ಮೂಡಿಗೆರೆಯ ಐತಿಹಾಸಿಕ ಸಂದೇಶ್ ಚಿತ್ರಮಂದಿರ ಇನ್ನಿಲ್ಲ
ಸುಮಾರು ನಾಲ್ಕರಿಂದ ಐದು ದಶಕಗಳ ಕಾಲ ಮೂಡಿಗೆರೆ ಜನತೆಗೆ ಮನರಂಜನೆ ಮೂಲಕ ತನ್ನ ಸೇವೆಯನ್ನ ನೀಡಿ ಖುಷಿ ಹಂಚುತ್ತಿದ್ದ ಖ್ಯಾತ ಸಂದೇಶ್ ಚಿತ್ರಮಂದಿರವೂ ಇಂದು ಬಾಗಿಲು ಮುಚ್ಚುವ ಹಂತಕ್ಕೆ ತಲುಪಿದೆ. ಅದೆಷ್ಟೋ ಜನ ತಮ್ಮ ದುಃಖ,ದುಮ್ಮಾನಗಳನ್ನ ಕಳೆಯಲು ಈ ಚಿತ್ರಮಂದಿರವನ್ನ ಅವಲಂಬಿಸಿದ್ದರು. ಭಾವನಾತ್ಮಕವಾಗಿ ಚಿತ್ರಮಂದಿರದ ಮೇಲೆ ಸಾಕಷ್ಟು ಜನರಿಗೆ ಇನ್ನಿಲ್ಲದ ಪ್ರೀತಿ,ವಿಶ್ವಾಸ.
ಹೇಳಿ ಕೇಳಿ ಮೂಡಿಗೆರೆ ತಾಲ್ಲೂಕು ಕೇಂದ್ರದಲ್ಲಿ ಒಂದೇ ಒಂದು ಚಿತ್ರಮಂದಿರ ಪ್ರಸಕ್ತವಾಗಿ ತನ್ನ ಕಾರ್ಯನಿರ್ವಹಿಸುತ್ತಿತ್ತು. ಮೂಡಿಗೆರೆಯಲ್ಲಿ ಹಲವು ಚಿತ್ರಮಂದಿರಗಳು ಇದೇ ರೀತಿ ನಷ್ಟದ ಸುಳಿಗೆ ಸಿಲುಕಿ ಬಾಗಿಲು ಮುಚ್ಚಿದ್ದು ಈಗ ಇತಿಹಾಸವಾಗಿದೆ. ಹೆಸರಿಗೆ ಇದ್ದ ಒಂದು ಚಿತ್ರಮಂದಿರವೂ ಅದೇ ಹಾದಿ ಹಿಡಿದು ಅವನತಿಯತ್ತ ಸಾಗುತ್ತಿದೆ. ಸಾವಿರಾರು ಚಿತ್ರರಸಿಕರು ಈ ವಿಷಯ ಕೇಳಿ ಜರ್ಜರಿತವಾಗಿದ್ದಂತೂ ಅಕ್ಷರಶಃ ಸತ್ಯ.
ಮುಂದಿನ ದಿನಗಳಲ್ಲಿ ಮೂಡಿಗೆರೆಯಲ್ಲಿ ಯಾವುದೇ ಚಿತ್ರಮಂದಿರ ಇಲ್ಲದ ಕಾರಣ ಸಿನಿಮಾ ಪ್ರೇಮಿಗಳು ಇದರಿಂದ ತಮ್ಮ ಮನೋರಂಜನೆಯನ್ನು ಕಳೆದುಕೊಳ್ಳುವುದಂತು ನಿಜ. ಮಾನಸಿಕವಾಗಿ ನೆಮ್ಮದಿ ಕಳೆದುಕೊಂಡವರು ನಿರಾಳತೆಗಾಗಿ ಈ ಚಿತ್ರಮಂದಿರಕ್ಕೆ ಬಂದು ತಾತ್ಕಾಲಿಕ ರಿಲೀಫ್ ಅನುಭವಿಸುತ್ತಿದ್ದರು.
ಮೂಡಿಗೆರೆ ನಗರದ ಛತ್ರಮೈದಾನದ ಜನತೆಗೆ ಸಂದೇಶ್ ಚಿತ್ರಮಂದಿರವೆಂದರೆ ಇನ್ನಿಲ್ಲದ ಅಚ್ಚುಮೆಚ್ಚು ಹಾಗೇ ತುಂಬಾ ಭಾವನಾತ್ಮಕ ವಿಚಾರ.

ಯಾಕೆಂದರೆ ಸಂದೇಶ್ ಚಿತ್ರಮಂದಿರವೂ ಇದೇ ಭಾಗದಲ್ಲಿರುವುದು ತಮಗೆಲ್ಲ ಗೊತ್ತಿರುವ ಸಂಗತಿ. ಈ ಚಿತ್ರಮಂದಿರವೂ ನಮ್ಮ ಛತ್ರಮೈದಾನಕ್ಕೆ ಚಿನ್ನದ ಕಳಶ ಇಟ್ಟಂತೆ ಕಂಗೊಳಿಸುತ್ತಿತ್ತು. ನಮ್ಮ ಭಾಗದ ಸೌಂದರ್ಯವನ್ನು ಈ ಎತ್ತರದ ಕಟ್ಟಡ ಇನ್ನಷ್ಟು ಸುಂದರಗೊಳಿಸಿತ್ತು. ಇಲ್ಲಿನ ಜನ ಈ ಚಿತ್ರಮಂದಿರಕ್ಕೆ ಹೆಚ್ಚು ಅವಲಂಬಿತರಾಗಿದ್ದರು.
ಪ್ರತಿ ಭಾನುವಾರ ಬಂತೆಂದರೆ ಸಂಜೆಯ ವೇಳೆಗೆ ಇಲ್ಲಿನ ಯುವಕರು ತಂಡೋಪತಂಡವಾಗಿ ಚಿತ್ರ ವೀಕ್ಷಿಸಲು ಧಾವಿಸುತ್ತಿದ್ದು ಮಾತ್ರ ಈಗ ಇತಿಹಾಸ ಪುಟ ಸೇರಿದೆ. ಅಲ್ಲದೇ ದೂರದೂರಿನಿಂದ ಬಂದ ಸಂಬಂಧಿಕರಿಗೆ ಮನೆಯ ವಿಳಾಸವನ್ನು ತಿಳಿಸಲು ಚಿತ್ರಮಂದಿರದ ಹೆಸರನ್ನು ಪ್ರತಿ ಸಾರಿ ಬಳಸಿಕೊಳ್ಳುತ್ತಿದ್ದನ್ನು ಇಲ್ಲಿ ನಾವು ಗಮನಿಸಬಹುದು. ಇನ್ನೂ ಅಂಚೇ ಚೀಟಿಗಳು ಕೂಡ ಇದೇ ವಿಳಾಸದಿಂದ ಇಷ್ಟು ವರ್ಷಗಳ ಕಾಲ ಜನರಿಗೆ ಪತ್ರ ತಲುಪಿಸುವ ಸುಲಭ ಮಾರ್ಗವನ್ನು ಕಂಡುಕೊಂಡಿತ್ತು.
ಇಂತಹ ಭವ್ಯ ಇತಿಹಾಸವಿರುವ ಚಿತ್ರಮಂದಿರವೂ ಶಾಶ್ವತವಾಗಿ ಬಾಗಿಲು ಮುಚ್ಚುವುದೆಂದರೆ ಅರ್ಥವೇನು..?? ಬದಲಾದ ಕಾಲಘಟ್ಟದಲ್ಲಿ ದಿನಕಳೆದಂತೆ ಜನರಿಗೆ ಚಿತ್ರಮಂದಿರದ ಮೇಲೆ ಆಸಕ್ತಿ ಕಡಿಮೆಯಾಗಿ ಮೊಬೈಲ್, ಇಂಟರ್ ನೆಟ್ ಮತ್ತು ಸಾಮಾಜಿಕ ಜಾಲತಾಣದ ಈ ಯುಗಗಳಿಗೆ ಮೊರೆ ಹೋದ ಜನತೆಯೂ ಚಿತ್ರಮಂದಿರದ ಕಡೆ ಮುಖ ಮಾಡದೇ ಇದ್ದದ್ದು ಚಿತ್ರಮಂದಿರವನ್ನು ಇನ್ನಷ್ಟು ನಷ್ಟದ ಸುಳಿಗೆ ಸಿಲುಕಿಸಿತ್ತು.
ಅಚ್ಚರಿಯೆಂದರೆ ಬಿಡುಗಡೆಯಾದ ಹೊಸ ಚಿತ್ರಗಳು ಕೂಡ ಒಂದು ವಾರ ತಲುಪುವ ವೇಳೆಗೆ ಸುಸ್ತಾಗಿ ಹೋಗುತ್ತಿದ್ದವು. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಚಿತ್ರಮಂದಿರವನ್ನೂ ಮುನ್ನಡೆಸುವುದು ಸೂಕ್ತವಲ್ಲ ಎಂದು ಭಾವಿಸಿ ಆಡಳಿತ ಮಂಡಳಿಯೂ ಇದಕ್ಕೆ ಬೀಗ ಜಡಿಯಲು ಮುಂದಾಗಿದೆ.
ಬಾಲ್ಯವೆಂದರೆ ಮಳೆ, ಅಲೆದಾಟ, ಆಟೋಟ ಮತ್ತು ಅಜ್ಜಿಯ ಪ್ರೀತಿ!
ವಿಚಾರ ಏನೇ ಇರಲಿ ನಾಲ್ಕೈದು ದಶಕಗಳ ಕಾಲ ಮೂಡಿಗೆರೆ ಜನತೆಯನ್ನ ಅಕ್ಕರೆಯಿಂದ ಕಂಡು ಮನೋರಂಜನೆ ನೀಡುತ್ತಿದ್ದ ಚಿತ್ರಮಂದಿರವೂ ಇಂದು ದುರಂತ ಅಂತ್ಯ ಕಂಡಿರುವುದು ಮಾತ್ರ ಬೇಸರದ ಸಂಗತಿ.....ಇಂತಹ ಪರಿಸ್ಥಿತಿ ಕರ್ನಾಟಕದ ಬೇರ್ಯಾವ ಚಿತ್ರಮಂದಿರಕ್ಕೆ ಬಾರದೇ ಇರಲಿ ಎಂದು ಆಶಿಸುತ್ತೇನೆ.


Click it and Unblock the Notifications











