ಕಾಶಿನಾಥ್ ಗೆ ಮಾಧುರಿ ದೀಕ್ಷಿತ್ ಕೊಟ್ಟ ಹೊಸ ಅನುಭವ
ರಿಯಲ್ ಸ್ಟಾರ್ ಉಪೇಂದ್ರ ಗುರುಗಳಾದ ಕಾಶಿನಾಥ್ ನಿರ್ದೇಶಿಸಿ, ನಟಿಸಿದ್ದ ಹೊಸ ತರಹದ ಸಿನಿಮಾ 'ಅನುಭ' (1984). ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿತು. ಕೇವಲ ರು.3 ಲಕ್ಷ ಬಂಡವಾಳದಲ್ಲಿ ನಿರ್ಮಿಸಿದ ಚಿತ್ರ ಬಳಿಕ ದುಪ್ಪಟ್ಟು ಹಣ ಮಾಡಿತು.
ಈಗ ಇದೇ ಅನುಭವ ಚಿತ್ರವನ್ನು ಕಾಶಿನಾಥ್ ಅವರು ಮತ್ತೆ ತೆರೆಗೆ ತರುತ್ತಿದ್ದಾರೆ. ಈ ಹಿಂದೆ ಎರಡು ಬಾರಿ ಅನುಭವ ರಿಲೀಸ್ ಆಗಿದೆ. ಈಗ ಮೂರನೇ ಬಾರಿ ಪ್ರೇಕ್ಷಕರ ಮುಂದೆ ಬರುತ್ತಿದೆ. ಈ ಬಾರಿಯ ವಿಶೇಷತೆ ಎಂದರೆ 35 ಎಂಎಂನಿಂದ ಸಿನಿಮಾಸ್ಕೋಪ್ ನಲ್ಲಿ ಮೂಡಿಬಂದಿರುವುದು. ಜೊತೆಗೆ 5.1 ಡಿಜಿಟಲ್ ಸೌಂಡ್ 'ಅನುಭವ'ವೂ ಇರುತ್ತದೆ.
ಇದೇ ಚಿತ್ರದನ್ನು ಕಾಶಿನಾಥ್ ಅವರು ಹಿಂದಿಯಲ್ಲೂ ನಿರ್ದೇಶಿಸಿದ್ದರು. ಅಲ್ಲೂ ಅನುಭವ ಎಂದೇ ಹೆಸರಿಡಲಾಗಿತ್ತು. ಕಾಶಿನಾಥ್ ಪಾತ್ರವನ್ನು ಶೇಖರ್ ಸುಮನ್ ಪೋಷಿಸಿದರೆ ಅಭಿನಯಾ ಪಾತ್ರವನ್ನು ಪದ್ಮಿನಿ ಕೊಲ್ಹಾಪುರಿ ಮಾಡಿದ್ದರು. ಇದಕ್ಕೂ ಮುನ್ನ ಅಭಿನಯಾ ಪಾತ್ರಕ್ಕಾಗಿ ಮಾಧುರಿ ದೀಕ್ಷಿತ್ ಅವರನ್ನು ಸಂಪರ್ಕಿಸಲಾಗಿತ್ತು. [ಕಾಶಿನಾಥ್ ಟ್ವಿಟ್ಟರ್ ಅನುಭವ]

ಬೆಂಗಳೂರಿಗೂ ಬಂದು ಹೋಗಿದ್ದ ಮಾಧುರಿ
ಮಾಧುರಿ ದೀಕ್ಷಿತ್ ಸಹ ಚಿತ್ರದಲ್ಲಿ ಅಭಿನಯಿಸುವುದಾಗಿ ಮಾತುಕೊಟ್ಟಿದ್ದರು. ಈ ಸಂಬಂಧ ಅವರು ಬೆಂಗಳೂರಿಗೂ ಬಂದು ಹೋಗಿದ್ದರು. ಕಾಶಿನಾಥ್ ಅವರಿಗೂ ಆಲ್ ದಿ ಬೆಸ್ಟ್ ಹೇಳಿದ್ದರು. ಆದರೆ ಅಷ್ಟರಲ್ಲಿ ಸುಭಾಷ್ ಘಾಯ್ ಅವರ ಚಿತ್ರದಲ್ಲಿ ಆಫರ್ ಬಂದಿತ್ತು ಮಾಧುರಿಗೆ.

ಮಾಧುರಿ ದೀಕ್ಷಿತ್ ಹೊಸ ಅನುಭವ
ದೊಡ್ಡ ಬ್ಯಾನರ್ ಚಿತ್ರದ ಆಫರ್ ಬಂದ ಮೇಲೆ ಚಿಕ್ಕ ಬಜೆಟ್ ಸಿನಿಮಾ ಮಾಡುವ ಆಯ್ಕೆ ಮಾಧುರಿ ದೀಕ್ಷಿತ್ ಮುಂದಿರಲಿಲ್ಲ. ಅವರು ಕಾಶಿನಾಥ್ ಗೆ ಕೈ ಎತ್ತಿ ಸುಭಾಷ್ ಘಾಯ್ ಗೆ ಜೈ ಎಂದರು. ಕಾಶಿನಾಥ್ ಅವರಿಗೆ ಅನುಭವ ಜೊತೆಗೆ ಹೊಸ 'ಅನುಭವ' ಸಿಕ್ಕಂತಾಯಿತು.

ಜೂಹಿ ಚಾವ್ಲಾ ಅವರೂ ಕೈಎತ್ತಿದರು
ಉಮಾಶ್ರೀ ಅವರ ಪಾತ್ರಕ್ಕೆ ಮಾಜಿ ಮಿಸ್ ಇಂಡಿಯಾ ಜೂಹಿ ಚಾವ್ಲಾ ಅವರನ್ನು ಆಯ್ಕೆ ಮಾಡಲಾಗಿತ್ತು. ಬಳಿಕ ಸಿನಿಮಾದ ಕಥೆ ಹಾಗೂ ತಮ್ಮ ಪಾತ್ರದ ಬಗ್ಗೆ ತಿಳಿದುಕೊಂಡು ಅವರೂ ಕೈ ಎತ್ತಿದರು. ಕಡೆಗೆ ಉಮಾಶ್ರೀ ಪಾತ್ರ ರಿಚಾ ಶರ್ಮಾ ಪಾಲಾಯಿತು. ಇದಕ್ಕೂ ಮುನ್ನ ರೂಪಿಣಿಯನ್ನೂ ಸಂಪರ್ಕಿಸಲಾಗಿತ್ತು. ಕಾರಣಾಂತರಗಳಿಂದ ಅವರೂ ಅಭಿನಯಿಸಲು ಸಾಧ್ಯವಾಗಲಿಲ್ಲ.

ಡಿಜಿಟಲ್ ರೂಪದಲ್ಲಿ ಹೊಸ ಅನುಭವ
ಈಗ ಅನುಭವ ಚಿತ್ರವನ್ನು ಡಿಜಿಟಲ್ ರೂಪದಲ್ಲಿ ತರಲಾಗುತ್ತಿದೆ. ಈ ಸಂಬಂಧ ಇತ್ತೀಚೆ ಪ್ರೆಸ್ ಮೀಟ್ ನಡೆಯಿತು. ಈ ತಲೆಮಾರಿನ ಯುವಕರಿಗೆ ಈ ಚಿತ್ರ ಖಂಡಿತ ಹೊಸ ಅನುಭವ ಕೊಡುತ್ತದೆ ಎಂಬ ನಿರೀಕ್ಷೆಯಲ್ಲಿ ಕಾಶಿನಾಥ್ ಇದ್ದಾರೆ.

ಅಭಿನಯಾ ಅವರನ್ನು ಎತ್ತಿ ಹಿಡಿದ ಕಾಶಿನಾಥ್
ವಿಶೇಷ ಎಂದರೆ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದ ಅಭಿನಯಾ ಬಂದಿದ್ದರು. ಅವರನ್ನು ಕಾಶಿನಾಥ್ ಎತ್ತಿಕೊಂಡು ಒಂದು ಖತರ್ನಾಕ್ ಭಂಗಿಯನ್ನೂ ಕೊಟ್ಟರು. ಆದರೆ ಉಪೇಂದ್ರ ಹಾಗೂ ಸುನಿಲ್ ಕುಮಾರ್ ದೇಸಾಯಿ ಮಿಸ್ ಆಗಿದ್ದು ಕಾಶಿನಾಥ್ ಅವರಿಗೂ ಕೊಂಚ ಬೇಸರ ತರಿಸಿತ್ತು.

ನವೆಂಬರ್ 29ಕ್ಕೆ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ
ಇದೇ ನವೆಂಬರ್ 29ಕ್ಕೆ ಅನುಭ ಚಿತ್ರ ರೀ ರಿಲೀಸ್ ಆಗುತ್ತಿದೆ. ಈ ಅಸಂಪ್ರದಾಯಿಯ ಚಿತ್ರವನ್ನು ಮತ್ತೊಮ್ಮೆ ನೋಡಿ ಆನಂದಿಸಿ ಎನ್ನುತ್ತಿದ್ದಾರೆ ಕಾಶಿನಾಥ್. ಈಗ ಡಿಜಿಟಲ್ ರೂಪದಲ್ಲಿ ಪ್ರೇಕ್ಷಕರಿಗೆ ಹೊಸ ಅನುಭವ ಕೊಡುವುದು ಗ್ಯಾರಂಟಿ.


Click it and Unblock the Notifications











