ಸಿದ್ದರಾಮಯ್ಯಗೆ 'ರಾಗ' ಚಿತ್ರ ನೋಡಿ ಎಂದು ಪತ್ರ ಬರೆದ ಮಿತ್ರ
ಪಿ.ಸಿ.ಶೇಖರ್ ನಿರ್ದೇಶನದ, ಹಾಸ್ಯನಟ ಮಿತ್ರ ಅಭಿನಯದ 'ರಾಗ' ಚಿತ್ರ 'ಬಾಹುಬಲಿ 2' ಬಿಡುಗಡೆಯಿಂದ ರಾಜ್ಯದಲ್ಲಿ ಥಿಯೇಟರ್ ಸಮಸ್ಯೆ ಎದುರಿಸಿದ್ದು, ಮಿತ್ರ ರವರು ಈ ಹಿನ್ನೆಲೆಯಲ್ಲಿ ರಕ್ತದ ಒತ್ತಡ ಹೆಚ್ಚಾಗಿ ಆಸ್ಪತ್ರೆಗೆ ಸೇರಿದ್ದರು.['ರಾಗ' ಚಿತ್ರ ಎತ್ತಂಗಡಿ: ನಟ-ನಿರ್ಮಾಪಕ ಮಿತ್ರ ಆಸ್ಪತ್ರೆಗೆ ದಾಖಲು!]
'ಬಾಹುಬಲಿ 2' ಬಿಡುಗಡೆ ನಂತರ 'ರಾಗ' ಚಿತ್ರ ಪ್ರದರ್ಶನಕ್ಕಾದ ಸಮಸ್ಯೆ ಬಗೆಹರಿಸಲು ಚಿತ್ರರಂಗದ ಹಿತೈಷಿಗಳು ಮತ್ತು ಚಿತ್ರತಂಡದವರ ಹೋರಾಟದಿಂದ ನಾಲ್ಕು ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರ ಪ್ರದರ್ಶನ ಭಾಗ್ಯ ದೊರೆಯಿತು.
ಅಂದಹಾಗೆ ಈಗಿನ ಲೇಟೆಸ್ಟ್ ಸುದ್ದಿ ಏನಂದ್ರೆ 'ರಾಗ' ಚಿತ್ರದ ನಟ ಮಿತ್ರ ರವರು ಮುಖ್ಯಮಂತ್ರಿ ಸಿದ್ದರಾಮಯ್ಯ'ನವರಿಗೆ ಪತ್ರವೊಂದನ್ನು ಬರೆದು ಚಿತ್ರ ನೋಡುವಂತೆ ಮನವಿ ಮಾಡಿದ್ದಾರೆ. ಅಷ್ಟೆ ಅಲ್ಲದೇ ಸಿದ್ದರಾಮಯ್ಯ'ನವರಲ್ಲಿ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಮಿತ್ರ ರವರು ಮುಖ್ಯಮಂತ್ರಿಗಳಲ್ಲಿ ಪತ್ರದ ಮೂಲಕ ಇಟ್ಟ ಬೇಡಿಕೆಗಳೇನು ಎಂಬುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ. ಮುಂದೆ ಓದಿರಿ..

ಮಿತ್ರ ರವರು ಸಿದ್ಧರಾಮಯ್ಯ'ನವರಿಗೆ ಬರೆದ ಪತ್ರದಲ್ಲಿ ಇರುವುದು ಏನು?
"ಒಬ್ಬ ನಟನಾಗಿ ನನಗೆ ಚಿತ್ರರಂಗ ಎಲ್ಲವನ್ನೂ ಕೊಟ್ಟಿದೆ. ಆದರೂ ನಾನು ಚಿತ್ರರಂಗಕ್ಕೆ ನನ್ನ ಅಭಿನಯವನ್ನು ನೋಡಿ ಆನಂದಿಸಿ ಪ್ರೊತ್ಸಾಹಿಸುವ ಸಾಮಾಜಿಕರಿಗೆ ಏನನ್ನಾದರೂ ಕೊಡಬೇಕು, ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಅನ್ನುವ ಕವಿವಾಣಿಯಂತೆ ಒಂದು ಸದಭಿರುಚಿಯ ಸಾಮಾಜಿಕ ಸಮಸ್ಯೆಯಾದ ಮನುಕುಲದ ಕರುಳು ಬೇನೆಯಾದ ಅಂಧರ ಸಮಸ್ಯೆ, ಅತಂತ್ರತೆ, ಬದುಕಿನ ಭಾವತೀವ್ರತೆಗಳನ್ನೇ ಇಟ್ಟುಕೊಂಡು 'ರಾಗ' ಹೆಸರಿನ ಚಿತ್ರ ನಿರ್ಮಿಸಿದೆ"- ಮಿತ್ರ, 'ರಾಗ' ಚಿತ್ರದ ನಟ

ಚಿತ್ರದಲ್ಲಿ ಉತ್ತಮ ಸಂದೇಶವಿದೆ
" 'ರಾಗ' ಅಂಧ ಸಮಾಜದ ಕಣ್ ಬೆಳಕು. ಅಂತರಂಗದ ನಾದ-ರಾಗ. ಹೊರಗಣ್ಣಿಲ್ಲದವನು ನಿಜವಾಗಿಯೂ ಕುರುಡನಲ್ಲ. ಒಳಗಣ್ಣು ಇಲ್ಲದವರೇ ನಿಜ ಕುರುಡರು ಎನ್ನುವ ಮುಖ್ಯ ಸಂದೇಶವನ್ನು ಇಟ್ಟುಕೊಂಡು ಈ ಚಿತ್ರ ನಿರ್ಮಿಸಿದೆ. ಹೊಸ ಅಲೋಚನೆಯ ಉತ್ಸಾಹಿ ಪಿ.ಸಿ.ಶೇಖರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದ ಪ್ಲಸ್ ಪಾಯಿಂಟ್ ಏನೇಂದರೆ ನಾನೇ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದೇನೆ. ಪ್ರತಿಭಾವಂತ ಪ್ರಶಸ್ತಿ ವಿಜೇತ ಕಲಾವಿದೆ ಭಾಮಾ ರವರು ನಾಯಕಿ ಆಗಿ ಅಭಿನಯಿಸಿದ್ದಾರೆ" - ಮಿತ್ರ, 'ರಾಗ' ಚಿತ್ರದ ನಟ

ಮುಖ್ಯಮಂತ್ರಿಗಳಲ್ಲಿ ನಟ ಮಿತ್ರ'ನ ಮನವಿ
" 'ಬಾಹುಬಲಿ-2' ಚಿತ್ರವನ್ನು ತಾವು ನೋಡಿದಂತೆ ಅಂಧರ ಬದುಕಿನ ಅಂತರಂಗದ ಕಥನವಾದ 'ರಾಗ'ವನ್ನು ಸಂಪುಟ ಸದಸ್ಯರ ಸಹಿತ ತಾವು ನೋಡಬೇಕು" -ಮಿತ್ರ, 'ರಾಗ' ಚಿತ್ರದ ನಟ

ಸುತ್ತೋಲೆ ಹೊರಡಿಸಿ ಎಂದು ಮಿತ್ರನ ಬೇಡಿಕೆ
"ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆಗೆ ತಾವು ಸುತ್ತೋಲೆ ಹೊರಡಿಸಿ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು 'ರಾಗ'ವನ್ನು ವೀಕ್ಷಿಸಲು ಅನುವು ಮಾಡಿಕೊಡಬೇಕು" ಎಂದು ಮಿತ್ರ ತಾವು ಸಿದ್ದರಾಮಯ್ಯ ನವರಿಗೆ ಚಿತ್ರ ನೋಡಿ ಎಂದು ಮನವಿ ಮಾಡಿ ನೀಡಿದ ಪತ್ರದಲ್ಲಿ ಬರೆದಿದ್ದಾರೆ.

ಚಿತ್ರದ ಆದಾಯ ಅಂಧರ ಯೋಗಕ್ಷೇಮಕ್ಕೆ
"ಈ ಸಿನಿಮಾದಿಂದ ಬಂದ ಆದಾಯದಲ್ಲಿ ನನ್ನ ಖರ್ಚನ್ನು ಕಳೆದು ಉಳಿದ ಹಣವನ್ನು ಅಂಧರ ಯೋಗಕ್ಷೇಮ, ಅಶಕ್ತ ಹಿರಿಯ ಕಲಾವಿದರ ಯೋಗಕ್ಷೇಮ, ಮತ್ತು ಮುಖ್ಯಮಂತ್ರಿ ಕಲ್ಯಾಣ ನಿಧಿಗೆ ಅರ್ಪಿಸುತ್ತೇನೆ. ಸಹೃದಯಿಗಳಾದ ತಾವು 'ರಾಗ'ವನ್ನು ನೋಡುವ, ರಾಜ್ಯದ ವಿದ್ಯಾರ್ಥಿಗಳು, ಸರಕಾರಿ ನೌಕರರು, ಐಎಎಸ್-ಕೆಎಎಸ್ ಅಧಿಕಾರಿಗಳು ಮತ್ತು ಸಂಘ-ಸಂಸ್ಥೆಗಳು ಕಾಣುವ ಅವಕಾಶ ಕಲ್ಪಿಸಿಕೊಡಬೇಕಾಗಿ ವಿನಂತಿಸುತ್ತೇನೆ" ಎಂದು ಮಿತ್ರ ರವರು ಪತ್ರದಲ್ಲಿ ಬರೆದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.


Click it and Unblock the Notifications











