ಬ್ಯಾನ್ ಮಾಡ್ತೇವೆ ಎಂದಿದ್ದ ಹೊಸಪೇಟೆಯಲ್ಲಿ ಹೇಗಿದೆ 'ಕ್ರಾಂತಿ' ಬುಕಿಂಗ್? ಸೋಲ್ಡ್ಔಟ್ ಆಯ್ತಾ, ಇಲ್ವಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಚಿತ್ರ ನಾಳೆ ( ಜನವರಿ 26 ) ಗಣರಾಜ್ಯೋತ್ಸವದ ಪ್ರಯುಕ್ತ ತೆರೆಗೆ ಬರಲಿದ್ದು, ಅಭಿಮಾನಿಗಳಲ್ಲಿ ಹಾಗೂ ಸಿನಿ ರಸಿಕರಲ್ಲಿ ಚಿತ್ರ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಇನ್ನು 2021ರ ಮಾರ್ಚ್ ತಿಂಗಳ ಬಳಿಕ ಅಂದರೆ ಬರೋಬ್ಬರಿ 22 ತಿಂಗಳುಗಳ ಬಳಿಕ ತೆರೆಗೆ ಬರುತ್ತಿರುವ ತಮ್ಮ ನೆಚ್ಚಿನ ನಟನ ಚಿತ್ರವನ್ನು ವೀಕ್ಷಿಸಲು ದರ್ಶನ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಇನ್ನು ಚಿತ್ರದ ಮುಂಗಡ ಬುಕಿಂಗ್ ಈಗಾಗಲೇ ಆರಂಭಗೊಂಡಿದ್ದು, ರಾಜ್ಯದ ಹಲವು ನಗರಗಳಲ್ಲಿ ಕ್ರಾಂತಿ ಅಡ್ವಾನ್ಸ್ ಬುಕಿಂಗ್ ಬಿರುಸಿನಿಂದ ಸಾಗಿದೆ. ಬೆಂಗಳೂರಿನಲ್ಲಿ ನಿರೀಕ್ಷೆಯಂತೆ ಉತ್ತಮ ಬುಕಿಂಗ್ ನಡೆಯುತ್ತಿದ್ದು, ಮೈಸೂರು, ತುಮಕೂರು, ಶಿವಮೊಗ್ಗ ಹಾಗೂ ಇತರೆ ನಗರಗಳಲ್ಲಿ ಬುಕಿಂಗ್ ನಿರೀಕ್ಷೆಗೂ ಮೀರಿ ಭರ್ಜರಿಯಾಗಿ ನಡೆಯುತ್ತಿದೆ. ಇನ್ನು ಗಡಿಜಿಲ್ಲೆಗಳಲ್ಲೂ ಕ್ರಾಂತಿ ಚಿತ್ರದ ಬುಕಿಂಗ್ ಚೆನ್ನಾಗಿಯೇ ಇದ್ದು, ಮೊದಲ ದಿನ ದರ್ಶನ್ ಸಿನಿ ಕೆರಿಯರ್ನ ದಾಖಲೆಯ ಕಲೆಕ್ಷನ್ ಆಗುವುದು ಖಚಿತ ಎಂದು ಸಿನಿ ರಸಿಕರು ಊಹಿಸಿದ್ದಾರೆ.
ಇನ್ನು ಕ್ರಾಂತಿ ಚಿತ್ರದ ವಿಷಯದ ಕುರಿತಾಗಿ ಬಿಡುಗಡೆಗೂ ಮುನ್ನವೇ ಸಾಕಷ್ಟು ಚರ್ಚೆಗಳಿಗೆ ಹಾಗೂ ವಿವಾದಗಳಿಗೆ ಕಾರಣವಾಗಿದ್ದ ಹೊಸಪೇಟೆಯಲ್ಲಿ ಚಿತ್ರದ ಬುಕಿಂಗ್ ಯಾವ ರೀತಿ ನಡೆಯಬಹುದು ಎಂಬ ಕುತೂಹಲ ಸಾಮಾನ್ಯವಾಗಿ ಇತ್ತು. ಹೌದು, ಹೊಸಪೇಟೆಯಲ್ಲಿ ನಡೆದ ಹಾಡು ಬಿಡುಗಡೆ ಕಾರ್ಯಕ್ರಮದ ವೇಳೆ ನಡೆದ ಘಟನೆ ಬಗ್ಗೆ ನಿಮಗೆ ಗೊತ್ತೇ ಇದೆ. ಅಷ್ಟು ದೊಡ್ಡಮಟ್ಟದ ವಿರೋಧ ಎದುರಿಸಿದ್ದ ಹಾಗೂ ವಿವಾದಕ್ಕೆ ಕಾರಣವಾಗಿದ್ದ ಊರಿನಲ್ಲಿ ಕ್ರಾಂತಿ ಚಿತ್ರ ಯಾವ ರೀತಿಯ ಓಪನಿಂಗ್ ಪಡೆದುಕೊಳ್ಳಬಹುದು ಎಂಬ ಪ್ರಶ್ನೆ ಸಾಮಾನ್ಯವಾಗಿ ಮೂಡಿತ್ತು. ಈ ಪ್ರಶ್ನೆಗೆ ಸದ್ಯ ಈಗ ಉತ್ತರ ಸಿಕ್ಕಿದೆ.

ಹೊಸಪೇಟೆಯಲ್ಲಿ ಸಿಂಗಲ್ ಥಿಯೇಟರ್ ರಿಲೀಸ್
ಕ್ರಾಂತಿ ಚಿತ್ರ ಹೊಸಪೇಟೆ ನಗರದ ಒಂದೇ ಒಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ನಗರದ ಮೀರಾಲಂ ಚಿತ್ರಮಂದಿರದಲ್ಲಿ ಕ್ರಾಂತಿ ಬಿಡುಗಡೆಯಾಗುತ್ತಿದ್ದು, ಮೊದಲ ದಿನ ಐದು ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಇನ್ನು ಈ ಪ್ರದರ್ಶನಗಳ ಅಡ್ವಾನ್ಸ್ ಬುಕಿಂಗ್ ಅನ್ನು ಕಳೆದ ಮೂರು ದಿನಗಳ ಹಿಂದೆಯೇ ತೆರೆಯಲಾಗಿದೆ. ಬುಕ್ ಮೈ ಶೋನಲ್ಲಿ ಬುಕಿಂಗ್ ನಡೆಯುತ್ತಿದ್ದು, ಚಿತ್ರ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿರುವಾಗ ಐದು ಪ್ರದರ್ಶನಗಳ ಪೈಕಿ ಯಾವ ಪ್ರದರ್ಶನವೂ ಸಹ ಸೋಲ್ಡ್ ಔಟ್ ಆಗಿಲ್ಲ. ಟಿಕೆಟ್ ಬುಕಿಂಗ್ ಸಹ ನಿಧಾನಗತಿಯಲ್ಲಿ ಸಾಗಿದ್ದು, ಒಟ್ಟಿನಲ್ಲಿ ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರ ನೀರಸ ಬುಕಿಂಗ್ ಪಡೆದುಕೊಂಡಿದೆ.

ಹೊಸಪೇಟೆಯಲ್ಲಿ ಹೊತ್ತಿಕೊಂಡಿತ್ತು ಬ್ಯಾನ್ ಬೆಂಕಿ!
ಇನ್ನು ಇದೇ ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರವನ್ನು ಬಿಡುಗಡೆ ಮಾಡಲು ಬಿಡದೇ ಬ್ಯಾನ್ ಮಾಡ್ತೇವೆ ಎಂಬ ಕೂಗು ಕೇಳಿಬಂದಿತ್ತು. ದರ್ಶನ್ ಅವರು ಸಂದರ್ಶನವೊಂದರಲ್ಲಿ ಪುನೀತ್ ರಾಜ್ಕುಮಾರ್ ಸಾವಿನ ನಂತರ ನೋಡಿದ ಅಭಿಮಾನಿಗಳ ಪ್ರೀತಿಯನ್ನು ನಾನು ಈಗಲೇ ನೋಡಿದ್ದೇನೆ ಎಂದು ಹೇಳಿದ್ದರ ವಿರುದ್ಧ ಕಿಡಿಕಾರಿದ್ದ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಕೆಂಡಕಾರಿದ್ದರು. ಅಪ್ಪು ಅಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿರುವ ಹೊಸಪೇಟೆಯಲ್ಲೂ ದರ್ಶನ್ ವಿರುದ್ಧ ಕಿಡಿಕಾರಿ ಕ್ರಾಂತಿ ಚಿತ್ರವನ್ನು ಬಿಡುಗಡೆಯಾಗಲು ಬಿಡುವುದಿಲ್ಲ ಎಂದಿದ್ದರು. ಇದಕ್ಕೆ ಪ್ರತಿಯಾಗಿ ಪ್ರತಿಕ್ರಿಯಿಸಿದ್ದ ಹೊಸಪೇಟೆ ದರ್ಶನ್ ಅಭಿಮಾನಿಗಳು ಹೊಸಪೇಟೆ ಯಾರ ಸ್ವತ್ತೂ ಅಲ್ಲ, ಕ್ರಾಂತಿ ಚಿತ್ರ ಎರಡು - ಮೂರು ಚಿತ್ರಗಳಲ್ಲಿ ಬಿಡುಗಡೆಯಾಗಿ ಸೋಲ್ಡ್ ಔಟ್ ಆಗುತ್ತೆ, ತಾಕತ್ತಿದ್ದರೆ ತಡೆಯಿರಿ ಎಂದು ಟಕ್ಕರ್ ನೀಡಿದ್ದರು.

ಬಳ್ಳಾರಿ ಬುಕಿಂಗ್ ಹೇಗಿದೆ?
ಬಳ್ಳಾರಿ ನಗರದಲ್ಲೂ ಸಹ ಕ್ರಾಂತಿ ಚಿತ್ರಕ್ಕೆ ಸಿಂಗಲ್ ಥಿಯೇಟರ್ ನೀಡಲಾಗಿದೆ. ನಗರದ ಗಂಗಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದ್ದು, ಬೆಳಗಿನ ಪ್ರದರ್ಶನ ಸೋಲ್ಡ್ ಔಟ್ ಆಗುವ ಹಂತದಲ್ಲಿದೆ, ಮಧ್ಯಾಹ್ನದ ಪ್ರದರ್ಶನದ ಬುಕಿಂಗ್ ಸಹ ಚೆನ್ನಾಗಿದೆ, ಇನ್ನುಳಿದಂತೆ ಸಂಜೆ ಹಾಗೂ ರಾತ್ರಿ ಪ್ರದರ್ಶನಗಳು ಸಾಮಾನ್ಯ ಬುಕಿಂಗ್ ಪಡೆದುಕೊಂಡಿವೆ. ಸಂಕ್ರಾಂತಿ ಪ್ರಯುಕ್ತ ಬಿಡುಗಡೆಯಾಗಿದ್ದ ತೆಲುಗು ಚಿತ್ರಗಳಿಗೆ ಈ ಹೊಸಪೇಟೆ ಹಾಗೂ ಬಳ್ಳಾರಿ ನಗರಗಳಲ್ಲಿ ಸಿಕ್ಕಿದ್ದಷ್ಟು ಅರ್ಧದಷ್ಟೂ ಪ್ರದರ್ಶನಗಳೂ ಸಹ ಕ್ರಾಂತಿ ಚಿತ್ರಕ್ಕೆ ಸಿಗದೇ ಇರುವುದು ನಿಜಕ್ಕೂ ಬೇಸರದ ಸಂಗತಿ.


Click it and Unblock the Notifications











