ವೇಶ್ಯಾವಾಟಿಕೆ, ಕೊಲೆ ಯತ್ನ ಇತ್ಯಾದಿ, ನಟಿ ಅಭಿನಯ ನಿಜ ಮುಖ ಬಯಲು ಮಾಡಿದ ಅತ್ತಿಗೆ
'ಅನುಭವ' ಸೇರಿದಂತೆ ಹಲವಾರು ಕನ್ನಡ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿರುವ ಅಭಿನಯ ಅವರಿಗೆ ಎರಡು ವರ್ಷದ ಜೈಲು ಶಿಕ್ಷೆಯನ್ನು ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಅಭಿನಯ, ಅವರ ಕುಟುಂಬದವರು ಅವರ ಮನೆಯ ಸೊಸೆ ಲಕ್ಷ್ಮಿದೇವಿಗೆ ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಚಾರಣೆ ನಡೆಸಿ ಈ ತೀರ್ಪು ಪ್ರಕಟಿಸಿದೆ.
ಲಕ್ಷ್ಮಿದೇವಿಯವರು 2002 ರಲ್ಲಿ ಚಂದ್ರಾಲೇಔಟ್ನಲ್ಲಿ ತಮ್ಮ ಪತಿ ಶ್ರೀನಿವಾಸ್ (ಅಭಿನಯ ಅಣ್ಣ), ಅವರ ತಾಯಿ ಜಯಮ್ಮ, ಅಭಿನಯ, ಚೆಲುವರಾಜ್ ಎಂಬುವರು ಮೇಲೆ ದೂರು ದಾಖಲಿಸಿದ್ದರು. ಆಗಿನಿಂದಲೂ ಸತತವಾಗಿ ಇಪ್ಪತ್ತು ವರ್ಷಗಳ ಕಾಲ ಹೋರಾಟ ನಡೆಸಿ ಇದೀಗ ನ್ಯಾಯ ಧಕ್ಕಿಸಿಕೊಂಡಿದ್ದಾರೆ. ಐವರು ಆರೋಪಿಗಳಲ್ಲಿ ಇಬ್ಬರು ಈಗಾಗಲೇ ನಿಧನ ಹೊಂದಿದ್ದು, ಅಭಿನಯ ಸೇರಿದಂತೆ ಉಳಿದ ಮೂವರು ಆರೋಪಿಗಳಿಗೆ ಕಾರಾಗೃಹ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.
ಹೈಕೋರ್ಟ್ ತೀರ್ಪಿನ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿರುವ ಅಭಿನಯ ಅವರ ಅತ್ತಿಗೆ ಲಕ್ಷ್ಮಿದೇವಿ, ಅಭಿನಯ ಅವರ ಮೇಲೆ ಅವರ ಕುಟುಂಬದ ಮೇಲೆ ಹಲವು ಆರೋಪಗಳನ್ನು ಮಾಡಿದರು. ತಮ್ಮನ್ನು ಮೃಗಕ್ಕಿಂತಲೂ ಕಡೆಯಾಗಿ ನಡೆಸಿಕೊಂಡರು ಎಂದು ನೆನಪಿಸಿಕೊಂಡರು. ವಿಶೇಷವಾಗಿ ಅಭಿನಯ ತಮ್ಮ ಮೇಲೆ ಮಾಡಿದ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದರು.

ನನಗೆ ಹಾವಿನಿಂದ ಕಚ್ಚಿಸಿದರು: ಲಕ್ಷ್ಮಿದೇವಿ ಆರೋಪ
''ಒಬ್ಬ ಹೆಣ್ಣಿಗೆ ಯಾವೆಲ್ಲ ಕಷ್ಟಗಳನ್ನು ಕೊಡಬಹುದಿತ್ತೊ ಅದನ್ನೆಲ್ಲ ನನಗೆ ಕೊಟ್ಟಿದ್ದಾರೆ. ಹಾವಿನಿಂದ ಕಚ್ಚಿಸುವ ಯತ್ನವನ್ನೂ ಸಹ ಅವರು ಮಾಡಿದ್ದರು. ಅವರ ಮಗ ಸರಿಯಿರಲಿಲ್ಲ. ಮದುವೆ ಮಾಡಿದರೆ ಸರಿಹೋಗ್ತಾನೆ ಎಂದು ನನಗೆ ಮದುವೆ ಮಾಡಿಬಿಟ್ಟರು. ಅವನಿಗೆ ಆದಾಯ ಇರಲಿಲ್ಲ, ಹಾಗಾಗಿ ನಾನು ದುಡ್ಡು ತರುವಂತೆ ಪೀಡಿಸುತ್ತಿದ್ದರು. ನನ್ನನ್ನು ಇಂಥವನೊಟ್ಟಿಗೆ ಏಕೆ ಮದುವೆ ಮಾಡಿದಿರಿ ಎಂದು ಹಲವಾರು ಬಾರಿ ಪ್ರಶ್ನಿಸಿದ್ದೆ'' ಎಂದಿದ್ದಾರೆ ಲಕ್ಷ್ಮಿದೇವಿ.

ವೇಶ್ಯಾವಾಟಿಕೆಗೆ ತಳ್ಳಲು ಸಹ ಯತ್ನಿಸಿದರು: ಲಕ್ಷ್ಮಿದೇವಿ
''ನನ್ನ ಗಂಡ ಬಹಳ ಗುಡಿಯುತ್ತಿದ್ದ ಇಸ್ಪೀಟ್ ಆಡುತ್ತಿದ್ದ ಹಲವು ಕೆಟ್ಟ ಚಟ ಅವನಿಗೆ ಇತ್ತು. ನಮ್ಮ ಮನೆಯವರು ಬೇಡ ಎಂದರೂ ಇವರೇ ಒತ್ತಾಯಪೂರ್ವಕವಾಗಿ ಮದುವೆ ಮಾಡಿಕೊಂಡರು. ಮದುವೆ ಮಾಡಿಕೊಂಡಾಗ 300 ಗ್ರಾಂ ಚಿನ್ನ ಕೊಟ್ಟಿದ್ದೆವು, ಹಣ ಕೊಟ್ಟಿದ್ದೆವು. ಅಷ್ಟೆಲ್ಲ ಕೊಟ್ಟಿದ್ದರೂ ಸಹ ಮತ್ತೆ ಹಣ ತಂದುಕೊಡುವಂತೆ ಬೇಡಿಕೆ ಇಟ್ಟರು. ನನ್ನನ್ನು ಕೊಲೆ ಮಾಡಿಸಲು ಯತ್ನಿಸಿದ್ದರು. ಹಾವಿನಿಂದ ನನಗೆ ಕಚ್ಚಿಸಿದ್ದರು. ನನಗೆ ದಿನವೂ ಒಂದೊಂದೇ ರೊಟ್ಟಿ ನೀಡುತ್ತಿದ್ದರು. ನನ್ನನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ್ದರು'' ಎಂದು ಅಭಿನಯ ಕುಟುಂಬದ ಕರಾಳ ಮುಖ ತೆರೆದಿಟ್ಟಿದ್ದಾರೆ ಲಕ್ಷ್ಮಿದೇವಿ.

ಕೋರ್ಟ್ ಆದೇಶವನ್ನೂ ಧಿಕ್ಕರಿಸಿದರು: ಲಕ್ಷ್ಮಿದೇವಿ
''ಮಗುವನ್ನು ನೋಡಲು ಸಹ ಅವರ ಕಡೆಯವರೊಬ್ಬರೂ ಬರಲಿಲ್ಲ. 2002 ರಲ್ಲಿ ದೂರು ಕೊಟ್ಟ ನಂತರ ರಾಜಿ ಮಾಡಿಕೊಳ್ಳುತ್ತೇವೆ 20 ಲಕ್ಷ ಕೊಡ್ತೀವಿ, 10 ಲಕ್ಷ ಕೊಡ್ತೀವಿ ಎಂದರು ಆದರೆ ಯಾವುದೂ ನಡೆಯಲಿಲ್ಲ. ಕೋರ್ಟ್ ಆದೇಶದ ಪ್ರಕಾರ ಪ್ರತಿ ತಿಂಗಳು ಎರಡು ಸಾವಿರ ಹಣವನ್ನು ಅವರು ನೀಡಬೇಕಿತ್ತು. ಅದನ್ನೂ ಸಹ ಸುಮಾರು 1.50 ಲಕ್ಷ ರುಪಾಯಿ ಬಾಕಿ ಉಳಿಸಿಕೊಂಡಿದ್ದಾರೆ'' ಎಂದು ಕಣ್ಣೀರು ಹಾಕಿದ್ದಾರೆ ಲಕ್ಷ್ಮಿ.

ಯಾರಿಗೆ ಎಷ್ಟು ವರ್ಷ ಶಿಕ್ಷೆ
ಮೊದಲು ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರೋಪಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು. ಬಳಿಕ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಕೆಯಾಗಿ ವಿಚಾರಣೆ ನಡೆದು ಎಲ್ಲ ಆರೋಪಿಗಳು ಖುಲಾಸೆಗೊಂಡಿದ್ದರು. ಬಳಿಕ ಲಕ್ಷ್ಮಿದೇವಿಯು ಜಿಲ್ಲಾ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ ಕಾರಣ ವಿಚಾರಣೆ ನಡೆದು ಇದೀಗ ತೀರ್ಪು ಹೊರಬಿದ್ದಿದೆ. ಪ್ರಕರಣದ ಪ್ರಮುಖ ಆರೋಪಿ ಶ್ರೀನಿವಾಸ್ ಹಾಗೂ ಎರಡನೇ ಆರೋಪಿ ರಾಮಕೃಷ್ಣ ನಿಧನ ಹೊಂದಿರುವ ಕಾರಣ ಅವರನ್ನು ಬಿಟ್ಟು ಉಳಿದ ಮೂರನೇ ಆರೋಪಿಯಾದ ಜಯಮ್ಮ (ಅಭಿನಯ ಅವರ ತಾಯಿ)ಗೆ ಐದು ವರ್ಷ ಜೈಲು ಸಜೆ, ಆರೋಪಿ ನಂಬರ್ 4 ಚೆಲುವರಾಜ್ಗೆ ಎರಡು ವರ್ಷ ಜೈಲು ಶಿಕ್ಷೆ, ಆರೋಪಿ ನಂಬರ್ 5 ಅಭಿನಯಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್ ತೀರ್ಪು ನೀಡಿದೆ.


Click it and Unblock the Notifications











