ವಿಷ್ಣು ವಿರುದ್ಧ ನಿಂದನೆ: ಮಾಸ್ಟರ್ ಆನಂದ್ ಏಕೆ ಪ್ರತಿಕ್ರಿಯಿಸಿಲ್ಲ? ಸ್ಪಷ್ಟನೆ ಇಲ್ಲಿದೆ
ತೆಲುಗು ಸಾಹಸ ಕಲಾವಿದ ವಿಜಯ್ ರಂಗರಾಜು ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ವೇಳೆ ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರ ವ್ಯಕ್ತಿತ್ವದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರು. ರಂಗರಾಜು ಹೇಳಿಕೆಗೆ ಕರ್ನಾಟಕದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು.
Recommended Video
ಹೃದಯವಂತನ ಗೌರವಕ್ಕೆ ಧಕ್ಕೆ ತಂದ ನಟನ ವಿರುದ್ಧ ಕ್ರಮ ಆಗ್ರಹಿಸಿ ವಿಷ್ಣು ಅಭಿಮಾನಿಗಳು ಹೋರಾಟಕ್ಕೆ ನಿಂತರು. ಕಿಚ್ಚ ಸುದೀಪ್, ಗಣೇಶ್, ಪುನೀತ್ ರಾಜ್ ಕುಮಾರ್, ಜಗ್ಗೇಶ್, ಯಶ್ ಸೇರಿದಂತೆ ಹಲವರು ವಿರೋಧಿಸಿ ಆ ತೆಲುಗು ನಟನನ್ನು ಕ್ಷಮೆ ಕೇಳುವಂತೆ ಆಗ್ರಹಿಸಿದರು.
ಈ ಮಧ್ಯೆ ವಿಷ್ಣುವರ್ಧನ್ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಮಾಸ್ಟರ್ ಆನಂದ್ ಏಕೆ ಪ್ರತಿಕ್ರಿಯೆ ನೀಡಲಿಲ್ಲ ಎಂದು ಟೀಕೆ ವ್ಯಕ್ತವಾಗಿತ್ತು. ಈ ಬಗ್ಗೆ ಮಾಸ್ಟರ್ ಆನಂದ್ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

ಮಾಸ್ಟರ್ ಆನಂದ್ ಅವರನ್ನು ಪ್ರಶ್ನಿಸಿದ ನೆಟ್ಟಿಗರು
ವಿಷ್ಣುವರ್ಧನ್ ಅವರನ್ನು ನಿಂದಿಸಿದ ತೆಲುಗು ನಟ ವಿಜಯ್ ರಂಗರಾಜು ವಿರುದ್ಧವಾಗಿ ಮಾಸ್ಟರ್ ಆನಂದ್ ಏಕೆ ಮಾತನಾಡಿಲ್ಲ ಎಂದು ಅನೇಕರು ಪ್ರಶ್ನಿಸಿದ್ದಾರೆ. ಇದಕ್ಕೆ ಮಾಸ್ಟರ್ ಆನಂದ್ ಈಗ ಪ್ರತಿಕ್ರಿಯಿಸಿದ್ದು, ''ಈ ಘಟನೆ ಬಗ್ಗೆ ಒಂದು ವಿಡಿಯೋ ಬೈಟ್ ಕೊಡುವುದರಿಂದ ಆಗಲಿ ಅಥವಾ ಆ ನಟನ ವಿರುದ್ಧ ಹೇಳಿಕೆ ಕೊಟ್ಟರೆ ಮಾತ್ರ ಅಪ್ಪಾವ್ರ ಅಭಿಮಾನಿ, ಇಲ್ಲ ಅಂದ್ರೆ ಅಭಿಮಾನಿಯಲ್ಲ ಎನ್ನಲು ಆಗಲ್ಲ. ಈ ವಿಚಾರದಲ್ಲಿ ಹಿರಿಯ ನಿರ್ಧಾರ, ಅಭಿಪ್ರಾಯಕ್ಕಾಗಿ ಕಾಯಬೇಕಾಗಿತ್ತು'' ಎಂದು ಸ್ಪಷ್ಟನೆ ನೀಡಿದ್ದಾರೆ.

ನಮ್ಮ ಹಿರಿಯರು ಇದ್ದಾರೆ ಅಂತ ಕಾಯುತ್ತಿದ್ದೇವೆ
''ಇಂಡಸ್ಟ್ರಿಯಲ್ಲಿ ಹಲವರು ಹಿರಿಯರಿದ್ದಾರೆ. ಒಂದು ವೇಳೆ ನಾವೇ ಮೊದಲು ಮಾತಾಡಿ, ಚಿಕ್ಕ ಬಾಯಲ್ಲಿ ದೊಡ್ಡ ಮಾತು ಏಕೆ ಬಂತು, ಯಾವುದೋ ಚಿಕ್ಕದು, ನೀವು ವಿಡಿಯೋ ಮಾಡಿ ದೊಡ್ಡದು ಮಾಡಿದ್ರಿ ಅಂತ ಹೇಳಿಸಿಕೊಳ್ಳುವುದು ಬೇಡ ಅಂತ ಕಾಯಬೇಕಾಯಿತು. ಹೀಗೆ ಕಾದು ಕುಳಿತಿದ್ದರಿಂದ ಒಂದು ವಾರ ಹೆಚ್ಚು ಕಡಿಮೆಯಾಗಿದೆ. ಅದನ್ನು ಬಿಟ್ಟರೆ ಇದರ ವಿರುದ್ಧ ಏನು ಮಾಡಬೇಕು, ಯಾವ ರೀತಿ ಹೆಜ್ಜೆಯಿಡಬೇಕು ಎನ್ನುವ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಲವರ ಜೊತೆ ನಾನು ಸಂಪರ್ಕದಲ್ಲಿದ್ದೆ'' ಎಂದು ಮಾಹಿತಿ ನೀಡಿದ್ದಾರೆ.

ನಮಗೂ ಒಂದು ಪಟ್ಟು ಹೆಚ್ಚು ನೋವು ಆಗಿರುತ್ತೆ
''ಸಾಮಾಜಿಕ ಜಾಲತಾಣದಲ್ಲಿ ಮಾತಾಡಿಲ್ಲ ಅಂದ ಮಾತ್ರಕ್ಕೆ ನಮಗೆ ಅಭಿಮಾನ ಇಲ್ಲ ಅಂತ ಅಂದುಕೊಳ್ಳಬೇಡಿ. ನಿಮಗಿಂತ ನಮಗೆ ಒಂದು ಪಟ್ಟು ಹೆಚ್ಚು ನೋವು ಆಗಿರುತ್ತೆ. ಅವರ ಜೊತೆ ಕೆಲಸ ಮಾಡಿದ್ದೇವೆ, ಅವರಿಂದ ಸಾಕಷ್ಟು ಕಲಿತಿದ್ದೇವೆ, ಅವರ ಜೊತೆ ಒಡನಾಟ ಇಟ್ಟುಕೊಂಡಿದ್ವಿ. ಈ ಘಟನೆ ತುಂಬಾ ನೋವು ತಂದಿದೆ. ಆದರೆ, ಆ ವ್ಯಕ್ತಿಗೆ ತನ್ನ ತಪ್ಪಿನ ಅರಿವಾಗಿದೆ. ಎಲ್ಲ ಅಭಿಮಾನಿಗಳ ಜೊತೆ ನಾನು ಒಬ್ಬ ಅಭಿಮಾನಿ'' ಎಂದು ಮಾಸ್ಟರ್ ಆನಂದ್ ತಿಳಿಸಿದ್ದಾರೆ.

ತೆಲುಗು ನಟನ ಕರ್ಮದಲ್ಲಿ ನನಗೆ ಪಾಲು ಬೇಡ
''ಒಂದಲ್ಲ ಎರಡಲ್ಲ ಏಳು ಸಿನಿಮಾಗಳು ಅಪ್ಪೋರ ಜೊತೆ ನಟಿಸುವ ಸೌಭಾಗ್ಯ ಹಾಗು ದೇವರ ಆಶೀರ್ವಾದ ಆದ ನಮಗೆ ಅವರ ಮೇಲೆ ಇರಬಹುದಾದ ಮನದಾಭಿಮಾನವನ್ನ ದಯಮಾಡಿ ಯಾರು ತಮ್ಮ ತಮ್ಮ ಅಳತೆ ಕೋಲಿನಲ್ಲಿ ಲೆಕ್ಕ ಹಾಕ ಬೇಡಿ. ಮಾಡಿದವರ ಪಾಪ ಆಡಿದವರ ಬಾಯಲಿ ಎಂಬಂತೆ ಆ ತೆಲುಗು ನಟನ ಕರ್ಮದಲ್ಲಿ ನನಗೆ ಪಾಲು ಬೇಡ'

ಮಂಡಿಯೂರಿ ಕ್ಷಮೆಯಾಚಿಸಿದ ರಂಗರಾಜು
ವಿಷ್ಣುವರ್ಧನ್ ಅವರ ಬಗ್ಗೆ ನಿಂದನೆ ಮಾಡಿದ್ದ ತೆಲುಗು ನಟ ವಿಜಯ್ ರಂಗರಾಜು, ತಮ್ಮ ತಪ್ಪನ್ನು ತಿಳಿದುಕೊಂಡು ಮಂಡಿಯೂರಿ ವಿಷ್ಣು ಅಭಿಮಾನಿಗಳ ಕ್ಷಮೆಯಾಚಿಸಿದ್ದಾರೆ. ಕಣ್ಣಿರಿಟ್ಟು ನನ್ನನ್ನು ಕ್ಷಮಿಸಿಬಿಡಿ, ನನ್ನನ್ನು ಬಿಟ್ಟುಬಿಡಿ ಎಂದು ಕೇಳಿಕೊಂಡಿದ್ದಾರೆ.


Click it and Unblock the Notifications











