ಮೈಸೂರಿನಲ್ಲಿ ಸ್ಯಾಂಡಲ್ ವುಡ್ ತಾರೆಗಳ ಕಲರವ
ಇಡೀ ಸ್ಯಾಂಡಲ್ ವುಡ್ ಚಿತ್ರೋದ್ಯಮವೇ ಎದುರು ನೋಡುತ್ತಿರುವ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅರಮನೆಗಳ ನಗರ ಮೈಸೂರು ಸಿಂಗಾರಗೊಂಡಿದೆ. 2012 ಮತ್ತು 2013ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ಇಂದು (ಫೆಬ್ರವರಿ 28) ಸಂಜೆ 6 ಗಂಟೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ವರ್ಣರಂಜಿತವಾಗಿ ನಡೆಯಲಿದೆ.
2012ನೇ ಸಾಲಿನ ಜೀವಮಾನಸಾಧನೆ ಪ್ರಶಸ್ತಿಗೆ ಆರು ಮಂದಿ ಭಾಜನರಾಗಿದ್ದಾರೆ. ಡಾ.ರಾಜ್ಕುಮಾರ್ ಪ್ರಶಸ್ತಿಗೆ ಎಂ.ಭಕ್ತವತ್ಸಲಂ, ಪುಟ್ಟಣ ಕಣಗಾಲ್ ಪ್ರಶಸ್ತಿಗೆ ಚಿ.ದತ್ತರಾಜ್, ಡಾ.ವಿಷ್ಣುವರ್ಧನ್ ಪ್ರಶಸ್ತಿಗೆ ರಾಜೇಶ್ ಅವರನ್ನು ಆಯ್ಕೆ ಮಾಡಲಾಗಿದೆ. [2013ನೇ ಸಾಲಿನ ಪ್ರಶಸ್ತಿಗೆ ಭಾಜನರಾದವರ ಪಟ್ಟಿ]
ಅದೇ ರೀತಿ 2013ನೇ ಸಾಲಿಗೆ ಡಾ.ರಾಜ್ಕುಮಾರ್ ಪ್ರಶಸ್ತಿಗೆ ಶ್ರೀನಾಥ್, ಪುಟ್ಟಣ ಕಣಗಾಲ್ ಪ್ರಶಸ್ತಿಗೆ ಪಿ.ಎಚ್.ವಿಶ್ವನಾಥ್, ಡಾ.ವಿಷ್ಣುವರ್ಧನ್ ಪ್ರಶಸ್ತಿಗೆ ಕೆ.ವಿ.ಗುಪ್ತ ಅವರು ಆಯ್ಕೆಯಾಗಿದ್ದಾರೆ. ಇಪ್ಪತ್ತು ವರ್ಷಗಳ ನಂತರ ಮೈಸೂರಿನಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ವಿತರಣಾ ಸಮಾರಂಭ ನಡೆಯುತ್ತಿದೆ.

ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಇಂದು ಸಂಜೆ 6 ಗಂಟೆಗೆ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಮಾರಂಭ ಆಯೋಜಿಸಿರುವ ಹಿನ್ನೆಲೆಯಲ್ಲಿ ವೇದಿಕೆಯನ್ನು, ಮೈಸೂರು ಅರಮನೆಯ ಚಿತ್ರದ ಹಿನ್ನೆಲೆಯಲ್ಲಿ ವೇದಿಕೆಯನ್ನು ಅತ್ಯಾಕರ್ಷಕವಾಗಿ ಕಲಾವಿದ ಶಶಿಧರ ಅಡಪ ನಿರ್ಮಿಸಿದ್ದಾರೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ತಿಳಿಸಿದರು.
ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಗುತ್ತಿದ್ದು, ನಾಡು-ನುಡಿ ಪರಂಪರೆ ತಿಳಿಯುವಂತಹ ಚಿತ್ರಗೀತೆಗಳಿಗೆ ನಟಿ ನೀತೂ, ರಿಷಿಕಾ ಸಿಂಗ್ ನೃತ್ಯ ನಡೆಸಿಕೊಡುವರು. ರಾಜ್ಯದ ವಿವಿಧ ಜಿಲ್ಲೆಯ ಪ್ರತಿಭಾನ್ವಿತ ಕಲಾವಿದರು ಭಾಗವಹಿಸಿ ಸಭಿಕರನ್ನು ರಂಜಿಸಲಿದ್ದಾರೆ. ಈ ಸಮಾರಂಭಕ್ಕೆ 20 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ.
ಮೊದಲ ಅತ್ಯುತ್ತಮ ಚಲನಚಿತ್ರವಾಗಿ ತಲ್ಲಣ (2012), ಹಜ್(2013), ಅತ್ಯುತ್ತಮ ಮಕ್ಕಳ ಚಿತ್ರ- ಲಿಟಲ್ ಮಾಸ್ಟರ್(2012), ಹಾಡುಹಕ್ಕಿ ಹಾಡು(2013), ಅತ್ಯುತ್ತಮ ನಟ ದರ್ಶನ್ (2012), ನಿಖಿಲ್ ಮಂಜು- ಹಜ್(2013), ಅತ್ಯುತ್ತಮ ನಟಿ ನಿರ್ಮಲ ಚನ್ನಪ್ಪ (2012), ಅತ್ಯುತ್ತಮ ನಟಿ ನಿವೇದಿತಾ(2013) ಆಯ್ಕೆಯಾಗಿದ್ದಾರೆ.


Click it and Unblock the Notifications











