Don't Miss!
- News ಮಂಡ್ಯದಲ್ಲಿ ಕುಮಾರಸ್ವಾಮಿ ಸೋಲು ಗ್ಯಾರಂಟಿ: ಭವಿಷ್ಯ ನುಡಿದ ಸಿದ್ದರಾಮಯ್ಯ
- Finance ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ಶುಲ್ಕ ಹೆಚ್ಚಳ: ಕಾರುಗಳಿಗೆ 330 ರೂ. ತಾಕೀತು?
- Automobiles ಥಾರ್ 5 ಡೋರ್ ಬಿಡುಗಡೆಗೂ ಮುನ್ನವೇ ಎದುರಾಳಿ ರೆಡಿ: ಹೊಸ ಗೂರ್ಖಾಗೆ ನಲುಗುತ್ತಾ ಮಹೀಂದ್ರಾ!
- Sports Hardik Pandya: ಸ್ವತಃ ಮುಂಬೈ ಇಂಡಿಯನ್ಸ್ ಫ್ಯಾನ್ಸ್ನಿಂದಲೂ ಹಾರ್ದಿಕ್ ಪಾಂಡ್ಯ ಟ್ರೋಲ್!
- Technology ಅಗ್ಗದ ಬೆಲೆಯಲ್ಲಿ 5G ಫೋನ್ ಬೇಕೆ?..ಹಾಗಿದ್ರೆ ಈ ಆಫರ್ ನಿಮಗೆ ಸೂಪರ್!
- Lifestyle ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇತಿಹಾಸದ ಪುಟ ಸೇರಲು ಸಜ್ಜಾಗಿವೆ ನರ್ತಕಿ, ಸಪ್ನಾ
ಮೆಜೆಸ್ಟಿಕ್ ನ ಮತ್ತೆರಡು ಥಿಯೇಟರ್ ಗಳು ಕೊನೆಯ ದಿನಗಳನ್ನು ಎಣಿಸುತ್ತಿವೆ. ಇದೇ ಮಾರ್ಚ್ 31ಕ್ಕೆ ನರ್ತಕಿ ಮತ್ತು ಸಪ್ಬಾ ಚಿತ್ರಮಂದಿರಗಳು ಕೊನೆಯ ಆಟಕ್ಕೆ ಸಜ್ಜಾಗಿ ನಿಂತಿವೆ. ಈ ಮೂಲಕ ಗಾಂಧಿನಗರದ ಮತ್ತೆರಡು ಚಿತ್ರಮಂದಿರಗಳು ಇತಿಹಾಸದ ಪುಟ ಸೇರಲಿವೆ.
ಬೆಂಗಳೂರು ಮೆಜೆಸ್ಟಿಕ್ ನ ಹೃದಯಭಾಗದಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ಶುಕ್ರವಾರ ಬಂತೆಂದರೆ ಹಬ್ಬದ ಸಂಭ್ರಮ. ಈ ಥಿಯೇಟರ್ ಗಾಗಿ ಬಿಗ್ ಬಜೆಟ್ ಚಿತ್ರಗಳು ಮುಗಿಬೀಳುತ್ತಿದ್ದವು. ಆ ವೈಭವದ ದಿನಗಳು ಇನ್ನು ನೆನಪು ಮಾತ್ರ. ಉಳಿದಂತೆ ಸಪ್ನಾ ಚಿತ್ರಮಂದಿರ ಸಣ್ಣ ಬಜೆಟ್ ಚಿತ್ರಗಳ ಪಾಲಿಗೆ ವರದಾನವಾಗಿತ್ತು. [ಕೊನೇ ಆಟ ಮುಗಿಸಿದ ಕೆ ಜಿ ರಸ್ತೆಯ ಸಾಗರ್]
ಈ ಚಿತ್ರಮಂದಿರಗಳ ಲೀಸ್ ಅವಧಿ ಮುಗಿದಿರುವ ಕಾರಣ ಬೀಗಹಾಕಲಾಗುತ್ತಿದೆ ಎಂದು ಈ ಎರಡೂ ಚಿತ್ರಮಂದಿರಗಳ ಮಾಲೀಕರಾದ ಪ್ರಕಾಶ್ ಎಂ ಶಿಂಧೆ ಹೇಳುತ್ತಿದ್ದಾರೆ. ಈ ಸಂಬಂಧ ಅವರು ಮಾರ್ಚ್ 31ರಿಂದ ಬೀಗಮುದ್ರೆ ಹಾಕುವುದಾಗಿಯೂ ನೋಟೀಸ್ ಜಾರಿಮಾಡಿದ್ದಾರೆ.
ಈ ಥಿಯೇಟರ್ ಗಳಲ್ಲಿ ಇಷ್ಟು ವರ್ಷಗಳ ಕಾಲ ಕೆಲಸ ಮಾಡುತ್ತಿರುವ ಸುಮಾರು 25 ನೌಕರರು ಬೀದಿಗೆ ಬೀಳುವ ಆತಂಕದಲ್ಲಿದ್ದಾರೆ. ವಿಧಿಯಿಲ್ಲದೆ ನೌಕರರು ಸಿನಿಮಾ ಕಾರ್ಮಿಕರ ಸಂಘದ ಮೊರೆ ಹೋಗಿದ್ದಾರೆ. ಈ ಕಾರ್ಮಿಕರ ಪರವಾಗಿ ಹೋರಾಡುವ ಭರವಸೆಯನ್ನು ಸಂಘ ಅವರಿಗೆ ನೀಡಿದೆ.
ಒಂದು ಮೂಲಗಳ ಪ್ರಕಾರ, ಈ ಎರಡೂ ಥಿಯೇಟರ್ ಗಳ ಲೀಸ್ ಅವಧಿ ಇನ್ನೂ ಮುಗಿದಿಲ್ಲ. ನೌಕರರು ಅವರೇ ಕೆಲಸ ಬಿಟ್ಟುಹೋಗುವಂತೆ ಮಾಡಿರುವ ಪ್ಲಾನ್ ಇದು. ನೌಕರರಿಗೆ ವೇತನ ಹೆಚ್ಚಳ, ಉಳಿದ ಸೌಲಭ್ಯಗಳನ್ನು ನೀಡಲು ಸಾಧ್ಯವಾಗದೆ ಈ ರೀತಿ ನೋಟೀಸ್ ಜಾರಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಇನ್ನೊಂದು ಮೂಲದ ಪ್ರಕಾರ, ಈಗಾಗಲೆ 45 ವರ್ಷಗಳ ಲೀಸ್ ಅವಧಿ ಮುಗಿದಿದೆ. ಹಾಗಾಗಿ ಒಂದು ತಿಂಗಳ ಹಿಂದೆಯೇ ಮಾಲೀಕರು ತಿಳಿಸಿದ್ದರು. ಈಗ ಮಾರ್ಚ್ 31ಕ್ಕೆ ಬೀಗಮುದ್ರೆ ಹಾಕುವುದು ನಿಜ. ಒಂದು ವೇಳೆ ಬೇರೊಬ್ಬರು ಥಿಯೇಟರ್ ಗಳನ್ನು ಗುತ್ತಿಗೆಗೆ ತೆಗೆದುಕೊಂಡರೆ ಈ ಎರಡೂ ಚಿತ್ರಮಂದಿರಗಳು ಇನ್ನೊಂದಷ್ಟು ವರ್ಷ ಉಸಿರಾಡುತ್ತವೆ.
ಸ್ಯಾಂಡಲ್ ವುಡ್ ಚಿತ್ರೋದ್ಯಮದ ಆಧಾರಸ್ತಂಭದಂತಿರು ಚಿತ್ರಮಂದಿರಗಳು ಒಂದೊಂದಾಗಿ ಕಣ್ಮುಚ್ಚಿವೆ. ಕಲ್ಪನಾ, ಮೆಜೆಸ್ಟಿಕ್, ಸಾಗರ್, ತ್ರಿವೇಣಿ, ಪಲ್ಲವಿ ಚಿತ್ರಮಂದಿಗಳು ಈಗಾಗಲೆ ಬಾಗಿಲು ಮುಚ್ಚಿವೆ. ಮುಂದಿನ ದಿನಗಳಲ್ಲಿ ಕಪಾಲಿ, ಸಂತೋಷ್ ಹಾಗೂ ಉಮಾ ಚಿತ್ರಮಂದಿರಗಳಿಗೂ ಬೀಗಬೀಳಲಿದೆ.
ಗಾಂಧಿನಗರ ಮೂಲಗಳ ಮಾತು ನಂಬುವುದಾದರೆ ಮುಂದೆ ಉಳಿದುಕೊಳ್ಳಲಿರುವ ಏಕೈಕ ಚಿತ್ರಮಂದಿರ ಎಂದರೆ ಅದು ಮೇನಕಾ ಚಿತ್ರಮಂದಿರ ಮಾತ್ರವಂತೆ. ಹಾಗೊಂದು ವೇಳೆ ಅದೇ ಆದರೆ ಸಿಂಗಲ್ ಸ್ಕ್ರೀನ್ ಥಿಯೇಟರ್ ಎಂದರೆ ಹೀಗಿರುತ್ತದೆ ಎಂಬ ಅವಶೇಷದಂತೆ ಮೇನಕಾ ಉಳಿದರೂ ಅಚ್ಚರಿಯಿಲ್ಲ.