ಶ್ರೀಮುರಳಿ 'ಭರಾಟೆ' ಸಿನಿಮಾಗೆ ಮತ್ತೋರ್ವ ನಾಯಕಿ ಎಂಟ್ರಿ
ಸ್ಯಾಂಡಲ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಸಿನಿಮಾಗಳಲ್ಲಿ ಶ್ರೀಮುರಳಿ ಅಭಿನಯದ 'ಭರಾಟೆ' ಸಿನಿಮಾ ಕೂಡ ಒಂದು. ಮೇಕಿಂಗ್ ಹಂತದಲ್ಲಿ ಚಿತ್ರಾಭಿಮಾನಿಗಳ ಗಮನ ಸೆಳೆದಿರುವ 'ಭರಾಟೆ' ದಿನಕೊಂದು ವಿಷಯದ ಮೂಲಕ ಸುದ್ದಿಯಲ್ಲಿದೆ. ಇತ್ತೀಚಿಗಷ್ಟೆ ಚಿತ್ರದ ಹೈ ವೋಲ್ಟೇಜ್ ಫೈಟಿಂಗ್ ದೃಶ್ಯ ಸೆರೆಹಿಡಿಯುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು.
'ಭರಾಟೆ' ಚಿತ್ರದ ಟೈಟಲ್ ಹಾಡಿನಲ್ಲಿ ನಟಿ ರಚಿತಾ ರಾಮ್ ಹೆಜ್ಜೆ ಹಾಕುವ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅದ್ಧೂರಿ ಸೆಟ್ ನಿರ್ಮಾಣ ಮಾಡಿ ಚಿತ್ರದ ಮೋಸ್ಟ್ ಇಂಪಾರ್ಟೆಂಟ್ ಹಾಡನ್ನು ಸೆರೆಹಿಡಿದು ಸದ್ದು ಮಾಡಿತ್ತು ಸಿನಿಮಾ.
ಈಗ ಭರಾಟೆ ಚಿತ್ರಕ್ಕೆ ಮತ್ತೋರ್ವ ನಟಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಖ್ಯಾತಿಯ ನಟಿ ಕೃಷಿ ತಾಪಂಡ 'ಭರಾಟೆ' ಟೀಂ ಸೇರಿಕೊಂಡಿದ್ದಾರೆ. ಚಿತ್ರದಲ್ಲಿ ಕೃಷಿ ಒಂದು ಹಾಡಿನಲ್ಲಿ ಹೆಜ್ಜೆ ಹಾಕುವ ಜೊತೆಗೆ ಕೆಲವು ದೃಶ್ಯಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರಂತೆ. 'ಭರಾಟೆ' ಟೀಂ ಸೇರಿಕೊಂಡಿರುವ ಬಗ್ಗೆ ಕೃಷಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಕೃಷಿ ಹಸಿರು ಮತ್ತು ಪಿಂಕ್ ಬಣ್ಣದ ಕಾಸ್ಟೂಮ್ ಧರಿಸಿ, ಹಸಿರು ಗಾಜಿನ ಬಳೆ ಹಾಕಿ ಪಕ್ಕಾ ದೇಸಿ ಲುಕ್ ನಲ್ಲಿ ಮಿಂಚಿದ್ದಾರೆ. 'ಭರಾಟೆ' ಚಿತ್ರದಲ್ಲಿ ನಾಯಕಿಯಾಗಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ. ಇನ್ನು ರಚಿತಾ ರಾಮ್ ಮತ್ತು ಕೃಷಿ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ವಿಶೇಷ ಅಂದ್ರೆ ಚಿತ್ರದಲ್ಲಿ ರವಿಶಂಕರ್ ಮೂವರು ಸಹೋದರು ಸೇರಿದಂತೆ ಒಟ್ಟು 10 ಜನ ಖಳನಟರು ಅಬ್ಬರಿಸಿದ್ದಾರೆ.
ಅಂದ್ಹಾಗೆ 'ಭರಾಟೆ' ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಸುಪ್ರೀತ್ ನಿರ್ಮಾಣ ಚಿತ್ರಕ್ಕಿದೆ. ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸಧ್ಯದಲ್ಲೇ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ.


Click it and Unblock the Notifications











