಫ್' ಈಗಿರುವ ಸ್ಥಿತಿಗೆ ತೆಗೆದುಕೊಂಡು ಹೋಗುವ ಯೋಜನೆ ಯಶ್ ಅವರದ್ದೇ. 'ಕೆಜಿಎಫ್' ಅನ್ನು ದೊಡ್ಡದಾಗಿ ವಿಸ್ತರಿಸುವ ಕನಸು ಕಂಡರು, ಆ ಕನಸಿಗೆ ಅವರು ಬದ್ಧವಾಗಿದ್ದರು. ಅದನ್ನು ದಡಮುಟ್ಟಿಸಿದರು'' ಎಂದಿದ್ದಾರೆ ಪ್ರಶಾಂತ್ ನೀಲ್.

ದೊಡ್ಡ ಪ್ರಾಜೆಕ್ಟ್ಗೆ ಕೈ ಹಾಕಿರುವ ಯಶ್
ನಟ ಯಶ್ 'ಕೆಜಿಎಫ್ 2' ಸಿನಿಮಾದ ಬಳಿಕ ಬೇರಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಭವಿಷ್ಯದ ಪ್ರಾಜೆಕ್ಟ್ ಅನ್ನು ಭಾರಿ ದೊಡ್ಡದಾಗಿ ಮಾಡುವ ಯೋಜನೆಯಲ್ಲಿದ್ದಾರೆ ನಟ ಯಶ್. ಸೈನ್ಸ್ ಥ್ರಿಲ್ಲರ್ ಒಂದನ್ನು ನಿರ್ಮಿಸುವ ಯೋಜನೆ ಹಾಕಿಕೊಂಡು ಅದಕ್ಕಾಗಿ ದೇಶ, ವಿದೇಶದ ಹಲವು ತಂತ್ರಜ್ಞರನ್ನು ಯಶ್ ಭೇಟಿ ಮಾಡುತ್ತಿದ್ದಾರೆ. ತಮ್ಮ ಮುಂದಿನ ಸಿನಿಮಾಕ್ಕಾಗಿ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿರುವ ಯಶ್, ಭಾರಿ ದೊಡ್ಡ ಪ್ರಾಜೆಕ್ಟ್ ಅನ್ನೇ ಹೆಗಲ ಮೇಲೆ ಎತ್ತಿಕೊಳ್ಳಲು ಸಿದ್ಧವಾಗುತ್ತಿದ್ದಾರೆ.

ಬಹಳ ಬ್ಯುಸಿ ಪ್ರಶಾಂತ್ ನೀಲ್
ಇನ್ನು ನಿರ್ದೇಶಕ ಪ್ರಶಾಂತ್ ನೀಲ್ ಈಗ ಪ್ಯಾನ್ ಇಂಡಿಯಾ ನಿರ್ದೇಶಕರಾಗಿ ಬದಲಾಗಿದ್ದಾರೆ. ಪ್ರಭಾಸ್ ನಟನೆಯ 'ಸಲಾರ್' ಸಿನಿಮಾವನ್ನು ಪ್ರಶಾಂತ್ ನಿರ್ದೇಶನ ಮಾಡುತ್ತಿದ್ದಾರೆ. ಅದರ ಬಳಿಕ ಜೂ ಎನ್ಟಿಆರ್ ನಟನೆಯ ಹೊಸ ಸಿನಿಮಾವನ್ನು ನಿರ್ದೇಶನ ಮಾಡಲಾಗಿದ್ದಾರೆ. ಆ ಸಿನಿಮಾದ ಬಳಿಕ ರಾಮ್ ಚರಣ್ ತೇಜಗಾಗಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಅದರ ಬಳಿಕ ಮೈತ್ರಿ ಮೂವೀಸ್ ಜೊತೆಗೆ ಒಂದು ಸಿನಿಮಾಕ್ಕಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಅದರ ಬಳಿಕವಷ್ಟೆ ಕನ್ನಡದಲ್ಲಿ ಸಿನಿಮಾ ಮಾಡಲಿದ್ದಾರಂತೆ ಪ್ರಶಾಂತ್ ನೀಲ್. ಅದೂ ನಟ ಶ್ರೀಮುರಳಿಗಾಗಿ.


Click it and Unblock the Notifications











